ಬೆಂಗಳೂರು; ಮರದ ದಿಮ್ಮಿಗಳಿದ್ದ ಲಾರಿ ಪಲ್ಟಿ: ಬೈಕ್ ಸವಾರ ಮೃತ್ಯು

Update: 2022-07-22 13:51 GMT

ಬೆಂಗಳೂರು, ಜು.22: ಮೇಲ್ಸೇತುವೆ ಮೇಲೆ ಮರದ ದಿಮ್ಮಿಗಳನ್ನು ಹೊತ್ತುಯ್ಯುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಮರದ ದಿಮ್ಮಿಗಳು ಎರಡು ಸ್ಕೂಟರ್ ಗಳ ಮೇಲೆ ಉರುಳಿದ್ದರಿಂದ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡಿನ ತಿರುವಣ್ಣಾಮಲೈ ನಿವಾಸಿ ಮುಖೇಶ್(23) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನ ಭಾಮೈದ ಡೇವಿಡ್ ಹಾಗೂ ಮತ್ತೊಂದು ಬೈಕ್ ಸವಾರ ಶಿವು ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಂಧ್ರಪ್ರದೇಶಕ್ಕೆ ಮರದ ದಿಮ್ಮಿಗಳನ್ನು ತುಂಬಿಕೊಂಡು ನಾಗರಬಾವಿ ಔಟರ್‍ರಿಂಗ್ ರಸ್ತೆಯ ನಮ್ಮೂರ ತಿಂಡಿ ಹೊಟೇಲ್ ಟರ್ನಿಂಗ್ ಹತ್ತಿರದ ಮೇಲ್ಸೇತುವೆ ಮೇಲೆ ಸುಮನಹಳ್ಳಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಹೋಗುತ್ತಿದ್ದ ಲಾರಿ ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಬಿದ್ದಿದೆ ಎನ್ನಲಾಗಿದೆ. 

ಈ ಸಂದರ್ಭದಲ್ಲಿ ಮರದ ದಿಮ್ಮಿಗಳು ಲಾರಿಯಿಂದ ಕೆಳಗೆ ಉರುಳಿ ಎರಡು ಬೈಕ್‍ಗಳ ಮೇಲೆ ಬಿದ್ದ ಪರಿಣಾಮ ಹಿಂಬದಿ ಸವಾರ ಮುಖೇಶ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.  ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News