ಮಂಗಳೂರಿಗೆ ಆಗಮಿಸಿದ ಫೆಮಿನಾ ಮಿಸ್ ಇಂಡಿಯಾ-2022 ವಿಜೇತೆ ಸಿನಿ ಶೆಟ್ಟಿ

Update: 2022-07-18 15:26 GMT

ಮಂಗಳೂರು, ಜು.18: ಫೆಮಿನಾ ಮಿಸ್ ಇಂಡಿಯಾ-2022 ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿರುವ ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿಯ ಸಿನಿ ಶೆಟ್ಟಿ ಪ್ರಶಸ್ತಿ ಪಡೆದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದರು.

ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಕುಟುಂಬದ ಸದಸ್ಯರು, ಹಿತೈಷಿಗಳು ಬರಮಾಡಿಕೊಂಡರು. ನಂತರ ಕುಟುಂಬದ ಸದಸ್ಯರ ಜತೆ ಕಟೀಲು ಕ್ಷೇತ್ರಕ್ಕೆ ತೆರಳಿದರು.

ಈ ಸಂದರ್ಭ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿನಿ ಶೆಟ್ಟಿ ಮಂಗಳೂರಿನಲ್ಲಿ ತನಗೆ ದೊರೆತ ಹೃತ್ಪೂರ್ವಕ ಸ್ವಾಗತದಿಂದ ಖುಷಿಯಾಗಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ಉಡುಪಿ ಬಳಿ ನನ್ನ ಅಜ್ಜಿ ಮನೆ ಇದೆ. ಅಲ್ಲಿ ಬಾಲ್ಯ ಕಳೆದುದು ನೆನಪಾಗುತ್ತಿದೆ ಎಂದರು.

ನಾನು ಈಗಲೂ ವಿದ್ಯಾರ್ಥಿನಿ. ಫೆಮಿನಾ ಮಿಸ್ ಇಂಡಿಯಾ ಕಿರೀಟ ಧರಿಸುವ ಮೂಲಕ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಜೀವನದಲ್ಲಿ ಮತ್ತಷ್ಟು ಸಾಧನೆಯ ಗುರಿ ಇದೆ. ಮುಂದಿನ ದಿನಗಳಲ್ಲಿ ಮಿಸ್ ವರ್ಲ್ಡ್‌ಗೆ ಪ್ರಯತ್ನ ಮಾಡುವೆ. ನನಗೆ ಐದು ವರ್ಷ ಪ್ರಾಯ ಆಗಿದ್ದಾಗ ಬಂಟರ ಸಂಘದ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಅವರನ್ನು ನೋಡಿದ್ದೆ. ನಾನೂ ಕೂಡ ಐಶ್ವರ್ಯ ರೈ ಅವರಂತೆ ಆಗಬೇಕೆಂದು ಕನಸು ಕಂಡಿದ್ದೆ. ಅದನ್ನು ನನಸಾಗಿಸಲು ಪ್ರಯತ್ನಿಸುವೆ ಎಂದು ಸಿನಿ ಶೆಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News