ಅಗ್ನಿಪಥ ಎಂಬ ಆಳವಾದ ಪ್ರಪಾತ

Update: 2022-06-28 09:50 GMT

ಪ್ರಸ್ತುತ ವಿವಾದವನ್ನು ವಿಶ್ಲೇಷಿಸುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ, ರಕ್ಷಣಾ ಇಲಾಖೆ ಮತ್ತು ನಾಗರಿಕ ಸಮಾಜ ಈ ಮೂರು ಘಟಕಗಳು ಮುಖ್ಯವಾಗುತ್ತವೆ. ಆದರೆ ಕೇಂದ್ರ ಸರಕಾರವು ಈ ಅಗ್ನಿಪಥ್ ಯೋಜನೆಯನ್ನು ರೂಪಿಸುವಾಗ ಇದರ ಹಕ್ಕುದಾರರೊಂದಿಗೆ, ವಿಪಕ್ಷಗಳೊಂದಿಗೆ, ನಿವೃತ್ತ ಸೇನಾಧಿಕಾರಿಗಳೊಂದಿಗೆ ಯಾವುದೇ ಬಗೆಯ ಸಮಾಲೋಚನೆ ನಡೆಸಿದಂತೆ ಕಂಡುಬರುವುದಿಲ್ಲ. ರಕ್ಷಣಾ ಇಲಾಖೆಯ ಮೂವರು ಮುಖ್ಯಸ್ಥರೊಂದಿಗೆ ಚರ್ಚಿಸಿದ ದಾಖಲೆಗಳಿಲ್ಲ. ಮೋದಿ ಕ್ಯಾಬಿನೆಟ್‌ನಲ್ಲಿ ಸಚಿವರಾಗಿರುವ ನಿವೃತ್ತ ಸೇನೆ ಮುಖ್ಯಸ್ಥರಿಗೂ ಈ ಕುರಿತು ಮಾಹಿತಿ ಇರಲಿಲ್ಲ. ಸಂಸತ್ತಿನಲ್ಲಿ ಚರ್ಚೆಯಾಗಲಿಲ್ಲ. ಸಂಸತ್ತಿನ ರಕ್ಷಣಾ ಇಲಾಖೆಯ ವ್ಯವಹಾರಗಳ ಸಮಿತಿಯ ಮುಂದೆ ಸಹ ಮಂಡಿಸಲಿಲ್ಲ. ನೋಟು ರದ್ದತಿಯಂತೆ ಈ ಸಂದರ್ಭದಲ್ಲಿಯೂ ದಿಢೀರನೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಂತಿದೆ.


ಪೀಠಿಕೆ

ಒಂದು ಸರಕಾರ ತನ್ನ ಅಧಿಕಾರದ ಅವಧಿಯಲ್ಲಿ ಬಹು ಬಗೆಯಲ್ಲಿ ಪ್ರಮಾದಗಳನ್ನು ಎಸಗಿರುತ್ತದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರಕಾರವೂ ಇದಕ್ಕೆ ಹೊರತಲ್ಲ. ಒಮ್ಮೆ ಎಡವಿದವರು ತಾನು ಎಡವಿದ್ದೇನೆ ಎಂದು ಗ್ರಹಿಸದೆ ಹೋದರೆ, ಗ್ರಹಿಸಿಯೂ ಭಂಡತನದಿಂದ ನಿರ್ಲಕ್ಷಿಸಿದರೆ, ಪ್ರಜ್ಞಾವಂತರ ಹಿತವಚನಗಳನ್ನು ಆಲಿಸದೆ ಹೋದರೆ ಪದೇ ಪದೇ ಎಡವುತ್ತಲೇ ಇರುತ್ತಾರೆ ಮತ್ತು ಈ ಪ್ರಮಾದಗಳಿಗೆ ದೇಶ ಮತ್ತು ಪ್ರಜೆಗಳು ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಕಳೆದ ಎಂಟು ವರ್ಷಗಳ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತಮ ಉದಾಹರಣೆ. ಸಂಘ ಪರಿವಾರದ ‘ಹಿಂದುತ್ವ-ಬ್ರಾಹ್ಮಣವಾದ’ ಸಿದ್ಧಾಂತದ ಕಾರಣದಿಂದ ಇಂದು ದೇಶದಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿರುವ ಮುಸ್ಲಿಮ್ ವಿರೋಧಿ ದ್ವೇಷದ ವಾತಾವರಣ, ಜಾತಿ ದೌರ್ಜನ್ಯ, ಅಭಿವ್ಯಕ್ತಿ ಸ್ವಾತಂತ್ರದ ದಮನ, ಮಾಧ್ಯಮಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಹರಣ, ಸಾರ್ವಜನಿಕ ಸಂಸ್ಥೆಗಳ ದುರ್ಬಲಗೊಳಿಸುವಿಕೆ, ನೋಟು ರದ್ದತಿಯಂತಹ ತಪ್ಪುನೀತಿಯಿಂದುಂಟಾದ ಆರ್ಥಿಕ ಹಿಂಜರಿತ, ನಿರುದ್ಯೋಗ, ಕಾಶ್ಮೀರದ ರಾಜ್ಯ ಸ್ಥಾನಮಾನ ರದ್ದತಿ, EWS ಶೇ. 10, ರೈತರಿಗೆ ವಂಚಿಸುವ ಕೃಷಿ ಮಸೂದೆಗಳು, ರಫೇಲ್ ಹಗರಣ, ಯಾವುದೇ ಗುರಿಯಿಲ್ಲದ ವಿದೇಶಾಂಗ ನೀತಿ ಹೀಗೆ ದೇಶವನ್ನು ಸಾಮಾಜಿಕ-ಆರ್ಥಿಕ-ರಾಜಕೀಯ ದಿವಾಳಿತನದ ಅಂಚಿಗೆ ದೂಡಿದ ಈ ವಿನಾಶಕಾರಿ ನೀತಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ತನ್ನಿಂದಾದ ಈ ಪ್ರಮಾದಗಳನ್ನು ಅರಿತು, ಆ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾಗಿದ್ದ ಈ ಮೋದಿ ಸರಕಾರ ಅಂತಹ ಯಾವುದೇ ಲಕ್ಷಣಗಳನ್ನು ತೋರಿಸದೆ ‘ಅಗ್ನಿಪಥ್’ ಎನ್ನುವ ಅವಾಂತರಕಾರಿ ಯೋಜನೆ ಮೂಲಕ ಮತ್ತೊಂದು ಪ್ರಮಾದಕ್ಕೆ ಮುಂದಾಗಿದೆ.

