ಪ್ರೆಸಿಡೆಂಟ್ ಮುರ್ಮು ಮತ್ತು ಸಂಘದ ಮರ್ಮ

Update: 2022-07-26 19:27 GMT

ಆಗ ಹೋರಾಟ ಮಾಡಿದವರನ್ನು ದೇಶಭಕ್ತರೆಂದು, ಆ ಹೋರಾಟಗಳನ್ನು ಸ್ವಾತಂತ್ರ್ಯ ಸಮರವೆಂದು ಪ್ರೆಸಿಡೆಂಟ್ ಮುರ್ಮು ತಮ್ಮ ಮೊದಲ ಭಾಷಣದಲ್ಲಿ ಹಾಡಿಹೊಗಳಿದ್ದಾರೆ. ಆದರೆ ಈ ಕಾಲದಲ್ಲಿ ಅದೇ ಹೋರಾಟ ಮುಂದುವರಿಸುತ್ತಿರುವವರನ್ನು ದೇಶದ್ರೋಹಿಗಳೆನ್ನುವವರೇ ಅವರನ್ನು ರಾಷ್ಟ್ರಪತಿಯನ್ನಾಗಿಸಿದ್ದಾರೆ. ಹೀಗಾಗಿ ಅವರು ಸಂಕೇತಿಸುವುದು ಆದಿವಾಸಿಗಳ ಕನಸಲ್ಲ. ಆದಿವಾಸಿಗಳ ಕನಸುಗಳನ್ನು ಕೊಂದವರ ಉದ್ದೇಶಗಳನ್ನು! ಆದ್ದರಿಂದ ಈ ದೇಶದಲ್ಲಿ ದಮನಿತ ಸಮುದಾಯಗಳಲ್ಲಿ ದ್ರೌಪದಿಯಗಿ ರೂಪಾಂತರವಾದವರಿಗೆ ಮಾತ್ರ ಕನಸು ಕಾಣುವ ಮತ್ತು ಕನಸನ್ನು ನನಸಾಗಿಸಿಕೊಳ್ಳುವ ಅವಕಾಶವನ್ನು ಈ ಕಾರ್ಪೊರೇಟ್-ಬ್ರಾಹ್ಮಣಶಾಹಿ ವ್ಯವಸ್ಥೆ ಕೊಡುತ್ತದೆಯೇ ವಿನಾ ಸ್ವಾಭಿಮಾನ ಮತ್ತು ಸ್ವಂತಿಕೆಯಿಂದ ಸ್ವಾಯತ್ತವಾಗಿ ಬಾಳಬೇಕೆಂದುಕೊಂಡ ದೋಪ್ದಿಗಳ ಕನಸುಗಳು ನನಸಾಗುವುದಿರಲಿ ಬದುಕುಗಳನ್ನೇ ಛಿದ್ರಗೊಳಿಸಲಾಗುತ್ತಿದೆ.


ಭಾರತದ 15ನೇ 'ಪ್ರೆಸಿಡೆಂಟ್' ಆಗಿ ಸಂತಾಲ್ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಮೊನ್ನೆ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈ ಸ್ಥಾನಕ್ಕೇರಿದ ಪ್ರಪ್ರಥಮ ಆದಿವಾಸಿ. ಎರಡನೇ ಮಹಿಳೆ. ಅತ್ಯಂತ ಚಿಕ್ಕ ಪ್ರಾಯದ ಪ್ರೆಸಿಡೆಂಟ್. ಸ್ವಾತಂತ್ರ್ಯ ಬಂದ ನಂತರದ ಪೀಳಿಗೆಯ ಮೊತ್ತಮೊದಲ ಪ್ರೆಸಿಡೆಂಟ್..ಇತ್ಯಾದಿ ಹೆಗ್ಗಳಿಕೆಗಳು ದ್ರೌಪದಿ ಮುರ್ಮು ಅವರ ಜೊತೆಗೆ ಈಗ ಥಳಕು ಹಾಕಿಕೊಂಡಿವೆ. ಒಡಿಶಾದ ಆದಿವಾಸಿ ಜಿಲ್ಲೆಯಾದ ಮಯೂರ್‌ಭಂಜ್ ಜಿಲ್ಲೆಯ ಅತ್ಯಂತ ಹಿಂದುಳಿದ ಸಂತಾಲ್ ಆದಿವಾಸಿಯಾದ ಮುರ್ಮು ಅವರು ಈ ದೇಶದ ಪ್ರೆಸಿಡೆಂಟ್ ಆಗಿರುವುದಕ್ಕೆ ಅದರದೇ ಆದ ಸಾಂಕೇತಿಕ ಮಹತ್ವವಿದೆ. ಆದರೆ ಈ ಸಂಕೇತಗಳಿಗೆ ಮಹತ್ವ ಬರುವುದು ಸಂಕೇತಗಳು ಸಾರಭೂತ ಬದಲಾವಣೆಯನ್ನು ಪ್ರತಿನಿಧಿಸುವಾಗ ಮಾತ್ರ. ದಲಿತ-ಆದಿವಾಸಿ ಸಮುದಾಯಗಳ ಸಬಲೀಕರಣದ ಭಾಗವಾಗಿ ದಲಿತರೋ, ಆದಿವಾಸಿಗಳೋ ಪ್ರೆಸಿಡೆಂಟುಗಳಾದರೆ ಆ ಸಂಕೇತಕ್ಕೆ ಸತ್ವವಿರುತ್ತದೆ.

