ಧರ್ಮದ ಹೆಸರಲ್ಲಿ ನಡೆಯುವ ಹಿಂಸಾಚಾರ ದೇಶಕ್ಕೆ ಬಂದ ಗಂಡಾಂತರ: ಪ್ರೊ. ಕೆ ಫಣಿರಾಜ್

Update: 2022-06-27 16:17 GMT

ಮಂಗಳೂರು: ನಮ್ಮ ಮನೆಯ ಮಕ್ಕಳ್ಳನ್ನು ಯಾರೊ ಹೊರಗಿನವರು ಬಂದು ಕೊಂದಿರುವುದಲ್ಲ. ನಮ್ಮ ಊರಿನವರೇ ಕೊಂದಿದ್ದಾರೆ. ನಮ್ಮ ಮನೆಯ ಮಕ್ಕಳ್ಳನ್ನು ಹಿಂದುಳಿದ ವರ್ಗದ ಬಡವರ ಮಕ್ಕಳೇ ಕೊಲ್ಲುತ್ತಾರೆ ಎಂದಾದರೆ ಆ ದೇಶಕ್ಕೆ ಗಂಡಾಂತರ ಬಂದಿದೆ ಎಂದರ್ಥವೆಂದು ಚಿಂತಕ ಪ್ರೊ.ಕೆ. ಫಣಿರಾಜ್ ಹೇಳಿದರು.

ಡಿವೈಎಫ್‌ಐ ಮುಖಂಡ ಶ್ರೀನಿವಾಸ್ ಬಜಾಲ್‌ರ 20ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ನಗರ ಹೊರವಲಯದ ಬಜಾಲ್ ಪಕ್ಕಲಡ್ಕ ಮೈದಾನದಲ್ಲಿ ರವಿವಾರ ನಡೆದ ‘ಕೋಮುವಾದಿ ವಿರೋಧಿ ಅಭಿಯಾನ ಸಾಮರಸ್ಯ ಸಭೆ’ಯಲ್ಲಿ ಅವರು ಮಾತನಾಡಿದರು.

ಶ್ರ್ರೀನಿವಾಸ್ ಬಜಾಲ್ ಬಡ ಕುಟುಂಬದಿಂದ ಬಂದವರು. ಸಮ ಸಮಾಜವನ್ನು ಕಟ್ಟಲು ಪ್ರಯತ್ನ ಮಾಡಿದವರು. ಅವರು ಯಾವತ್ತೂ ಇನ್ನೊಬ್ಬರಿಗೆ ಕೈ ಎತ್ತಿ ಹೊಡೆಯಿರಿ ಎಂದು ಹೇಳಿದವರಲ್ಲ. ಮತೀಯ ಶಕ್ತಿಗಳಿಗೆ ಬಲಿಯಾಗುತ್ತಿದ್ದ ಯುವ ಜನರಲ್ಲಿ ಐಕ್ಯತೆಯ ವಿಚಾರವನ್ನು ಪ್ರಚಾರ ಮಾಡುತ್ತಿದ್ದರು. ಇದನ್ನು ಸಹಿಸದ ಮತೀಯ ಶಕ್ತಿಗಳು, ಹಿಂದುತ್ವವಾದಿ ರಾಜಕೀಯ ಶಕ್ತಿಗಳು ಶ್ರೀನಿವಾಸ್ ಬಜಾಲ್‌ರನ್ನು ಕೊಂದರು ಎಂದ ಕೆ. ಪಣಿರಾಜ್ ಅವರು ಡಾ.ನರೇಂದ್ರ ದಾಬೋಲ್ಕರ್ ‘ಯಾರು ನಿಮ್ಮನ್ನು ಮೌಡ್ಯದ ವಿಷಯಕ್ಕೆ ಬಲಿ ಬೀಳಿಸುತ್ತಾರೋ ಅವರನ್ನು ಪ್ರಶ್ನೆ ಮಾಡಿ’ ಎಂದರು. ಆದರೆ ಇದರಿಂದಾಗಿ ಜನರು ವಿವೇಕವಂತರಾಗಬಾರದು ಎಂದು ಆ ವರ್ಗ ದಾಬೋಲ್ಕರ್ ಅವರನ್ನೇ ಕೊಂದರು. ಶಿವಾಜಿ ಎಂದರೆ ಯಾರು ಎಂಬ ವಿಚಾರವನ್ನು ಹೇಳಿದವರು ಗೊವಿಂದ ಪನ್ಸಾರೆ. ಅದಕ್ಕಾಗಿ ಅವರನ್ನು ಕೊಂದರು. ಹಾಗೆಯೇ ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಅವರನ್ನು ಕೂಡಾ ಕೋಮುವಾದಿಗಳು ಬಲಿ ಪಡೆದರು ಎಂದು ಹೇಳಿದರು.

ಈ ಫ್ಯಾಸಿಸ್ಟ್ ಸರಕಾರವು ತನ್ನ ನೀತಿಗಳನ್ನು ಪ್ರಶ್ನೆ ಮಾಡುವ ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಬಂಧನ ಮಾಡುತ್ತಿವೆ.  ಈಗ ತೀಸ್ತಾ ಸೆತಲ್ವಾಡ್, ಆರ್‌ಬಿ ಶ್ರೀಕುಮಾರ್ ವಿರುದ್ಧವೂ ಯುಎಪಿಎ ಕಾಯ್ದೆ ಹಾಕಲು ಮುಂದಾಗಿದ್ದಾರೆ. ಇಂತಹ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಇನ್ನಷ್ಟು ಪ್ರಬಲ ಚಳುವಳಿಗಳು ನಡೆಯಬೇಕಾಗಿದೆ ಎಂದು ಪ್ರೊ. ಕೆ. ಫಣಿರಾಜ್ ಕರೆ ನೀಡಿದರು.

ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸುನೀಲ್ ಕುಮಾರ್ ಬಜಾಲ್, ಸಂತೊಷ್ ಬಜಾಲ್, ಕಾರ್ಮಿಕ ಮುಖಂಡರಾದ ಸುಕುಮಾರ್, ಸಾಮರಸ್ಯ ಮಂಗಳೂರು ಸಂಚಾಲಕಿ ಮಂಜುಳಾ ನಾಯಕ್ ಮಾತನಾಡಿದರು. ವೇದಿಕೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಡಿವೈಎಫ್‌ಐ ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಕಾರ್ಮಿಕ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ , ಡಿವೈಎಫ್‌ಐ ನಗರ ಮುಖಂಡ ಜಗದೀಶ್ ಬಜಾಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ದೀಪಕ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಧಿರಾಜ್ ಬಜಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News