ನಾಲ್ಕು ವರ್ಷಗಳ ಅಲ್ಪಕಾಲ ಅವಧಿಗೆ, ಗುತ್ತಿಗೆ ಆಧಾರದಲ್ಲಿ 2022-23ರ ಹಣಕಾಸಿನ ವರ್ಷಕ್ಕೆ ರಕ್ಷಣಾ ಇಲಾಖೆಗೆ, ಅಧಿಕಾರಿ ರ್ಯಾಂಕ್‌ಗಿಂತ ಕೆಳಗಿನ ಹುದ್ದೆಗಳಿಗೆ 45,000 ‘ತಾತ್ಕಾಲಿಕ ಸೈನಿಕರನ್ನು’ ನೇಮಿಸಿಕೊಳ್ಳುವುದು ಇಡೀ ಯೋಜನೆಯ ಒಂದು ಸಾಲಿನ ಪರಿಚಯ. ಈ ಅಲ್ಪಾವಧಿ ಉದ್ಯೋಗ ಯೋಜನೆಯನ್ನು ‘ಕರ್ತವ್ಯದ ಪ್ರವಾಸ’ ಎಂದೂ ಬಣ್ಣಿಸಲಾಗಿದೆ. ಸೇನೆಯ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ದೇಶಭಕ್ತಿ ಮತ್ತು ಸೇನೆಯಲ್ಲಿ ಕೆಲಸ ಮಾಡುವ ಮೋಹಕ್ಕಾಗಿ ಸೇರುತ್ತಾರೆ, ಉದ್ಯೋಗಕ್ಕಾಗಿ ಅಲ್ಲ ಎಂದು ಹೇಳಿದ್ದಾರೆ. ಇದು ಅರ್ಧ ಸತ್ಯ ಮಾತ್ರ. ದೇಶದ ಯುವಜನತೆ ಅದರಲ್ಲಿಯೂ ಉತ್ತರ ಭಾರತದವರು ತಮ್ಮ ಕುಟುಂಬದಲ್ಲಿನ ಬಡತನ ಮತ್ತು ಹಸಿವಿನಿಂದ ಹೊರಬರಲು ಮತ್ತು ಮುಖ್ಯವಾಗಿ ಖಾಯಂ ಉದ್ಯೋಗದ ಕಾರಣಕ್ಕಾಗಿ ಸೇನೆ ಸೇರಲು ಬಯಸುತ್ತಾರೆ. ಅನುಕೂಲವಂತ ಕುಟುಂಬಗಳ ತರುಣರು ಸೇನೆಗೆ ಸೇರಿಕೊಂಡಿರುವುದು ತಂಬಾ ಕಡಿಮೆ. ಇದರ ಜೊತೆಗೆ ಸೇನೆಯಲ್ಲಿನ ಉದ್ಯೋಗಿ ಎಂಬುದು ಸ್ವಂತ ಊರಿನಲ್ಲಿ ಒಂದು ಬಗೆಯ ಗೌರವ ತಂದುಕೊಡುತ್ತದೆ. ಖಾಯಂ ಪಿಂಚಣಿ ಸೌಲಭ್ಯವಿರುವ 17 ವರ್ಷಗಳ ಉದ್ಯೋಗ ಎನ್ನುವ ನಂಬಿಕೆಯೇ ಈ ಯುವಕರಿಗೆ ಆಶಾಕಿರಣವಾಗಿತ್ತು. ಇದಕ್ಕಾಗಿ ದಿನನಿತ್ಯ ಕಠಿಣ ಅಭ್ಯಾಸದಲ್ಲಿ ತೊಡಗಿರುತ್ತಾರೆ. ಕೋಚಿಂಗ್ ಕೇಂದ್ರಗಳಿಗೆ ಸಾಲ ಮಾಡಿ ಹಣ ತುಂಬುತ್ತಾರೆ. ಮುಂದಿನ ಭವಿಷ್ಯದ ಅನೇಕ ಕನಸುಗಳನ್ನು ಕಂಡಿರುವ ಈ ಯುವಜನತೆಗೆ ಸೇನೆಯ ಉದ್ಯೋಗ ಅಲ್ಪಾವಧಿ ಮಾತ್ರ ಮತ್ತು ಅದು ಗುತ್ತಿಗೆ ಪದ್ಧತಿ ಆಧರಿಸಿದೆ ಎನ್ನುವ ಸಂಗತಿ ಆಘಾತವನ್ನುಂಟು ಮಾಡುತ್ತದೆ. ಅವರ ಪ್ರತಿಭಟನೆಗೆ ಅರ್ಥವಿದೆ. ಅದು ಹಿಂಸಾತ್ಮಕ ರೀತಿಯಲ್ಲಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಎಲ್ಲವನ್ನೂ ಬಳಸಿ ಬಿಸಾಡುವ ಗುಣವುಳ್ಳ ಸಂಘ ಪರಿವಾರವು ಈ ಯುವಜನತೆಯ ಭವಿಷ್ಯದೊಂದಿಗೆ ಆಟವಾಡುತ್ತಿರುವುದಂತೂ ದಿಟ.