ಆದರೆ ದಲಿತ-ಆದಿವಾಸಿ ಸಮುದಾಯಗಳ 'ಜಲ್-ಜಂಗಲ್-ಜಮೀನ್'ಗಳನ್ನು ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ಆದಿವಾಸಿ ಅಸ್ಮಿತೆಗಳನ್ನು ಹಿಂದುತ್ವ ರಾಜಕಾರಣ ಕಬಳಿಸುತ್ತಿರುವ ಸಂದರ್ಭದಲ್ಲಿ ಆದಿವಾಸಿ ಮಹಿಳೆಯೊಬ್ಬರು ದೇಶದ ಪ್ರೆಸಿಡೆಂಟ್ ಆಗುವುದು ಕಾರ್ಪೊರೇಟ್-ಹಿಂದುತ್ವವಾದಿ ಕುತಂತ್ರಗಳಿಗೆ ಮಾತ್ರ ಸಂಕೇತವಾಗುತ್ತದೆ. 'ಪುತಿ' ಎಂಬ ಹೆಸರಿನ ಆದಿವಾಸಿ ಹುಡುಗಿಯೊಬ್ಬಳ ಹೆಸರನ್ನು ಶಾಲಾ ಅಧ್ಯಾಪಕಿಯೊಬ್ಬರು 'ದ್ರೌಪದಿ' ಎಂದು ಬದಲಿಸಿ ಭಾರತದ 'ನಾಗರಿಕ' ಸಮಾಜಕ್ಕೆ ಸಹ್ಯಗೊಳಿಸುವಂತೆ ಮಾಡಿದ್ದು ದ್ರೌಪದಿ ಮುರ್ಮು ಅವರ ಇಡೀ ರಾಜಕೀಯ ಜೀವನದ ರೂಪಕದಂತಿದೆ. ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಹೇಳಿಕೊಂಡಂತೆ ಭಾರತಕ್ಕೆ ಸ್ವಾತಂತ್ರ ಬಂದು 50 ವರ್ಷಗಳಾದಾಗ ಅವರ ರಾಜಕೀಯ ಜೀವನ ಹಿಂದುತ್ವವಾದಿ ಪಕ್ಷವಾದ ಬಿಜೆಪಿಯೊಂದಿಗೆ ಪ್ರಾರಂಭವಾಯಿತು. ಇದೀಗ ಭಾರತದ ಸ್ವಾತಂತ್ರ್ಯಕ್ಕೆ 75 ತುಂಬುತ್ತಿರುವಾಗ ಅವರು 'ಪ್ರೆಸಿಡೆಂಟ್' ಆಗಿದ್ದಾರೆ. ಮುಂದಿನ 25 ವರ್ಷಗಳ ಆರೆಸ್ಸೆಸ್-ಬಿಜೆಪಿ ಕನಸಿನ ನವಭಾರತದ 'ಅಮೃತಕಾಲ'ದ ಮುನ್ನುಡಿ ಬರೆಯುತ್ತಿದ್ದಾರೆ. ಒಬ್ಬ ಆದಿವಾಸಿ ಮಹಿಳೆ 'ಪುತಿ'ಯಿಂದ 'ದ್ರೌಪದಿ'ಯಾಗಿ 'ಪ್ರೆಸಿಡೆಂಟ್' ಆದ ರೂಪಾಂತರ ಮತ್ತು ಪಯಣದಲ್ಲಿ ಹಲವಾರು ಆತಂಕಕಾರಿ ಸಂಕೇತಗಳು ಮತ್ತು ಸಂದೇಶಗಳಿವೆ.

ದ್ರೌಪದಿಗಳಾಗದ ದೋಪ್ದಿಗಳ ಭಾರತದಲ್ಲಿ..

