ಹೆಮ್ಮಾಡಿಯಲ್ಲಿ ಇಸ್ಪೀಟ್ ಜುಗಾರಿ; 8 ಮಂದಿ ಸಹಿತ 1.60 ಲಕ್ಷ ರೂ. ವಶ
Update: 2022-06-29 05:51 GMT
ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಲಾಡ್ಜೊಂದರ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಕುಂದಾಪುರ ಡಿವೈಎಸ್ಪಿ ಕೆ. ಶ್ರೀಕಾಂತ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಅಂದರ್ ಬಾಹರ್ ಆಟವಾಡುತ್ತಿದ್ದಾರೆಂಬ ಖಚಿತ ವರ್ತಮಾನದಂತೆ ದಾಳಿ ನಡೆಸಲಾಗಿದೆ. ವಂಡ್ಸೆಯ ಸಂಜೀವ ಪೂಜಾರಿ (45), ಚಿತ್ತೂರಿನ ಅಭಿಜಿತ್ (29), ಬಳ್ಕೂರಿನ ನರಸಿಂಹ ಪೂಜಾರಿ (61), ಕರ್ಕುಂಜೆಯ ಚಂದ್ರ (49), ಹೆಮ್ಮಾಡಿಯ ಅಶ್ವತ್ (35), ಕರ್ಕುಂಜೆಯ ಅಶೋಕ (50), ತಲ್ಲೂರಿನ ಭುಜಂಗ ಶೆಟ್ಟಿ (44), ನೂಜಾಡಿ ರಸ್ತೆ ನಿವಾಸಿ ಆದರ್ಶ (39) ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 1,61,000 ರೂ. ನಗದು ಸಹಿತ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.