ಪ್ರಸ್ತುತ ವಿವಾದವನ್ನು ವಿಶ್ಲೇಷಿಸುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರ, ರಕ್ಷಣಾ ಇಲಾಖೆ ಮತ್ತು ನಾಗರಿಕ ಸಮಾಜ ಈ ಮೂರು ಘಟಕಗಳು ಮುಖ್ಯವಾಗುತ್ತವೆ. ಆದರೆ ಕೇಂದ್ರ ಸರಕಾರವು ಈ ಅಗ್ನಿಪಥ್ ಯೋಜನೆಯನ್ನು ರೂಪಿಸುವಾಗ ಇದರ ಹಕ್ಕುದಾರರೊಂದಿಗೆ, ವಿಪಕ್ಷಗಳೊಂದಿಗೆ, ನಿವೃತ್ತ ಸೇನಾಧಿಕಾರಿಗಳೊಂದಿಗೆ ಯಾವುದೇ ಬಗೆಯ ಸಮಾಲೋಚನೆ ನಡೆಸಿದಂತೆ ಕಂಡುಬರುವುದಿಲ್ಲ. ರಕ್ಷಣಾ ಇಲಾಖೆಯ ಮೂವರು ಮುಖ್ಯಸ್ಥರೊಂದಿಗೆ ಚರ್ಚಿಸಿದ ದಾಖಲೆಗಳಿಲ್ಲ. ಮೋದಿ ಕ್ಯಾಬಿನೆಟ್‌ನಲ್ಲಿ ಸಚಿವರಾಗಿರುವ ನಿವೃತ್ತ ಸೇನೆ ಮುಖ್ಯಸ್ಥರಿಗೂ ಈ ಕುರಿತು ಮಾಹಿತಿ ಇರಲಿಲ್ಲ. ಸಂಸತ್ತಿನಲ್ಲಿ ಚರ್ಚೆಯಾಗಲಿಲ್ಲ. ಸಂಸತ್ತಿನ ರಕ್ಷಣಾ ಇಲಾಖೆಯ ವ್ಯವಹಾರಗಳ ಸಮಿತಿಯ ಮುಂದೆ ಸಹ ಮಂಡಿಸಲಿಲ್ಲ. ನೋಟು ರದ್ದತಿಯಂತೆ ಈ ಸಂದರ್ಭದಲ್ಲಿಯೂ ದಿಢೀರನೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಂತಿದೆ. ಕನಿಷ್ಠ ಪ್ರಯೋಗಾತ್ಮಕವಾಗಿ ಪರೀಕ್ಷೆ ನಡೆಸುವ ಸಾಮಾನ್ಯ ತಿಳುವಳಿಕೆಯೂ ಇಲ್ಲದಂತಾಗಿದೆ. ಯಾವುದೇ ಘೋಷಣೆಗಳಿಲ್ಲದೆ ಒಂದು ಪೈಲಟ್ ಯೋಜನೆಯಂತೆ ಇದನ್ನು ಜಾರಿಗೊಳಿಸಿದ್ದರೆ ಈ ಮಟ್ಟದ ಪ್ರತಿಭಟನೆಯಾಗುತ್ತಿರಲಿಲ್ಲ ಎಂದು ನಿವೃತ್ತ ಸೇನಾ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಇನ್ನು 2014ಕ್ಕೂ ಮುಂಚೆ ಯಾವುದೇ ಬಗೆಯ ರಾಜಕೀಯ ವಿವಾದಗಳಿಂದ ದೂರವಿದ್ದ, ಸ್ವಾಯತ್ತತೆ ಹೊಂದಿದ್ದ ರಕ್ಷಣಾ ಇಲಾಖೆ ಕಳೆದ ಎಂಟು ವರ್ಷಗಳಿಂದ ಮೋದಿ ನೇತೃತ್ವದ ರಾಜಕಾರಣಕ್ಕೆ ಬಲಿಪಶುವಾಗಿರುವುದು ದುರಂತದ ಸಂಗತಿ. ರಾಜಕೀಯ ಉದ್ದೇಶದ, ಬಿಜೆಪಿ ಪಕ್ಷದ ಹಿತಾಸಕ್ತಿಯುಳ್ಳ ಅಗ್ನಿಪಥ್ ಯೋಜನೆಯನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವಂತಹ ಅಸಹಾಯಕತೆಗೆ ತಲುಪಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನು ನಾಗರಿಕ ಸಮಾಜ ಸಂಪೂರ್ಣವಾಗಿ ಹೊಣೆಗೇಡಿತನದಿಂದ ವರ್ತಿಸುತ್ತಿದೆ. ಈ ಮುಂಚೆ ಪ್ರತೀ ವರ್ಷ ರಕ್ಷಣಾ ವಲಯದಿಂದ 50,000 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಆದರೆ ಕೋವಿಡ್ ಕಾಯಿಲೆಯ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ (2020-21, 2021-22) ಯಾವುದೇ ಬಗೆಯ ನೇಮಕಾತಿ ನಡೆಯಲಿಲ್ಲ.