ಏಕೆಂದರೆ ಪ್ರೆಸಿಡೆಂಟ್ ದ್ರೌಪದಿ ಮುರ್ಮು ಅವರು ಹುಟ್ಟಿನಿಂದ ಆದಿವಾಸಿಯಾಗಿದ್ದರೂ, ವಾಸ್ತವದಲ್ಲಿ ಈ ದೇಶದ ಕೋಟ್ಯಂತರ ಆದಿವಾಸಿ 'ದೋಪ್ದಿ'ಗಳನ್ನು ಸಂಕೇತಿಸುವುದಿಲ್ಲ. ಪ್ರತಿನಿಧಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಬರಲಿರುವ ದಿನಗಳಲ್ಲಿ ಪ್ರೆಸಿಡೆಂಟ್ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಸೇನೆ ಮತ್ತು ಪೊಲೀಸರು ದೋಪ್ದಿಯರನ್ನು ಬೇಟೆಯಾಡಲಿದ್ದಾರೆ. ('ದೋಪ್ದಿ' ಪ್ರಖ್ಯಾತ ಜನಪರ ಲೇಖಕಿ ಮಹಾಶ್ವೇತಾದೇವಿಯವರ ಒಂದು ಕಥೆಯ ಆದಿವಾಸಿ ನಾಯಕಿಯ ಹೆಸರು. 1971ರ ಆಸುಪಾಸಿನಲ್ಲಿ ಸರಕಾರವು ಆದಿವಾಸಿಗಳ ನೆಲ ಮತ್ತು ನೆಲೆಯನ್ನು ಕಸಿದುಕೊಳ್ಳಲು ಪ್ರಾರಂಭಿಸಿದ್ದಾಗ ಭೂಮಾಲಕರು, ವ್ಯಾಪಾರಿಗಳು ಮತ್ತು ಸರಕಾರದ ವಿರುದ್ಧ ಸಶಸ್ತ್ರ ಬಂಡಾಯ ಹೂಡಿದ್ದ ಮಹಾನಾಯಕಿ. ಆಕೆ ಸೆರೆಸಿಕ್ಕಾಗ ಪೊಲೀಸರು ಆದಿವಾಸಿ ಹೋರಾಟವನ್ನು ದಮನ ಮಾಡಬೇಕೆಂಬ ರಾಜಕೀಯ ಉದ್ದೇಶದ ಭಾಗವಾಗಿ ದೋಪ್ದಿಯನ್ನು ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ. ಪುರಾಣದಲ್ಲಿ ದ್ರೌಪದಿಯ ವಸ್ತ್ರಾಪಹರಣವಾದಾಗ ಕೃಷ್ಣ ಆಕೆಯನ್ನು ರಕ್ಷಿಸಿದ ಎಂಬ ಕಥನಗಳಿದ್ದರೂ ವಾಸ್ತವದಲ್ಲಿ ಆದಿವಾಸಿ ದೋಪ್ದಿಯನ್ನು ರಕ್ಷಿಸಬೇಕಾದವರೇ ಅತ್ಯಾಚಾರ ಮಾಡುತ್ತಾರೆ. ಆದರೆ ದೋಪ್ದಿ ಬಲಾತ್ಕಾರಕ್ಕೊಳಗಾದ ತನ್ನ ದೇಹವನ್ನೇ ಬಂಡಾಯದ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾಳೆ.) 'ದೋಪ್ದಿ' ಕಥೆಯಲ್ಲಿ ಬಣ್ಣಿಸಿದ್ದಕ್ಕಿಂತಲೂ ಅತ್ಯಂತ ಕ್ರೂರವಾದ ಪೊಲೀಸರ ಕ್ರೌರ್ಯಕ್ಕೆ, ಕಾರ್ಪೊರೇಟ್ ಬಂಡವಾಳಶಾಹಿ-ಬ್ರಾಹ್ಮಣಶಾಹಿ ಪಕ್ಷಗಳ ದಾಳಿಗೆ ಇಂದು ಆದಿವಾಸಿಗಳು ಬಲಿಯಾಗುತ್ತಿದ್ದಾರೆ. ಆದರೂ ದ್ರೌಪದಿ ಮುರ್ಮು ಅಂಥವರು ಕನಸು ಕಾಣಲು ಮತ್ತು ಅದನ್ನು ನನಸಾಗಿಸಿಕೊಳಲು ಮಾತ್ರ ಹೇಗೆ ಸಾಧ್ಯವಾಗುತ್ತಿದೆ ಎಂಬುದರ ಹಿಂದೆ ಈ ದೇಶದ ಅತ್ಯಂತ ಕ್ರೂರ ಸಾಂಸ್ಕೃತಿಕ ರಾಜಕಾರಣವಿದೆ.ಮೊನ್ನೆ ಪ್ರಮಾಣವಚನ ಸ್ವೀಕರಿಸುತ್ತಾ ಪ್ರೆಸಿಡೆಂಟ್ ಮುರ್ಮು ಅವರು ಬ್ರಿಟಿಷರ ವಿರುದ್ಧ ಆದಿವಾಸಿ ಭಾರತವು ನಡೆಸಿದ ಸಂತಾಲ್, ಪೈಕ, ಕೋಲ್ ಮತ್ತು ಭಿಲ್ ಎಂಬ ನಾಲ್ಕು ಮಹತ್ವದ ಬಂಡಾಯಗಳನ್ನು ನೆನೆಸಿಕೊಂಡರು. ಈ ನಾಲ್ಕು ಬಂಡಾಯಗಳು ಕೂಡ ಆದಿವಾಸಿಗಳ ಭೂಮಿಯನ್ನು ಕಸಿದು ಅವರನ್ನು ಎತ್ತಗಂಡಿ ಮಾಡಲು ಪ್ರಯತ್ನಿಸಿದ ಭೂಮಾಲಕರು-ಬಡ್ಡಿವ್ಯಾಪಾರಿಗಳು ಮತ್ತು ಈಸ್ಟ್ ಇಂಡಿಯಾ ಕಂಪೆನಿಗಳ ಜಂಟಿ ದಮನದ ವಿರುದ್ಧ ನಡೆದ ಮಹಾನ್ ಸ್ವಾತಂತ್ರ್ಯ ಸಮರಗಳು.

ಆದಿವಾಸಿಗಳನ್ನು ದೇಶದ್ರೋಹಿಗಳೆನ್ನುವ ಸಂಸದೀಯ ಭಾರತದಲ್ಲಿ...

ಸ್ವಾತಂತ್ರ್ಯಾನಂತರವೂ ಆದಿವಾಸಿಗಳ ಪರಿಸ್ಥಿತಿಯಲ್ಲಿ ಹೆಚ್ಚು ವ್ಯತ್ಯಾಸಗಳು ಆಗಿಲ್ಲ. ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಆದಿವಾಸಿಗಳಿಗೆ ಜಮೀನು ಒಡೆತನ ಖಾತರಿ ಮಾಡುವ ಅರಣ್ಯ ಹಕ್ಕು ಕಾಯ್ದೆ-2006 ಜಾರಿ ಮಾಡಿದರೂ, ಆದಿವಾಸಿಗಳ ಜಮೀನು ವಶಪಡಿಸಿಕೊಳ್ಳಲು ಆದಿವಾಸಿಗಳ ಗ್ರಾಮಸಭೆಯ ಪರವಾನಿಗೆ ಬೇಕೆಂಬ ನಿಯಮವನ್ನು ರೂಪಿಸಿದರೂ, ಇವೆಲ್ಲವನ್ನು ಆಯಾ ರಾಜ್ಯಗಳ ರಾಜ್ಯಪಾಲರುಗಳ ನೇರ ನಿಗಾವಣೆಯಲ್ಲಿ ನಡೆಯಬೇಕೆಂಬ ಕಾನೂನನ್ನು ಕೂಡಾ ರೂಪಿಸಿದರೂ, ಇದೇ ಅವಧಿಯಲ್ಲಿ ಅತಿ ಹೆಚ್ಚು ಅರಣ್ಯಭೂಮಿಯು ಕಾರ್ಪೊರೇಟ್ ಪಾಲಾಯಿತು. ಅದರ ವಿರುದ್ಧ ಹೋರಾಡುತ್ತಿದ್ದ ಆದಿವಾಸಿಗಳನ್ನು ಕಾಂಗ್ರೆಸ್ ಪಕ್ಷವೇ 'ಆಪರೇಷನ್ ಗ್ರೀನ್ ಹಂಟ್' ಮತ್ತು 'ಸಲ್ವಾ ಜುಡುಂ' ಹೆಸರಿನಲ್ಲಿ ಭೀಕರವಾಗಿ ದಮನ ಮಾಡಿತು. ಆದರೆ ಮೋದಿ ಸರಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ನೆಪಮಾತ್ರದ ಹಕ್ಕುಗಳೂ ಆದಿವಾಸಿಗಳಿಗೆ ಇಲ್ಲವಾಯಿತು.

