ಪ್ರಾಕೃತಿಕ ವಿಕೋಪ ಸಮಸ್ಯೆ ಕುರಿತು ಉಡುಪಿ ಜಿಲ್ಲಾಡಳಿತದ ವಾಟ್ಸ್‌ಆಪ್ ಸಂಖ್ಯೆಗೆ ಮಾಹಿತಿ ನೀಡಲು ಸೂಚನೆ

Update: 2022-07-15 14:44 GMT

ಉಡುಪಿ : ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುವ ನೆರೆ ಪ್ರವಾಹ, ಮನೆ ಹಾನಿ, ಮೂಲಭೂತ ಸೌಕರ್ಯಗಳ ಹಾನಿ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ಛಾಯಾಚಿತ್ರದೊಂದಿಗೆ ಜಿಲ್ಲಾಡಳಿತದ ಗಮನಕ್ಕೆ ತಂದು, ಆ ಮೂಲಕ ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವುದರೊಂದಿಗೆ ಕ್ಷಿಪ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾಡಳಿತವು ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸ್‌ಅಪ್ ಸಂಖ್ಯೆಯನ್ನು (9880831516) ನೀಡಿದ್ದು, ಇದರ ಸದುಪ ಯೋಗವನ್ನು ಪಡೆಯುವುದರೊಂದಿಗೆ ಮಾನ್ಸೂನ್ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕೋರಿದ್ದಾರೆ.

ಸಾರ್ವಜನಿಕರು ವಾಟ್ಸ್‌ಅಪ್ ಮೂಲಕ ಯಾವುದೇ ಸಮಸ್ಯೆಗಳಿಗೆ ಸಂಬಂಧಿಸಿದ ವೀಡಿಯೋ, ಛಾಯಾಚಿತ್ರ ಗಳನ್ನು ಕಳುಹಿಸುವ ಸಂದರ್ಭದಲ್ಲಿ ಸೂಕ್ತ ಜಿಪಿಎಸ್‌ನೊಂದಿಗಿನ ಛಾಯಾಚಿತ್ರ/ ವೀಡಿಯೋ, ಘಟನೆ ನಡೆದ ಸ್ಧಳದ ಖಚಿತ ಮಾಹಿತಿ, ದಿನಾಂಕ ಹಾಗೂ ಸಮಯದೊಂದಿಗೆ, ಘಟಿಸಿರುವ ಸಮಸ್ಯೆಗಳ ಬಗ್ಗೆ ಚುಟುಕಾದ ವರದಿ ಹಾಗೂ ಯಾವ ಇಲಾಖೆಗಳಿಂದ, ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಮಾಹಿತಿಯನ್ನು ನಮೂದಿಸಿದ್ದಲ್ಲಿ ತಿಳಿಸಿರುವ ಸಮಸ್ಯೆಗಳ ಕುರಿತು, ವಿಳಂಬ ರಹಿತವಾಗಿ ಜರೂರು ಕ್ರಮವಹಿಸಲು ಸಾಧ್ಯ ವಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಮಳೆಗಾಲದ ಸಂದರ್ಭದಲ್ಲಿ ಸಂಭವಿಸಬಹುದಾದ ಅವಘಡಗಳು, ಸಾರ್ವಜನಿಕರು ಎದುರಿಸುವ ತೊಂದರೆಗಳು, ಇತರ ಅನಾನುಕೂಲಗಳ ಕುರಿತು ಹಾಗೂ ಪ್ರಾಕೃತಿಕ  ವಿಕೋಪಕ್ಕೆ  ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು, ಮಾಹಿತಿಯನ್ನು ಪಡೆಯಲು ಅಥವಾ ಇನ್ನಾವುದೇ ರೀತಿಯಲ್ಲಿ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ನೆರವನ್ನು ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನದ ೨೪ ಗಂಟೆಗಳ ಕಾಲ ಕಾರ್ಯಾಚರಿಸುವ ಟೋಲ್ ಫ್ರೀ ಸಂಖ್ಯೆ (೨೪*೭) ಕಂಟ್ರೋಲ್ ರೂಂ ನಂ: ೧೦೭೭  ಹಾಗೂ ದೂರವಾಣಿ ಸಂಖ್ಯೆ: ೦೮೨೦-೨೫೭೪೮೦೨ ಪ್ರಸ್ತುತ ಸಾರ್ವಜನಿಕರ ಸೇವೆಗೆ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News