ಉಳ್ಳಾಲ; ಹಡಗು ಮುಳುಗಡೆಯಾದ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಸೂಚನೆ

Update: 2022-06-27 15:48 GMT

ಮಂಗಳೂರು : ಉಳ್ಳಾಲ ಸಮೀಪದ ಬಟ್ಟಪಾಡಿಯ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿರುವ ಹಡಗು ‘ಪ್ರಿನ್ಸೆಸ್ ಮಿರಾಲ್’ನಿಂದ ತೈಲ ಸೋರಿಕೆ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ಕೋಸ್ಟ್‌ಗಾರ್ಡ್‌ನ ಮಿನಿಜೆಟ್ ಮತ್ತು ನೌಕೆಗಳು ಕಟ್ಟೆಚ್ಚರ ಮುಂದುವರಿಸಿವೆ. ಅಲ್ಲದೆ ಹಡಗು ಮುಳುಗಿರುವ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ನೋಡಿಕೊಳ್ಳಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಜರಾತ್‌ನಿಂದ ಈಗಾಗಲೇ ಬಂದಿರುವ ಮಾಲಿನ್ಯ ನಿಯಂತ್ರಣ ನೌಕೆ ‘ಸಮುದ್ರ ಪಾವಕ್’ ಮತ್ತು ಇತರ ನೌಕೆಗಳ ಸಹಾಯದಿಂದ ನೌಕೆಯಲ್ಲಿರುವ 150 ಮೆ.ಟನ್‌ನಷ್ಟು ತೈಲವನ್ನು ಹೊರತೆಗೆಯುವ ಪ್ರಯತ್ನ ಮುಂದುವರಿದಿದೆ.

ಅನಿರೀಕ್ಷಿತವಾಗಿ ತೈಲ ಸೋರಿಕೆಯಾದರೆ ನದಿ ಪ್ರವೇಶಿಸದಂತೆ ತಡೆಗಟ್ಟುವ ಉದ್ದೇಶದಿಂದ ನೇತ್ರಾವತಿ ನದಿ ಅಳಿವೆ ಪ್ರದೇಶದಲ್ಲಿ ಇಂಟರ್ ಟೈಡಲ್ ಬೂಮ್‌ಗಳನ್ನು ಅಳವಡಿಸಲಾಗಿದೆ. ತೈಲ ಸೋರಿಕೆಯಾದರೆ ಪರಿಸರಕ್ಕೆ ಹಾನಿಯಾಗದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮೂರು ದಿನಗಳಿಂದ ಉಳ್ಳಾಲ, ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗಿತ್ತು. ಸೋಮವಾರವೂ ಈ ಅಣಕು ಕಾರ್ಯಾಚರಣೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News