ಕಾರ್ಪೊರೇಟ್ ಬಂಡವಾಳಿಗರ ಪರವಾಗಿ ಯಾವುದನ್ನು ಕಾಂಗ್ರೆಸ್ ಸುತ್ತುಬಳಸಿ ಮಾಡುತ್ತಿತ್ತೋ ಅದನ್ನು ಮೋದಿ ಸರಕಾರ ನೇರವಾಗಿ, ಕ್ರೂರವಾಗಿ ಮಾಡುತ್ತಾ ಅದಕ್ಕೆ ದೇಶಭಕ್ತಿಯ ಲೇಪನ ಮಾಡಿತು ಮತ್ತು ಅದನ್ನು ವಿರೋಧಿಸುವ ದೋಪ್ದಿಯರನ್ನು ದೇಶದ್ರೋಹಿಗಳೆಂದು ಬಣ್ಣಿಸಲು, ಬಂಧಿಸಲು, ಎನ್‌ಕೌಂಟರ್‌ನಲ್ಲಿ ಕಗ್ಗೊಲೆ ಮಾಡಲು ಪ್ರಾರಂಭಿಸಿತು. ಅದರಲ್ಲೂ ಅದಾನಿಯ ವಿದ್ಯುತ್ ಸ್ಥಾವರಗಳಿಗೆ ಅಗ್ಗದ ಕಲ್ಲಿದ್ದಲನ್ನು ಒದಗಿಸಲು, ಲಕ್ಷಾಂತರ ಕೋಟಿ ರೂ. ಮೌಲ್ಯದ ಅಪರೂಪದ ಖನಿಜಗಳನ್ನು ಬಗೆದು ರಫ್ತು ಮಾಡಿಕೊಳ್ಳಲು ಇನ್ನಿತರ ದೊಡ್ಡ ಕಾರ್ಪೊರೇಟ್ ಬಂಡವಾಳಿಗರಿಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಅರಣ್ಯ ಹಕ್ಕು ಕಾಯ್ದೆಗಳನ್ನು ಅರ್ಥವಿಲ್ಲದಂತೆ ಮಾಡಲು ಹೊರಟಿದೆ. ಆದಿವಾಸಿ ದ್ರೌಪದಿ ಮುರ್ಮು ಅವರನ್ನು ಪ್ರೆಸಿಡೆಂಟ್ ಗಿರಿಗೆ ನೇಮಿಸಿದ ಕೇವಲ ಐದುದಿನಗಳ ನಂತರದಲ್ಲಿ ಆದಿವಾಸಿ ಜಮೀನನ್ನು ವಶಪಡಿಸಿಕೊಳ್ಳಲು ಗ್ರಾಮಸಭೆಯ ಅನುಮತಿಯ ಅಗತ್ಯವೇ ಇಲ್ಲವೆಂಬ ಕಾನೂನಿಗೆ ತಿದ್ದುಪಡಿ ತಂದಿದೆ.

ಛತ್ತೀಸ್‌ಗಡ್‌ನಲ್ಲಿ ಮತ್ತು ಜಾರ್ಖಂಡ್‌ನಲ್ಲಿ ತಾನು ಅಧಿಕಾರದಲ್ಲಿದ್ದಾಗ 'ಜಲ್, ಜಂಗಲ್, ಜಮೀನ್' ಮೇಲಿನ ಹಕ್ಕಿಗಾಗಿ ಹೋರಾಡುತ್ತಿದ್ದ 'ಪಾತಾಲ್‌ಘಡಿ' ಚಳವಳಿಯ ಹಲವಾರು ಆದಿವಾಸಿಗಳನ್ನು ಎನ್‌ಕೌಂಟರ್ ಮಾಡಿದ್ದಲ್ಲದೆ, ಅದರ ಬಗ್ಗೆ ಧ್ವನಿ ಎತ್ತಿದ್ದ ಸಂತ ಪಾದ್ರಿ ಸ್ಟಾನ್ ಸ್ವಾಮಿಯಂತಹ ಮಾನವಹಕ್ಕು ಕಾರ್ಯಕರ್ತರ ಮೇಲೆ ದೇಶದ್ರೋಹಿ ಕೇಸುಗಳನ್ನು ಹೊರಿಸಿ, ಜಾಮೀನನ್ನು ಕೊಡದೆ ಜೈಲಿನಲ್ಲಿ ಸಾಯುವಂತೆ ಮಾಡಿದೆ. ಅದರಲ್ಲೂ ಯುಎಪಿಎ ಕಾಯ್ದೆಯನ್ನು ಬೇಕಾಬಿಟ್ಟಿ ಬಳಸಿ 2016-20ರ ಅವಧಿಯಲ್ಲಿ ಸಾವಿರಾರು ಆದಿವಾಸಿಗಳನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದೆ. 2017ರಲ್ಲಿ ಯಾವುದೇ ಪುರಾವೆ ಇಲ್ಲದಿದ್ದರೂ ದಾಂತೆವಾಡಾದ ಬುರ್ಕಾಪಾಲಿನಲ್ಲಿ ಪೊಲೀಸ್ ಕ್ಯಾಂಪಿನ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ 121 ಆದಿವಾಸಿಗಳನ್ನು ಐದು ವರ್ಷಗಳ ನಂತರ ಕೋರ್ಟು ಪುರಾವೆ ಇಲ್ಲವೆಂಬ ಕಾರಣಕ್ಕೆ ಬಿಡುಗಡೆ ಮಾಡಿದೆ. 2009ರಲಿ ಛತ್ತೀಸ್‌ಗಡ್‌ನಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಪೊಲೀಸರು 17 ಆದಿವಾಸಿಗಳನ್ನು ಕೊಂದುಹಾಕಿದ ಪ್ರಕರಣದಲ್ಲಿ ಕಾನೂನುಬದ್ಧವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಗಾಂಧಿವಾದಿ ಹಿಮಾಂಶುಕುಮಾರ್ ಅವರನ್ನು ದೇಶದ್ರೋಹಿ ಎಂದು ಚಿತ್ರಿಸಿದೆ. ದುರದೃಷ್ಟವಶಾತ್ ಕೋರ್ಟು ಕೂಡಾ ಅದನ್ನು ಒಪ್ಪಿಕೊಂಡು ಪೊಲೀಸರ ಮೇಲೆ ಕೇಸು ದಾಖಲಿಸಿದ್ದಕ್ಕಾಗಿ ಹಿಮಾಂಶುಕುಮಾರ್ ಅವರಿಗೇ ದಂಡ ವಿಧಿಸಿದೆ. ಒಟ್ಟಿನಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲಂತೂ ಆದಿವಾಸಿಗಳು ಕನಸುಕಾಣುವ ಸ್ವಾತಂತ್ರ್ಯವಿರಲಿ ಮಾತೆತ್ತುವ ಸ್ವಾತಂತ್ರ್ಯವನ್ನೂ ಕಳೆದುಕೊಂಡು ಅರಣ್ಯದಲ್ಲಿ ಭೀಕರ ಮೌನ ನೆಲೆಸಿದೆ.

