ಮಂಗಳೂರು ಡಿಸಿಪಿ ಹರಿರಾಮ್ ಶಂಕರ್ ಹಾಸನ ಎಸ್ಪಿಯಾಗಿ ವರ್ಗಾವಣೆ
ಮಂಗಳೂರು, ಜೂ.27: ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಡಿಸಿಪಿಯಾಗಿ ಕಳೆದ ಸುಮಾರು ಎರಡು ವರ್ಷಗಳಿಂದ ಕರ್ತವ್ಯದಲ್ಲಿರುವ ಯುವ ಅಧಿಕಾರಿ ಹರಿರಾಂ ಶಂಕರ್ ಅವರನ್ನು ಹಾಸನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಯಾಗಿ ವರ್ಗಾವಣೆ ಮಾಡಲಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ಪೊಲೀಸ್ ತಂಡ ಮಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜತೆಗೆ, ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯನ್ನೂ ಸಾಕಷ್ಟು ಚುರುಕುಗೊಳಿಸಿದ್ದರು. ಜನಾನುರಾಗಿ ಅಧಿಕಾರಿಯೆಂಬ ಹೆಗ್ಗಳಿಕೆಯೂ ಹರಿರಾಂ ಶಂಕರ್ ಅವರಿಗಿದೆ.
ಇದೇವೇಳೆ ಬಂಟ್ವಾಳ ಉಪ ವಲಯದ ಎಎಸ್ಪಿ (ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ)ಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಾಂಶು ರಜಪೂತ್ ಅವರನ್ನು ಹಮ್ನಾಬಾದ್ ಉಪ ವಲಯದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಇಬ್ಬರಿಗೂ ತಕ್ಷಣದಿಂದಲೇ ಜಾರಿಯಾಗುವಂತೆ ವರ್ಗಾವಣೆಯ ಆದೇಶವನ್ನು ನೀಡಲಾಗಿದೆ.
ಇದನ್ನೂ ಓದಿ; 16 ಐಪಿಎಸ್ ಅಧಿಕಾರಿಗಳ ವರ್ಗಾವಣೆ