ಕೋಟ: ಕಾಡುಪ್ರಾಣಿ ಬೇಟೆ: ಐವರು ಆರೋಪಿಗಳ ಬಂಧನ
Update: 2022-06-28 17:05 GMT
ಕೋಟ, ಜೂ.28: ಶಿಕಾರಿ ಮಾಡಿದ ಬರ್ಕ ಹಾಗೂ ಮೊಲವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಐವರನ್ನು ಕೋಟ ಪೊಲೀಸರು ಜೂ.28ರಂದು ನಸುಕಿನ ವೇಳೆ ಸಾಬರಕಟ್ಟೆ ಚೆಕ್ಪೋಸ್ಟ್ನಲ್ಲಿ ಬಂಧಿಸಿದ್ದಾರೆ.
ಚೇರ್ಕಾಡಿ ಗ್ರಾಮದ ಪೇತ್ರಿಯ ರಾಘವೇಂದ್ರ(33), ದೀಕ್ಷಿತ್(23), ಪ್ರಶಾಂತ್(35), ಚೇತನ್(25), ಬಾಯರ್ಬೆಟ್ಟುವಿನ ಅರುಣ್(36) ಬಂಧಿತ ಆರೋಪಿಗಳು. ಇವರಿಂದ ಕಾರು, ಸತ್ತ ಬರ್ಕ, ಮೊಲ, ಕೋವಿ, 4 ತೋಟೆಗಳು, 1,970ರೂ. ನಗದು, ಐದು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇವರು ಶಿರೂರು ಮೂರುಕೈ ಪರಿಸರದಲ್ಲಿ ಕಾಡುಪ್ರಾಣಿಯನ್ನು ಶಿಕಾರಿ ನಡೆಸಿ ಕಾರಿನಲ್ಲಿ ಶಿರೂರು ಮೂರುಕೈ ಕಡೆಯಿಂದ ಸಾಬರಕಟ್ಟೆ ಕಡೆಗೆ ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.