ಆದಿವಾಸಿ ಸರ್ನ ಧರ್ಮವನ್ನು ಹಿಂದೂ ದ್ರೋಹಿಯೆನ್ನುವ ಭಾರತದಲ್ಲಿ.. 

ಇದೆಲ್ಲದರ ಜೊತೆಗೆ ಆದಿವಾಸಿಗಳು ತಾವು ಹಿಂದೂಗಳಲ್ಲವೆಂದೂ ತಮ್ಮ ಮೂಲ ಧರ್ಮವಾದ ಸರ್ನ ಧಾರ್ಮಿಕ ಸಂಹಿತೆಯನ್ನು ಅನುಸರಿಸಲು ಸಾಂವಿಧಾನಿಕ ಅವಕಾಶ ಕೊಡಬೇಕೆಂದು ಸರ್ನ ಧಾರ್ಮಿಕ ಸಂಹಿತೆಗಾಗಿ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಆದರೆ ಮೋದಿ ಸರಕಾರದಡಿಯಲ್ಲಿ ತಮ್ಮ ಹಿಂದುತ್ವ ಅಜೆಂಡಾದ ಭಾಗವಾಗಿ ಆದಿವಾಸಿಗಳ ಸರ್ನ ಧಾರ್ಮಿಕ ಅಸ್ಮಿತೆಯನ್ನು ಧ್ವಂಸ ಮಾಡುವ ರಾಜಕೀಯ ಮತ್ತು ಸಾಂಸ್ಕೃತಿಕ ಹುನ್ನಾರಗಳನ್ನು ಮಾಡುತ್ತಿದೆ. ವಾಸ್ತವದಲ್ಲಿ 1871ರಿಂದ ಹಿಡಿದು 1951ರವರೆಗೂ ಎಲ್ಲಾ ಸೆನ್ಸಸ್‌ಗಳಲ್ಲೂ ಆದಿವಾಸಿಗಳನ್ನು ಎಲ್ಲಿಯೂ ಹಿಂದೂಗಳೆಂದು ಪರಿಗಣಿಸಿರಲಿಲ್ಲ. ಮೇಲಾಗಿ ಸರ್ನ ಧರ್ಮ ಸಂಹಿತೆ ಆದಿವಾಸಿಗಳ ಅತಿ ಪುರಾತನ ಕೂಗು. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಯೋಜನಾಬದ್ಧವಾಗಿ ಸರ್ನ ಧರ್ಮ ಸಂಹಿತೆ ಚಳವಳಿಯು ಈ ದೇಶವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಕ್ರಿಶ್ಚಿಯನ್ ಮಿಷನರಿಗಳು ಹುಟ್ಟುಹಾಕಿರುವ ದೇಶದ್ರೋಹಿ ಚಳವಳಿಯೆಂಬ ಅಪಪ್ರಚಾರ ಮತ್ತು ದಾಳಿಗಿಳಿದಿದೆ. ಹೀಗೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಸಂಘಪರಿವಾರ ಆದಿವಾಸಿಗಳ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸ್ವಾಯತ್ತತೆಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾ ಕಾರ್ಪೊರೇಟ್ ಬಂಡವಾಳಿಗರ ಮತ್ತು ಬ್ರಾಹ್ಮಣೀಯ ಹಿಂದುತ್ವದ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಆದಿವಾಸಿ ಮಹಿಳೆಯಾದ ದ್ರೌಪದಿ ಮುರ್ಮು ಅವರು ಪ್ರೆಸಿಡೆಂಟ್ ಆಗಿದ್ದಾರೆ. ಇದು ಆದಿವಾಸಿಗಳ ಕನಸು ನನಸಾದ ಸಂಕೇತವೋ ಅಥವಾ ಆದಿವಾಸಿಯಿಂದಲೇ ಆದಿವಾಸಿಗಳ ದಮನವನ್ನು ಮಾಡಿಸುವ ಕುತಂತ್ರದ ಸಂಕೇತವೋ? ಆದಿವಾಸಿ ಭಾರತದ ಮೇಲೆ ಕಳೆದ 75 ವರ್ಷಗಳಲ್ಲಿ ಹಾಗೂ ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ನಡೆಯುತ್ತಿರುವ ಈ ದಾಳಿಗಳ ಬಗ್ಗೆ ದ್ರೌಪದಿ ಮುರ್ಮು ಅವರ ಪ್ರತಿಕ್ರಿಯೆ ಏನಿತ್ತು ಎಂಬುದರಲ್ಲಿ ಇದಕ್ಕೆ ಒಂದಷ್ಟು ಉತ್ತರಗಳು ದೊರೆತೀತು.

