ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆ: ನವದಂಪತಿಯನ್ನು ಹತ್ಯೆಗೈದ ವಧುವಿನ ತಂದೆ

Update: 2022-07-26 16:25 GMT
Photo: Twitter

ತೂತುಕುಡಿ: ತಮಿಳುನಾಡಿನಲ್ಲಿ ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ಮದುವೆಯಾದ ನವವಿವಾಹಿತ ದಂಪತಿಯನ್ನು ವಧುವಿನ ತಂದೆ ಕಡಿದು ಹತ್ಯೆಗೈದಿದ್ದಾರೆ.  ಘಟನೆಯು ತೂತುಕುಡಿ ಜಿಲ್ಲೆಯ ಬಂದರು ನಗರವಾದ ಟುಟಿಕೋರಿನ್‌ನಲ್ಲಿ ನಡೆದಿದೆ.

ದಂಪತಿ ವಿವಾಹವಾದ ಬಳಿಕ ಮಹಿಳೆಯ ಮನೆಯವರು ನಾಪತ್ತೆ ದೂರು ದಾಖಲಿಸಿದ್ದರು. ದಂಪತಿಗಳು ಮಧುರೈನಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದು, ಇಬ್ಬರೂ ವಯಸ್ಕರು ಮತ್ತು ಸ್ವಂತ ಆಯ್ಕೆಯ ಮೇರೆಗೆ ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ.

ಮೃತ ದಂಪತಿಯನ್ನು ಮಾಣಿಕರಾಜ್ ಮತ್ತು ರೇಷ್ಮಾ ಎಂದು ಗುರುತಿಸಲಾಗಿದೆ.  ದಂಪತಿ ಕೂಡ ಮಹಿಳೆಯ ಪೋಷಕರೊಂದಿಗೆ ಠಾಣೆಯಿಂದ ವೀಡಿಯೊ ಕರೆಯಲ್ಲಿ ಮಾತನಾಡಿದ್ದಾರೆ. ಅವರು ಎಂದಿಗೂ ಪೊಲೀಸ್ ರಕ್ಷಣೆಯನ್ನು ಕೋರಲಿಲ್ಲ ಎಂದು ಟುಟಿಕೋರಿನ್‌ನ ಹಿರಿಯ ಪೋಲೀಸ್ ಅಧಿಕಾರಿ ಬಾಲಾಜಿ ಸರವಣನ್ NDTV ಗೆ ತಿಳಿಸಿದ್ದಾರೆ.

ದಂಪತಿಯನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿದೆ, ಬಳಿಕ ಮಹಿಳೆಯ ತಂದೆ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

“ದಂಪತಿಗಳು ಒಂದೇ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಸಂಬಂಧಿಗಳು ಕೂಡಾ ಹೌದು. ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಆಕೆಯ ಪತಿ ಶಾಲೆಯನ್ನು ಅರ್ಧದಲ್ಲೇ ತೊರೆದಿದ್ದರು. ಇದು ಯುವತಿಯ ಕುಟುಂಬಕ್ಕೆ ಪ್ರಮುಖ ಸಮಸ್ಯೆಯಾಗಿತ್ತು, ”ಎಂದು ಪೊಲೀಸ್ ಅಧಿಕಾರಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಮಹಿಳೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News