ಈ ಬಾರಿ ಸೈನಿಕರು ಮತ್ತು ಅಧಿಕಾರಿ ಹುದ್ದೆಗಳಿಗಿಂತ ಕೆಳಗಿನ ಹುದ್ದೆಗಳಿಗೆ 45,000 ನೇಮಕಾತಿಗಳನ್ನು ಮಾಡಿಕೊಳ್ಳುವ ಈ ಯೋಜನೆಗೆ 17.5-21 ವಯಸ್ಸಿನ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. (ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಯ ನಂತರ ಈಗಿನ ವರ್ಷಕ್ಕೆ ಮಾತ್ರ ಗರಿಷ್ಠ ಮಿತಿಯನ್ನು 23ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ವರ್ಷಕ್ಕೆ ಇದು ಅನ್ವಯಿಸುವುದಿಲ್ಲ) ಈ ‘ಅಗ್ನಿವೀರ’ರಿಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಮೊದಲ ಆರು ತಿಂಗಳಿಗೆ ಮಾತ್ರ ತರಬೇತಿ ಕೊಡಲಾಗುತ್ತದೆ. ಮಿಕ್ಕ ಮೂರೂವರೆ ವರ್ಷಗಳಲ್ಲಿ ಅವರನ್ನು ನೇರವಾಗಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ನಂತರ ಅರ್ಹ ಶೇ.25 ಪ್ರಮಾಣದ ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಮುಂದುವರಿಸಲಾಗುತ್ತದೆ. ಆದರೆ ಈ ಅರ್ಹತೆಯನ್ನು ನಿರ್ಧರಿಸುವ ಮಾನದಂಡಗಳೇನು? ಈ ರೀತಿಯ ನೀತಿ ನಿಯಮಾವಳಿಗಳು ಸೇವೆಯಲ್ಲಿರುವ ಯುವಜನತೆಯಲ್ಲಿ ತಾರತಮ್ಯವನ್ನು ಬಿತ್ತುವುದಿಲ್ಲವೇ? ಅವರ ನಡುವೆ ಒಡಕುಂಟು ಮಾಡುವುದಿಲ್ಲವೇ? ತಾನು ಅನರ್ಹ ಎನ್ನುವ ಹಣೆಪಟ್ಟಿಯನ್ನು ಹೊತ್ತುಕೊಂಡು ಸೇವೆಯಿಂದ ಬಿಡುಗಡೆಗೊಂಡ ಮಿಕ್ಕ ಶೇ.75 ಪ್ರಮಾಣದ 33,750 ಅಗ್ನಿವೀರರು ಯಾವುದೇ ವಿದ್ಯಾರ್ಹತೆಯಿಲ್ಲದೆ ಉದ್ಯೋಗವನ್ನು ಅರಸಿ ದೇಶದಾದ್ಯಂತ ಅಲೆದಾಡಬೇಕಾಗುತ್ತದೆ. ಇದು ಯಾವ ಕೇಡಿನ ಮುನ್ಸೂಚನೆಯಾಗಿದೆ? ಅಗ್ನಿಪಥ್ ಯೋಜನೆ ಎನ್ನುವ ಖೆಡ್ಡಾ
ಆದರೆ ಈ ಖೆಡ್ಡಾವನ್ನು ಅಗೆಯತ್ತಾ ಹೋದಂತೆ ಅಸ್ಥಿಪಂಜರದ ವೂಳೆಗಳು ಉದುರುತ್ತಾ ಹೋಗುತ್ತವೆ. ಮೋದಿ ಸರಕಾರದ ಪ್ರತೀ ಘೋಷಣೆಯಂತೆ ಇದರ ಹಣೆಬರಹವೂ ಮರೆ ಮೋಸದ ಪಿತೂರಿಯಾಗಿದೆ. ಕೆಡುಕನ್ನು ಮಾತ್ರ ತರಬಲ್ಲ ಈ ವಂಚನೆಯನ್ನು ಅರಿಯಲು ಈ ‘ದೇಶಸೇವೆ ಯೋಜನೆ’ಯ ಮುಖವಾಡವನ್ನು ಎಳೆ ಎಳೆಯಾಗಿ ಕಳಚಬೇಕಾಗುತ್ತದೆ

1. ನಾಲ್ಕು ವರ್ಷದ ನಂತರ ಸೇವಾನಿಧಿಯಿಂದ ಅಗ್ನಿವೀರರಿಗೆ ಉಳಿತಾಯದ ಮೊತ್ತವಾಗಿ 10 ಲಕ್ಷ ಪ್ಯಾಕೇಜ್ ದೊರಕುತ್ತದೆ ಎಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಣ್ಣ ತುಂಬಿ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಹತ್ತು ಲಕ್ಷದಲ್ಲಿನ ಅರ್ಧ ಮೊತ್ತವಾದ 5 ಲಕ್ಷ ಈ ಅಗ್ನಿವೀರರ ವೇತನದಿಂದ ಸೇವಾ ನಿಧಿಗೆ ಪಾವತಿಸಿದ ಉಳಿತಾಯದ ಮೊತ್ತ ಎನ್ನುವ ಸತ್ಯವನ್ನು ಮರೆ ಮಾಚುತ್ತಾರೆ. ತಮ್ಮದೇ ಹಣವನ್ನು ನಾಲ್ಕು ವರ್ಷಗಳ ನಂತರ ಮರಳಿ ಪಡೆಯುವ ಅಗ್ನಿವೀರರಿಗೆ ಇದು ಸರಕಾರದ ಪ್ಯಾಕೇಜ್ ಎಂದು ಮರೆಮೋಸ ಮಾಡುತ್ತಿರುವುದು ನೇರವಾದ ವಂಚನೆಯಾಗಿದೆ.