ದ್ರೌಪದಿ ಮುರ್ಮು ಮತ್ತು ಸಂಘದ ಮರ್ಮ

ದ್ರೌಪದಿ ಮುರ್ಮು ಅವರ ರಾಜಕೀಯ ಜೀವನ ಪ್ರಾರಂಭವಾದದ್ದೇ ಬಿಜೆಪಿ ಪಕ್ಷದಿಂದ. ಅವರು ಬಿಜೆಪಿಯಿಂದ ಒಡಿಶಾದಲ್ಲಿ ಶಾಸಕರು ಮತ್ತು ಮಂತ್ರಿಯೂ ಆಗಿದ್ದರು. ಆನಂತರ ಅವರನ್ನು ಬಿಜೆಪಿ ಆದಿವಾಸಿ ರಾಜ್ಯವಾಗಿರುವ ಜಾರ್ಖಂಡ್ ನ ರಾಜ್ಯಪಾಲರನ್ನಾಗಿಸಿತು. ಈ ಅವಧಿಯಲ್ಲಿ ಅವರು ಆದಿವಾಸಿಗಳ ಭೂಮಿಯನ್ನು ಸುಲಭವಾಗಿ ಕಸಿದುಕೊಳ್ಳುವ ಮಸೂದೆಯನ್ನು ಆಗಿನ ಆಡಳಿತಾರೂಢ ಬಿಜೆಪಿ ಸರಕಾರ ತಂದಾಗ ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ವಾಪಸ್ ಕಳುಹಿಸಿದ್ದು ಬಿಟ್ಟರೆ ಮಿಕ್ಕಂತೆ ದೇಶಾದ್ಯಂತ ಹಾಗೂ ಜಾರ್ಖಂಡ್‌ನಲ್ಲಿ ಕೂಡ 'ಪಾತಾಲ್‌ಘಡಿ' ಚಳವಳಿಯ ಮೇಲೆ ಪೊಲೀಸರು ನಡೆಸುತ್ತಿದ್ದ ಎಲ್ಲಾ ದೌರ್ಜನ್ಯಗಳಿಗೂ ಮೂಕಬೆಂಬಲ ನೀಡಿದ್ದರು. ಅಷ್ಟು ಮಾತ್ರವಲ್ಲ, ಆರ್ಟಿಕಲ್ 370 ರದ್ದತಿ, ಸಿಎಎ, ಕೋಮು ಗಲಭೆಗಳು, ಲಿಂಚಿಂಗ್, ರೈತ ವಿರೋಧಿ ಕಾಯ್ದೆಗಳು, ಹಿಂದಿ ರಾಷ್ಟ್ರಭಾಷೆಯಾಗಿ ಹೇರಿಕೆ, ಕೋವಿಡ್- ಲಾಕ್‌ಡೌನ್ ಅನ್ಯಾಯಗಳು ..ಇನ್ನಿತ್ಯಾದಿ ಎಲ್ಲಾ ವಿಷಯಗಳಲ್ಲೂ ರಾಜ್ಯಪಾಲರಾಗಿಯೂ ಬಿಜೆಪಿಯ ಅಧಿಕೃತ ನಿಲುವುಗಳನ್ನು ಬಹಿರಂಗವಾಗಿ ಅನುಮೋದಿಸಿದ್ದರು.

ಆದಿವಾಸಿಯಾಗಿದ್ದರೂ ಪ್ರಕೃತಿ ಆರಾಧನೆಯನ್ನು ತನ್ನ ಧರ್ಮವೆನ್ನುವ ಸರ್ನ ಧರ್ಮ ಸಂಹಿತೆಗಿಂತ ತನ್ನನ್ನು ತಾನು ಹಿಂದೂ ಶಿವನ ಭಕ್ತೆಯೆಂದು ಘೋಷಿಸಿಕೊಳ್ಳುತ್ತಿದ್ದರು. ಮುರ್ಮು ಅವರು ಹಿಂದೂ ಮೇಲ್ಜಾತಿಗಳ ಆಧ್ಯಾತ್ಮಿಕ ಗೀಳಾಗಿರುವ ಬ್ರಹ್ಮಕುಮಾರಿ ಪಂಥದ ಅನುಯಾಯಿಯೂ ಆಗಿದ್ದಾರೆ. ಅದನ್ನು ಸಾಂವಿಧಾನಿಕ ಹುದ್ದೆಯಲ್ಲಿರುವಾಗಲೂ ಬಹಿರಂಗವಾಗಿ ಪಾಲಿಸಿದ್ದರು. ಅಷ್ಟು ಮಾತ್ರವಲ್ಲ. ತನ್ನನ್ನು ಪ್ರೆಸಿಡೆಂಟ್ ಪದವಿಗೆ ಸೂಚಿಸಿದ ಮರುದಿನವೇ ತಾನು ಹಿಂದೂ ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವ ಫೋಟೋ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಪ್ರಸಾರವಾಗುವಂತೆ ನೋಡಿಕೊಂಡು ತನ್ನ ಹಿಂದೂ ನಿಷ್ಠೆಯನ್ನು ಜಾಹೀರುಗೊಳಿಸಿದ್ದರು. ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಬ್ರಾಹ್ಮಣ ಅರ್ಚಕರು ಸಂಸ್ಕೃತದಲ್ಲಿ ಆಶೀರ್ವಚನ ಬೋಧಿಸಿದ್ದನ್ನು ಹೆಗ್ಗಳಿಕೆಯಿಂದ ಆರೆಸ್ಸೆಸ್ಸಿಗರು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಮುರ್ಮು ಅವರು ಕೂಡ ಬ್ರಾಹ್ಮಣರ ಆಶೀರ್ವಚನದಿಂದ ಸಂತೃಪ್ತರಾದ ಭಾವವನ್ನು ತೋರಿದ್ದಾರೆ.

