×
Ad

ಬಿ.ಸಿ.ರೋಡ್: ಚೂರಿಯಿಂದ ಇರಿದು ಯುವಕನ ಕೊಲೆ

Update: 2022-07-05 07:20 IST
ಮುಹಮ್ಮದ್ ಆಸಿಫ್

ಬಂಟ್ವಾಳ, ಜು.5: ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ಕೊನೆಗೆ ಯುವಕನೋರ್ವನ ಕೊಲೆಯಲ್ಲಿ ಅಂತ್ಯಕಂಡ ಘಟನೆ ಬಿ.ಸಿ.ರೋಡ್ ಸಮೀಪದ ಪೊನ್ನೋಡಿ ಎಂಬಲ್ಲಿನ ಕೆಎಸ್ಸಾರ್ಟಿಸಿ ಬಸ್ ಡಿಪ್ಪೋದ ಬಳಿ ಸೋಮವಾರ ತಡ ರಾತ್ರಿ ನಡೆದಿದೆ.

ಬಿ.ಸಿ.ರೋಡ್ ಕೈಕಂಬ ಸಮೀಪದ ಶಾಂತಿಅಂಗಡಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಮುಹಮ್ಮದ್ ಆಸಿಫ್ (32) ಕೊಲೆಯಾದ ಯುವಕ. 

ತಾಲೂಕಿನ ಮಾರಿಪಳ್ಳ ನಿವಾಸಿಗಳಾದ ನೌಫಲ್ ಮತ್ತು ನೌಶೀರ್ ಕೊಲೆ ಆರೋಪಿಗಳು ಎಂದು ದೂರಲಾಗಿದೆ. 

ಬಸ್ ಡಿಪ್ಪೋದ ಬಳಿ ಇರುವ ಹೊಟೇಲ್ ಒಂದರ ಮುಂಭಾಗ ಆಸಿಫ್ ಬೈಕ್ ನಲ್ಲಿ ಹಾರ್ನ್ ಮಾಡಿರುವುದಕ್ಕೆ ನೌಫಲ್ ಮತ್ತು ನೌಶೀರ್ ಆಕ್ಷೇಪ ವ್ಯಕ್ತಪಡಿಸಿದ್ದು ಈ ವೇಳೆ ಮೂವರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. 

ಬಳಿಕ ಆಸಿಫ್ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆದಿದ್ದು ಎರಡು ಕಡೆಯವರ ನಡುವೆ ಮತ್ತೆ ವಾಗ್ವಾದ, ಗಲಾಟೆ ನಡೆದಿದೆ ಎನ್ನಲಾಗಿದ್ದು ಕೊನೆಗೆ ನೌಫಲ್ ಮತ್ತು ನೌಶೀರ್ ಸೇರಿ ಆಸಿಫ್ ಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರ ಗಾಯಗೊಂಡ ಆಸಿಫ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮಧ್ಯೆ ನೌಫಲ್ ಮತ್ತು ನೌಶೀರ್ ಆಸ್ಪತ್ರೆಗೆ ದಾಖಲಾಗಿದ್ದು ಆಸಿಫ್ ನ ತಂಡ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ.

ಮೃತ ಆಸಿಫ್ ವಿವಾಹಿತನಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News