ಅಂಗವಿಕಲತೆ ಪರಿಹಾರ ಕೊಡುತ್ತೇವೆ ಎಂದು ಹೇಳುಕೊಳ್ಳುತ್ತಾರೆ. ಆದರೆ ಇದು ಅಂಗವಿಕಲತೆ ಪಿಂಚಣಿಯಲ್ಲ. ಇದು ಹೇಗೆ ವೇತನ ಪ್ಯಾಕೇಜ್ ಅಡಿಯಲ್ಲಿ ಬರುತ್ತದೆ? ಇದು ಒಂದು ಬಾರಿ ಮಾತ್ರ ನೀಡುವ ಪರಿಹಾರ ಮಾತ್ರ. ಈ ಅಲ್ಪಾವಧಿ ಯೋಜನೆಯ ಬಲು ದೊಡ್ಡ ದುರ್ಬಲ ಕೊಂಡಿಯೆಂದರೆ ಅಗ್ನವೀರರಿಗೆ ಯಾವುದೇ ಬಗೆಯ ಪಿಂಚಣಿ, ಗ್ರಾಚ್ಯುಟಿ ಸೌಲಭ್ಯಗಳಿರು ವುದಿಲ್ಲ. ಈ ಅಂಶ ಯುವಜನತೆಗೆ ಆತಂಕವನ್ನುಂಟು ಮಾಡಿದೆ. ಪಿಂಚಣಿ ಎಂಬುದೇ ಸರಕಾರದ ಖಜಾನೆಗೆ ಹೊರೆಯಾಗಿರುವ ಬಾಬತ್ತು ಎನ್ನುವ ನೀತಿಯನ್ನು ಹೊಂದಿರುವ ಸರಕಾರ ಪಿಂಚಣಿಯ ವೆಚ್ಚದಿಂದ ಹೊರಬರಲು ಈ ಯೋಜನೆ ರೂಪಿಸಿರುವುದು ಎನ್ನುವುದನ್ನು ಅಲ್ಲಗೆಳೆಯುತ್ತಿದೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥರು ಸಹ ಇದನ್ನು ನಿರಾಕರಿಸಿದ್ದಾರೆ. ಆದರೆ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಎನ್ನುವ ಗಾದೆ ಮಾತು ಹಳೆಯದಾದರೂ ಇಂದಿಗೂ ಪ್ರಸ್ತುತ ಎಂಬುದು ಇವರು ಮರೆತಿರುವಂತಿದೆ. ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೆ.ಜೆ.ಸಿಂಗ್ ‘‘ಸರಕಾರವು ಈ ಅಗ್ನಿಪಥ್ ಯೋಜನೆ ಪಿಂಚಣಿ ಹೊರೆ ತಗ್ಗಿಸಲು ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ’’ ಎಂದು ಹೇಳಿದ್ದಾರೆ.

2. ಇಂದಿನ ದೇಶದ ಆರ್ಥಿಕ ದುಸ್ಥಿತಿಯ ಕಾರಣಕ್ಕೆ, ಅದನ್ನು ನಿಭಾಯಿಸಲು ವಿಫಲಗೊಂಡಿರುವುದಕ್ಕೆ ಗುಣಾತ್ಮಕವಾದ ಪರಿಹಾರಗಳನ್ನು ರೂಪಿಸುವಲ್ಲಿ ಮೋದಿ ಸರಕಾರ ವಿಫಲಗೊಂಡಿದೆ ಮತ್ತು ಅವರಿಗೆ ಆ ಸಾಮರ್ಥ್ಯವೂ ಇಲ್ಲ. ಆದರೆ ಇದನ್ನು ಮರೆ ಮಾಚಲು ಮತ್ತು ಸದ್ಯದ ಕಳವಳಕಾರಿ ಸ್ಥಿತಿಯಲ್ಲಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವುದಕ್ಕೆ ಈ ಅಗ್ನಿಪಥ್ ಎನ್ನುವ ವಾಮಮಾರ್ಗವನ್ನು ಕಂಡುಕೊಂಡಿದೆ. ಈ ಯೋಜನೆಗೆ ‘ದೇಶಸೇವೆ, ಕರ್ತವ್ಯದ ಪ್ರವಾಸ’ ಎನ್ನುವ ಸುಳ್ಳುಗಳ ಮುಖವಾಡ ತೊಡಿಸಲಾಗಿದೆ ಮತ್ತು ರಕ್ಷಣಾ ವಲಯದಲ್ಲಿನ ಅನಗತ್ಯ ವೆಚ್ಚವನ್ನು ಕಡಿತಗೊಳಿಸುವುದು ಸಹ ಈ ಯೋಜನೆಯ ಉದ್ದೇಶ ಎಂದು ಹೇಳಲಾಗಿದೆ. 20, ಜೂನ್ 2022ರ ‘ದ ಹಿಂದೂ’ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಅನುಸಾರ ರಕ್ಷಣಾ ಇಲಾಖೆಯಲ್ಲಿ 2014ರಲ್ಲಿ 24 ಲಕ್ಷ ಪಿಂಚಣಿದಾರರಿದ್ದರೆ 2021ರ ವೇಳೆಗೆ 34 ಲಕ್ಷ ಪಿಂಚಣಿದಾರರಿದ್ದಾರೆ. ಏಳು ವರ್ಷಗಳಲ್ಲಿ ಪಿಂಚಣಿದಾರರ ಸಂಖ್ಯೆ 10 ಲಕ್ಷ ಹೆಚ್ಚಾಗಿದೆ.