ಈ ಹಿಂದೆ ಈ ದೇಶದ ಮೊದಲ ರಾಷ್ಟ್ರಪತಿಯಾದ ಬಾಬು ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ 101 ಬ್ರಾಹ್ಮಣರ ಪಾದಪೂಜೆ ಮಾಡಿದ್ದರು. ಅದರ ವಿರುದ್ಧ ಇಡೀ ದೇಶ ತನ್ನ ರಾಜಕೀಯ ಹಾಗೂ ವೈಚಾರಿಕ ಭಿನ್ನಮತವನ್ನು ವ್ಯಕ್ತಪಡಿಸಿತ್ತು. ಆದರೆ ಈಗ ಅಂತಹದ್ದನ್ನು ವಿಮರ್ಶಿಸುವುದೂ ದೇಶದ್ರೋಹವಾಗಿಬಿಡುವ ಸನ್ನಿವೇಶವಿದೆ. ಹೀಗೆ ದ್ರೌಪದಿ ಮುರ್ಮು ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯಕ್ತಿತ್ವದಲ್ಲಿ ಯಾವುದೇ ಆದಿವಾಸಿ ಆತ್ಮಾಭಿಮಾನ ಹಾಗೂ ಸ್ವಾಯತ್ತ ಆದಿವಾಸಿ ವ್ಯಕ್ತಿತ್ವವಿಲ್ಲ. ಆಳುವ ಪಕ್ಷದ ಸಮಗ್ರ ಸೈದ್ಧಾಂತಿಕ ಧೋರಣೆಗಳ ಯೋಧೆಯೆಂದು ಸಾಬೀತು ಮಾಡಿದ ನಂತರವೇ ಬಿಜೆಪಿ-ಆರೆಸ್ಸೆಸ್ ಅವರನ್ನು ಪ್ರೆಸಿಡೆಂಟ್ ಹುದ್ದೆಗೆ ಆಯ್ಕೆ ಮಾಡಿತು. ಹಿಂದಿನ ರಾಷ್ಟ್ರಪತಿಯಾಗಿದ್ದ ಕೋವಿಂದ್ ಅವರ ಆಯ್ಕೆಗೂ ಇದ್ದ ಮಾನದಂಡ ಇದೊಂದೇ ಆಗಿತ್ತು. ಕೋವಿಂದ್ ಅವರು ದಲಿತರು. ಆದರೆ ಅವರು ರಾಷ್ಟ್ರಪತಿಯಾಗಿದ್ದ ಇಡೀ ಅವಧಿಯಲ್ಲಿ ಅವರು ಮೋದಿ ಸರಕಾರದ ಎಲ್ಲಾ ದಲಿತ ವಿರೋಧಿ, ಆದಿವಾಸಿ ವಿರೋಧಿ, ಮುಸ್ಲಿಮ್ ವಿರೋಧಿ, ಸಂವಿಧಾನ ವಿರೋಧಿ, ಯೋಜನೆಗಳಿಗೆ ಮೂಕ ಬೆಂಬಲ, ಸಾಂವಿಧಾನಿಕ ಅನುಮತಿ ಕೊಡುವುದನ್ನು ಬಿಟ್ಟು ಬೇರೇನನ್ನೂ ಮಾಡಲಿಲ್ಲ. ಭಾರತದ ಸಂಸದೀಯ ಪ್ರಜಾತಂತ್ರದಲ್ಲಿ ರಾಷ್ಟ್ರಪತಿ ಹುದ್ದೆ ಕೇವಲ ಸಾಂಕೇತಿಕವಾದರೂ, ಕೇಂದ್ರ ಸರಕಾರದ ಕ್ಯಾಬಿನೆಟ್‌ನ ಸಲಹೆ-ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ನಡೆಯಬೇಕಿದ್ದರೂ, ದೇಶದ ಸಂವಿಧಾನಕ್ಕೆ ಗಂಡಾಂತರ ಒದಗಿದಾಗ ರಾಷ್ಟ್ರಪತಿಗಳು ತಮ್ಮ ಚಿನ್ನದ ಪಂಜರದಿಂದ ಹೊರಬಂದು ಮಾತಾಡಿದ್ದಿದೆ. ಈ ದೇಶದ ಮೊದಲ ದಲಿತ ರಾಷ್ಟ್ರಪತಿಯಾಗಿದ್ದ ಕೆ. ಆರ್. ನಾರಾಯಣನ್ ಅದಕ್ಕೊಂದು ಉದಾಹರಣೆ.

