ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ: ಹವಾಮಾನ ಕೇಂದ್ರ
ಉಡುಪಿ, ಆ.೫: ಮುಂದಿನ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಕಾರಣ, ಪಶ್ಚಿಮದ ಅರಬಿಸಮುದ್ರದಲ್ಲಿ 3ರಿಂದ 3.8 ಮೀ. ಎತ್ತರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಇದರಿಂದಾಗಿ ಮಂಗಳೂರಿನಿಂದ ಕಾರವಾರದವರೆಗಿನ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಬೆಂಗಳೂರಿನ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.
ಈ ಅವಧಿಯಲ್ಲಿ ಗಂಟೆಗೆ 45ರಿಂದ 55ಕಿ.ಮೀ. ವೇಗದ ಗಾಳಿಯು ಬೀಸುವ ಸಂಭವವಿದೆ. 24 ಗಂಟೆಗಳ ಅವಧಿಯಲ್ಲಿ 204.5 ಮಿ.ಮೀ.ಗೂ ಅಧಿಕ ಮಳೆ ಸುರಿಯುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ನ್ನು ಘೋಷಿಸಲಾಗಿದೆ. ಆ.7ರಿಂದ 9ರವರೆಗೆ ಆರೆಂಜ್ ಅಲರ್ಟ್ ಇರುತ್ತದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದುವರಿದ ಮಳೆ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಉಡುಪಿಯಲ್ಲಿ 62ಮಿ.ಮೀ. ಮಳೆ: ಎರಡು ದಿನಗಳ ವಿರಾಮದ ಬಳಿಕ ಕಳೆದ ಸಂಜೆಯಿಂದ ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದು, ಇಂದು ದಿನವಿಡೀ ಸಾಧಾರಣದಿಂದ ಭಾರೀ ಮಳೆ ಸುರಿದಿದೆ.
ಇಂದು ಬೆಳಗ್ಗೆ 8.30 ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 62 ಮಿ.ಮೀ. ಮಳೆ ಬಿದ್ದಿದೆ. ಕಾರ್ಕಳದಲ್ಲಿ 969 ಮಿ.ಮೀ., ಕಾಪುವಿನಲ್ಲಿ 88.3 ಮಿ.ಮೀ., ಬೈಂದೂರಿನಲ್ಲಿ 68ಮಿ.ಮೀ., ಹೆಬ್ರಿಯಲ್ಲಿ 62.5 ಮಿ.ಮೀ., ಕುಂದಾಪುರದಲ್ಲಿ 51.9ಮಿ..ಮೀ., ಉಡುಪಿಯಲ್ಲಿ 24.9ಮಿ.ಮೀ. ಹಾಗೂ ಬ್ರಹ್ಮಾವರದಲ್ಲಿ 22.6ಮಿ.ಮೀ. ಮಳೆ ಬಿದ್ದ ಬಗ್ಗೆ ವರದಿಗಳು ಬಂದಿವೆ.