2020-21ರಲ್ಲಿ 1.33 ಲಕ್ಷ ಕೋಟಿ ಪಿಂಚಣಿಗೆ ವೆಚ್ಚವಾಗಿದೆ. ರಕ್ಷಣಾ ವಲಯದ ಬಜೆಟ್‌ನ ಶೇ.27 ಪ್ರಮಾಣದ ಮೊತ್ತವು ಅಲ್ಲಿನ ಪಿಂಚಣಿಗೋಸ್ಕರ ವೆಚ್ಚವಾಗುತ್ತದೆ. ಬಹು ಮುಖ್ಯ ಚಟುವಟಿಕೆಯಾದ ‘ಸಂಶೋಧನೆ ಮತ್ತು ಅಭಿವೃದ್ಧಿ’ (ಆರ್-ಡಿ)ಗೋಸ್ಕರ ಕೇವಲ ಶೇ.4ರಷ್ಟು ವೆಚ್ಚ ಮಾಡಲಾಗುತ್ತದೆ. ಶೇ. 69ರಷ್ಟು ರೆವಿನ್ಯೂ ವೆಚ್ಚವಾಗುತ್ತದೆ. ಕ್ಯಾಪಿಟಲ್‌ಗಾಗಿ ಶೇ.30.5ರಷ್ಟು ವೆಚ್ಚವಾಗುತ್ತದೆ. ಸಾರಾಂಶದಲ್ಲಿ ಈಗಿನ ಹಣಕಾಸು ಮುಗ್ಗಟ್ಟಿನ ಸಂದರ್ಭದಲ್ಲಿ ರಕ್ಷಣಾ ಇಲಾಖೆಯನ್ನು ಆಧುನೀಕರಣಗೊಳಿಸಲು, ಸಂಶೋಧನೆಗೋಸ್ಕರ, ಹೊಸ ಬಗೆಯ ಯುದ್ಧ ವಿಮಾನಗಳು ಮುಂತಾದವುಗಳ ಖರೀದಿಗೆ ಸರಕಾರದ ಬಳಿ ಹಣವಿಲ್ಲ. ಹೆಚ್ಚೂ ಕಡಿಮೆ ದಿವಾಳಿಯಾದಂತಹ ಪರಿಸ್ಥಿತಿಯಿದೆ. ಇದರಿಂದ ಹೊರಬರಲು ಮತ್ತು ಕೋಟ್ಯಂತರ ಮೊತ್ತದ ಪಿಂಚಣಿ ಮತ್ತು ಗ್ರಾಚ್ಯುಟಿ ಹಣವನ್ನು ಉಳಿಸಲು ಈ ಗುತ್ತಿಗೆ ಆಧಾರಿತ ಅಗ್ನಿಪಥ್‌ಎನ್ನುವ ದುಸ್ಸಾಹಸಕ್ಕೆ ಮುಂದಾಗಿದೆ. ಹೀಗಾಗಿಯೇ 5 ವರ್ಷ ಪೂರೈಸಿದರೆ ನಿಯಮಾನುಸಾರ ಗ್ರಾಚ್ಯುಟಿ ಕೊಡುವ ಕಟ್ಟುಪಾಡಿನಿಂದ ಹೊರಬರಲು ಸೇವಾ ಅವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಲಾಗಿದೆ.

3. ಭಾರತದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 2021ರ ಡಿಸೆಂಬರ್ ವೇಳೆಗೆ ಭಾರತದ ವಿದೇಶಿ ಸಾಲದ ಮೊತ್ತ ರೂ. 47.34 ಲಕ್ಷ ಕೋಟಿಯಷ್ಟಿದೆ. 2022-23ರ ಬಜೆಟ್‌ನಲ್ಲಿ ರೂ. 14.31 ಲಕ್ಷ ಕೋಟಿ ಸಾಲ ಮಾಡುವುದಾಗಿ ತಿಳಿಸಿದ್ದಾರೆ. 2019-20ರಲ್ಲಿ ರೂ. 7 ಲಕ್ಷ ಕೋಟಿ ಸಾಲ ಮಾಡಲಾಗಿತ್ತು. ಕೇವಲ ಮೂರು ವರ್ಷಗಳಲ್ಲಿ ರೂ. 7 ಲಕ್ಷ ಕೋಟಿಯಷ್ಟು ಹೆಚ್ಚುವರಿ ಸಾಲ ಮಾಡುವ ಹಂತಕ್ಕೆ ದೇಶ ತಲುಪಿದೆ ಎಂದರೆ ಸಮಸ್ಯೆಯ ಭೀಕರತೆಯನ್ನು ಅಂದಾಜಿಸಬಹುದು. 2021ರ ಅಂತ್ಯದ ವೇಳೆಗೆ ವಿದೇಶಿ ವಿನಿಮಯ ಮೀಸಲು ನಿಧಿ (ಫೋರೆಕ್ಸ್) ರೂ. 46.27 ಲಕ್ಷ ಕೋಟಿಯಿದೆ. ಆದರೆ ಆಪದ್ಧನಕ್ಕಿಂತಲೂ ಸಾಲದ ಮೊತ್ತ ರೂ. 1 ಲಕ್ಷ ಕೋಟಿಯಷ್ಟು ಹೆಚ್ಚಿದೆ. ಸಾಲದ ಮೊತ್ತ ಮತ್ತು ಮೀಸಲು ನಿಧಿ ನಡುವಿನ ಈ ಅಂತರ ಹೆಚ್ಚುತ್ತಾ ಹೋದರೆ ನಾವು ಶ್ರೀಲಂಕಾದ ಹತ್ತಿರದಲ್ಲಿದ್ದೇವೆ ಎಂದರ್ಥ. ಆದರೆ ಈ ಅಂತರವನ್ನು ಕಡಿಮೆಗೊಳಿಸುವ ಯಾವುದೇ ನೀತಿಗಳು ಮೋದಿ ಸರಕಾರದ ಬತ್ತಳಿಕೆಯಲ್ಲಿಲ್ಲ. ಆದಾಯದ ಶೇ.45ರಷ್ಟು ಮೊತ್ತವನ್ನು ಸಾಲದ ಮೇಲಿನ ಬಡ್ಡಿಯಾಗಿ ಪಾವತಿಸಲಾಗುತ್ತಿದೆ. ವಿದೇಶಿ ಸಾಲದ ಮೊತ್ತವು ಜಿಡಿಪಿಯ ಶೇ.20ರಷ್ಟಿದೆ. ರೂಪಾಯಿಯ ಮೌಲ್ಯ ಕುಸಿಯುತ್ತಿದೆ. ಹಣದುಬ್ಬರ ಶೇ. 7.6ರಷ್ಟಿದೆ. ಸಾರಾಂಶದಲ್ಲಿ ನಾವು ಮತ್ತು ನಮ್ಮ ದೇಶ ಆರ್ಥಿಕ ದಿವಾಳಿತನದ ಹಂತದಲ್ಲಿದೆೆ. ಇದು ಕಟು ವಾಸ್ತವ. ಈ ಎಲ್ಲಾ ವೈಫಲ್ಯಗಳನ್ನು ಮರೆಮಾಚಲು ಮತ್ತು ರಕ್ಷಣಾ ಇಲಾಖೆಯ ವೆಚ್ಚವನ್ನು ಕಡಿತಗೊಳಿಸಲು ಈ ಅಲ್ಪಾವಧಿ ಯೋಜನೆಯ ಬೆಲೂನನ್ನು ತೇಲಿ ಬಿಟ್ಟಿದ್ದಾರೆ. ಇಂತಹ ಕಪಟತನದ ರಾಜಕಾರಣದಿಂದ ದೇಶಕ್ಕೆ ಹಿನ್ನಡೆಯಾಗುವ ಪ್ರಮಾಣ ಊಹೆಗೂ ನಿಲುಕುವುದಿಲ್ಲ.