ಆದರೆ ಸರ್ವಾಧಿಕಾರಿಗಳು ಪ್ರಧಾನಿಗಳಾಗಿದ್ದಾಗ ರಾಷ್ಟ್ರಪತಿಗಳಾಗುವವರು ಚಿನ್ನದಪಂಜರದಲ್ಲಿರುವ ಸಾಕುಗಿಳಿಗಳು ಮಾತ್ರವಾಗಿರುತ್ತಾರೆ. ಅದು ಇಂದಿರಾಗಾಂಧಿಯ ಕಾಲದಲ್ಲೂ ಸಾಬೀತಾಗಿತ್ತು. ಈಗ ಈ ವಿದ್ಯಮಾನ ಮೋದಿಯವರ ಕಾಲದಲ್ಲಿ ಅದಕ್ಕಿಂತಲೂ ಅಪಾಯಕಾರಿಯಾದ ಸ್ವರೂಪವನ್ನು ತೆಗೆದುಕೊಂಡಿದೆ. ಈ ದೇಶದಲ್ಲಿ ಆದಿವಾಸಿಗಳು 'ಜಲ್-ಜಂಗಲ್-ಜಮೀನ್' ಮೇಲೆ ತಮ್ಮ ಸ್ವಾಯತ್ತ ಅಧಿಕಾರವನ್ನು ಉಳಿಸಿಕೊಳ್ಳಲು ಈಸ್ಟ್ ಇಂಡಿಯಾ ಕಂಪೆನಿಯೆಂಬ ವಿದೇಶಿ ಬಂಡವಾಳಶಾಹಿ, ಭೂಮಾಲಕರ ವಿರುದ್ಧ ಸ್ವಾತಂತ್ರ್ಯ ಸಮರವನ್ನು ಪಾರ್ರಂಭಿಸಿದ್ದರು. ಇಂದು ಕೂಡ ಆದಿವಾಸಿಗಳು ಅದೇ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಆಗ ಹೋರಾಟ ಮಾಡಿದವರನ್ನು ದೇಶಭಕ್ತರೆಂದು, ಆ ಹೋರಾಟಗಳನ್ನು ಸ್ವಾತಂತ್ರ್ಯ ಸಮರವೆಂದು ಪ್ರೆಸಿಡೆಂಟ್ ಮುರ್ಮು ತಮ್ಮ ಮೊದಲ ಭಾಷಣದಲ್ಲಿ ಹಾಡಿಹೊಗಳಿದ್ದಾರೆ. ಆದರೆ ಈ ಕಾಲದಲ್ಲಿ ಅದೇ ಹೋರಾಟ ಮುಂದುವರಿಸುತ್ತಿರುವವರನ್ನು ದೇಶದ್ರೋಹಿಗಳೆನ್ನುವವರೇ ಅವರನ್ನು ರಾಷ್ಟ್ರಪತಿಯನ್ನಾಗಿಸಿದ್ದಾರೆ. ಹೀಗಾಗಿ ಅವರು ಸಂಕೇತಿಸುವುದು ಆದಿವಾಸಿಗಳ ಕನಸಲ್ಲ. ಆದಿವಾಸಿಗಳ ಕನಸುಗಳನ್ನು ಕೊಂದವರ ಉದ್ದೇಶಗಳನ್ನು! ದಲಿತ ಹಾಗೂ ಆದಿವಾಸಿ ಸಮುದಾಯಗಳ ಮೇಲೆ ನಡೆಸುತ್ತಿರುವ ನಿರಂತರ ಆರ್ಥಿಕ-ಸಾಂಸ್ಕೃತಿಕ ದಾಳಿಗಳನ್ನು ಮರೆಮಾಚಲು ಮಾಜಿ ರಾಷ್ಟ್ರಪತಿ ಕೋವಿಂದ್‌ಅವರ ದಲಿತ ಹಿನ್ನೆಲೆಯನ್ನು, ಈಗ ಮುರ್ಮು ಅವರ ಆದಿವಾಸಿ ಹಿನ್ನೆಲೆಯನ್ನು ಬಿಜೆಪಿ-ಅರೆಸ್ಸೆಸ್ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಕೊಲ್ಲುತ್ತಿರುವವರೇ ಕಾಯು ತ್ತಿರುವವರು ಎಂಬ ವೇಷ ಧರಿಸಿದ್ದಾರೆ. ದಮನಿತ ಸಮುದಾಯಗಳ ಮೇಲೆ ಹೆಗಲ ಮೇಲೆ ಸ್ನೇಹದ ಕೈಹಾಕಿ ಒಡಲನ್ನು ಸೂರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಈ ಮೋಸಕ್ಕೆ ಪರದೆಗಳಿರಲಿಲ್ಲ. ಆರೆಸ್ಸೆಸ್ ಕಾಲದಲ್ಲಿ ಈ ಹಗಲು ದರೋಡೆಗೆ ದೇಶ-ಧರ್ಮದ ಮುಸುಕು ಹೊದಿಸಿ ಕಾಣದಂತೆ ಮಾಡಲಾಗಿದೆ.

ಆದ್ದರಿಂದ ಈ ದೇಶದಲ್ಲಿ ದಮನಿತ ಸಮುದಾಯಗಳಲ್ಲಿ ದ್ರೌಪದಿಯಗಿ ರೂಪಾಂತರವಾದವರಿಗೆ ಮಾತ್ರ ಕನಸು ಕಾಣುವ ಮತ್ತು ಕನಸನ್ನು ನನಸಾಗಿಸಿಕೊಳ್ಳುವ ಅವಕಾಶವನ್ನು ಈ ಕಾರ್ಪೊರೇಟ್-ಬ್ರಾಹ್ಮಣಶಾಹಿ ವ್ಯವಸ್ಥೆ ಕೊಡುತ್ತದೆಯೇ ವಿನಃ ಸ್ವಾಭಿಮಾನ ಮತ್ತು ಸ್ವಂತಿಕೆಯಿಂದ ಸ್ವಾಯತ್ತವಾಗಿ ಬಾಳಬೇಕೆಂದುಕೊಂಡ ದೋಪ್ದಿಗಳ ಕನಸುಗಳು ನನಸಾಗುವುದಿರಲಿ ಬದುಕುಗಳನ್ನೇ ಛಿದ್ರಗೊಳಿಸಲಾಗುತ್ತಿದೆ. ಹೀಗಾಗಿ ಆದಿವಾಸಿ ಮಹಿಳೆಯೊಬ್ಬರು ಪ್ರೆಸಿಡೆಂಟ್ ಆದರೆಂದು ಈ ದೇಶದ ಪ್ರಜಾತಂತ್ರದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ಮುನ್ನ ದೋಪ್ದಿಯರಿಗೂ ದ್ರೌಪದಿಯರಿಗೂ �

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News