4. ನಾಲ್ಕು ವರ್ಷಗಳ ನಂತರ ನಿರುದ್ಯೋಗಿಗಳಾಗುವ 33,750 ಅಗ್ನಿವೀರರಿಗೆ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಯಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಶೇ.10 ಪ್ರಮಾಣದಲ್ಲಿ ಹುದ್ದೆಗಳನ್ನು ಮೀಸಲಿಡಲಾಗುತ್ತದೆ ಎಂದು ಸಹ ವರದಿಯಾಗಿದೆ. ಇದರ ಸಾಧ್ಯತೆಗಳ ಚರ್ಚೆ ಬಿಡಿ ತಮಾಷೆಯೆಂದರೆ ಇವೆಲ್ಲಾ ನಿಶ್ಚಿತ ಪಿಂಚಣಿರಹಿತ ಹುದ್ದೆಗಳಾಗಿವೆ

ಮುಖ್ಯವಾಗಿ ವಾಸ್ತವ ದತ್ತಾಂಶಗಳು ಸಂಪೂರ್ಣ ವ್ಯತಿರಿಕ್ತವಾಗಿದೆ. 10 ಸಾರ್ವಜನಿಕ ಉದ್ದಿಮೆಗಳು (ಪಿಎಸ್‌ಯು) ರಕ್ಷಣಾ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಗ್ರೂಪ್ ಡಿ ವಿಭಾಗದಲ್ಲಿ ಶೇ.20, ಗ್ರೂಪ್ ಸಿ ವಿಭಾಗದಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರು, ಸೇನಾ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಆದರೆ ಗ್ರೂಪ್ ಸಿ ಯ 10,84,705 ಉದ್ಯೋಗಿಗಳ ಪೈಕಿ ಕೇವಲ 13,976 ಸಂಖ್ಯೆಯಲ್ಲಿ, ಶೇ.1.3ರಷ್ಟು ಮಾತ್ರ ಸೇನಾ ನಿವೃತ್ತರಿದ್ದಾರೆ. ಗ್ರೂಪ್ ಡಿ ಯ 3,25,265 ಉದ್ಯೋಗಿಗಳ ಪೈಕಿ ಕೇವಲ 8,642 ಸಂಖ್ಯೆಯಲ್ಲಿ, ಶೇ.2.65ರಷ್ಟು ಮಾತ್ರ ಸೇನಾ ನಿವೃತ್ತರಿದ್ದಾರೆ. ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್ ಡಿ ವಿಭಾಗದಲ್ಲಿ ಶೇ. 24.5, ಗ್ರೂಪ್ ಸಿ ವಿಭಾಗದಲ್ಲಿ ಶೇ.14.5ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರು, ಸೇನಾ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಆದರೆ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.1.3 ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ.0.3ರಷ್ಟು ಮಾತ್ರ ನಿವೃತ್ತ ಸೇನಾ ಅಧಿಕಾರಿ, ಸೈನಿಕರಿದ್ದಾರೆ ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.3.45 ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ.2.71ರಷ್ಟು ಮಾತ್ರ ನಿವೃತ್ತ ಸೇನಾ ಅಧಿಕಾರಿ, ಸೈನಿಕರಿದ್ದಾರೆ. ಕೇಂದ್ರ ಅರೆ ಸೇನಾಪಡೆ (ಸಿಆರ್‌ಪಿಎಫ್)ಯ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.0.47 (8,81,397 ಉದ್ಯೋಗಿಗಳ ಪೈಕಿ ಕೇವಲ 4,146 ಮಾತ್ರ) ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇ.0.87ರಷ್ಟು (61,650 ಉದ್ಯೋಗಿಗಳ ಪೈಕಿ 539 ಮಾತ್ರ), ಗ್ರೂಪ್ ಎ ಹುದ್ದೆಗಳಲ್ಲಿ ಶೇ.2.20ರಷ್ಟು (76,681 ಉದ್ಯೋಗಿಗಳ ಪೈಕಿ 1,687 ಮಾತ್ರ) ನಿವೃತ್ತ ಸೇನಾ ಅಧಿಕಾರಿ, ಸೈನಿಕರಿದ್ದಾರೆ. ಈ ವಾಸ್ತವ ದತ್ತಾಂಶಗಳು ನಮ್ಮ ಮುಂದಿರುವಾಗ ಶೇ.75ರಷ್ಟಿರುವ ನಿರುದ್ಯೋಗಿ ಅಗ್ನಿವೀರರಿಗೆ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಯಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮೀಸಲಿಡುತ್ತೇವೆ ಎನ್ನುವ ಭರವಸೆಯನ್ನು ನಂಬಲು ಯಾರು ತಯಾರಿದ್ದಾರೆ? ಇದು ಕೇವಲ ಮೂಗಿಗೆ ತುಪ್ಪಸವರುವ ತಂತ್ರ ಎಂದು ಯುವಜನತೆಗೂ ಮನವರಿಕೆಯಾಗಿದೆ. ವಂಚನೆಗೊಳಗಾದ ಹತಾಶೆಯೇ ಈ ಪ್ರತಿಭಟನೆಗೆ ಕಾರಣವಾಗಿದೆ. ಜನರಿಂದ ಆಯ್ಕೆಯಾಗಿ, ತನ್ನ ಜನರಿಗೇ ಮೋಸ ಮಾಡುವ ಜನಪ್ರಿಯ ಸರಕಾರವನ್ನು ಹೊಂದಿರುವ ದೇಶಕ್ಕೆ ಕರಾಳತೆಯ ಕಬಂಧ ಬಾಹುಗಳಿಂದ ಬಿಡುಗಡೆ ಕಷ್ಟವಿದೆ

ಇನ್ನು ದೇಶದ ನಿರುದ್ಯೋಗದ ಪರಿಸ್ಥಿತಿಯೂ ಸುಧಾರಿಸಿಲ್ಲ. ಸಿಎಂಐಇ ವರದಿಯ ಅನುಸಾರ 19, ಜೂನ್ 2022ರ ವೇಳೆಗೆ ದೇಶದಲ್ಲಿ ನಿರುದ್ಯೋಗದ ಸಂಖ್ಯೆ 5.3 ಕೋಟಿಯಷ್ಟಿದೆ. ಶೇ.7.7ರಷ್ಟಿರುವ ನಿರುದ್ಯೋಗದ ಪ್ರಮಾಣದಲ್ಲಿ ನಗರ ಭಾಗದಲ್ಲಿ ಶೇ.7.51, ಗ್ರಾಮೀಣ ಭಾಗದಲ್ಲಿ ಶೇ.7.81ರಷ್ಟು ನಿರುದ್ಯೋಗವಿದೆ. 3.5 ಕೋಟಿ ಜನಸಂಖ್ಯೆ ಉದ್ಯೋಗ ಹುಡುಕಾಟದಲ್ಲಿದ್ದರೆ (ಮಹಿಳೆಯರು 80 ಲಕ್ಷ) 1.7 ಕೋಟಿ ಜನಸಂಖ್ಯೆ (ಮಹಿಳೆಯರು 90 ಲಕ್ಷ) ಉದ್ಯೋಗಕ್ಕೆ ಆಸಕ್ತಿ ತೋರುತ್ತಿಲ್ಲ. ಹರ್ಯಾಣದಲ್ಲಿ ಶೇ.24.6, ರಾಜಸ್ಥಾನದಲ್ಲಿ ಶೇ.22.2, ಬಿಹಾರ್‌ನಲ್ಲಿ ಶೇ.13.3, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.18.3, ಜಾರ್ಖಂಡ್‌ನಲ್ಲಿ ಶೇ. 13.1, ತ್ರಿಪುರಾದಲ್ಲಿ ಶೇ.17.4ರಷ್ಟು ನಿರುದ್ಯೋಗವಿದೆ. ಎಂಟು ವರ್ಷಗಳ ಹಿಂದೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದ ಮೋದಿಯವರಿಗೆ ಇಂದಿಗೂ ಅದನ್ನು ಈಡೇರಿಸಲು ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣವಾಗಿ ಸೋತಿರುವ ಮೋದಿ ಸರಕಾರವು ತನ್ನ ಈ ವಿಫಲತೆಯನ್ನು ಮರೆ ಮಾಚಲು ಮತ್ತು ತಾತ್ಕಾಲಿಕ ಪರಿಹಾರವಾಗಿ ಅಲ್ಪಾವಧಿ ಉದ್ಯೋಗ ಯೋಜನೆಯಾದ ‘ಅಗ್ನಿಪಥ’ವನ್ನು ಪ್ರಚಾರ ಮಾಡುತ್ತಿದೆ. ಆದರೆ ದೀರ್ಘಾವದಿಯಲ್ಲಿ ಇದು ಮತ್ತಷ್ಟು ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಜೊತೆಗೆ ಹತಾಶರಾದ, ಮಾನಸಿಕವಾಗಿ ವಿಕ್ಷಿಪ್ತಗೊಂಡಿರುವ ಯುವಸ�

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News