ರಾಷ್ಟ್ರಧ್ವಜದ ಪಾವಿತ್ರ್ಯ ಮತ್ತು ಆದರ್ಶಗಳನ್ನು ಉಳಿಸಿ

Update: 2022-08-06 04:10 GMT

ಆರೆಸ್ಸೆಸ್ ಮತ್ತು ಬಿಜೆಪಿಯವರಿಗೆ ಪಾವಿತ್ರ್ಯ, ನೈತಿಕತೆ ಇತ್ಯಾದಿಗಳೆಲ್ಲ ವೇಷದ ಸಂಗತಿಗಳೇ ಹೊರತು, ನೈಜ ಸ್ಫೂರ್ತಿಯಿಂದ ಹುಟ್ಟುವುದು ಅನುಮಾನ. ಯಾಕೆಂದರೆ ಮನುಷ್ಯತ್ವದಲ್ಲಿ ನಂಬಿಕೆ ಇಟ್ಟು ರಾಜಕಾರಣ ಮಾಡಿದರೆ ಮಾತ್ರ ಜನಪರವಾಗಿರಲು ಸಾಧ್ಯ.

ರಾಷ್ಟ್ರ ಧ್ವಜ-ರಾಷ್ಟ್ರಗೀತೆ-ಸಂವಿಧಾನ ನಮ್ಮ ಸ್ವಾತಂತ್ರ್ಯ ಮತ್ತು ಸ್ವಯಮಾಡಳಿತದ ಮಹಾಶಕ್ತಿ ಮತ್ತು ಸ್ಫೂರ್ತಿಗಳು. ಇವು ಯಾವುದೇ ಜಾತಿ, ಮತ, ಪಂಥಗಳಿಗೆ ಸೇರಿದವಲ್ಲವಾದ್ದರಿಂದ ಜಾತ್ಯತೀತತೆಯ ಪ್ರತೀಕವಾದ ಪವಿತ್ರ ಶಕ್ತಿಗಳಾಗಿವೆ. ಬಿಜೆಪಿ ಮತ್ತು ಆರೆಸ್ಸೆಸ್ ಈ ಮೂರನ್ನೂ ಪವಿತ್ರವಾದ ಲಾಂಛನಗಳೆಂದು ಪರಿಗಣಿಸದೆ ಇವುಗಳ ವಿರುದ್ಧ ಬಹಿರಂಗವಾಗಿ ಮತ್ತು ಗುಪ್ತವಾಗಿ ಅಪಪ್ರಚಾರ ಮಾಡಿಕೊಂಡೇ ಬಂದಿವೆ. ಮೋದಿಯವರ ನೇತೃತ್ವದ ಬಿಜೆಪಿಯು ಸಂವಿಧಾನಕ್ಕೆ ವಂದಿಸಿ ಸಂವಿಧಾನದ ಆಶಯಗಳನ್ನು ಧ್ವಂಸ ಮಾಡಿದಂತೆ ಈಗ ರಾಷ್ಟ್ರ ಧ್ವಜವನ್ನು ಬಳಸಿಕೊಳ್ಳಲು ದೇಶದಾದ್ಯಂತ ರಾಷ್ಟ್ರ ಧ್ವಜಗಳನ್ನು ಹಾರಿಸುವ ಉತ್ಸವ ಆಚರಿಸಲು ಹೊರಟಿದೆ.

‘‘ತ್ರಿವರ್ಣ ಧ್ವಜವು ಸ್ವಾತಂತ್ರ್ಯ, ಪ್ರಜಾತಂತ್ರ ಹಾಗೂ ಸತ್ಯಶೀಲತೆಗಳನ್ನು ಪ್ರತಿನಿಧಿಸುತ್ತದೆ. ಸಾವಿರಗಟ್ಟಲೆ ವರ್ಷಗಳಿಂದ ಈ ನೆಲದಲ್ಲಿ ಪರಂಪರಾಗತವಾಗಿ ಬಂದಿರುವ ಸುಂದರ ವಿಚಾರಗಳ ಲಾಂಛನವಾಗಿ ಧ್ವಜವನ್ನು ರೂಪಿಸಲಾಗಿದೆ’’ ಎನ್ನುವುದು ನೆಹರೂ ಅವರ ನಿಲುವಾಗಿತ್ತು.

ಬಿಜೆಪಿ ಮತ್ತು ಆರೆಸ್ಸೆಸ್‌ಗಳ ಇತಿಹಾಸ ಗೊತ್ತಿರುವವರಿಗೆ ಈ ಹೊಸ ವರಸೆ ಪ್ರಾಮಾಣಿಕವಾದುದಲ್ಲವೆಂದು ಗೊತ್ತಿದೆ. ಈ ಪವಿತ್ರವಾದ ನೆಲದಲ್ಲಿ ಯಾವುದು ಸಹಜವೂ ಗೌರವಯುತವೂ ಆದ ಸಂಗತಿಗಳಿವೆಯೋ ಅವುಗಳನ್ನೆಲ್ಲ ಹಾಳುಗೆಡವಿ ಕೇವಲ ಗಿಮಿಕ್ಕಿಗಾಗಿ ಬಳಸಿಕೊಳ್ಳುವುದು ಬಿಜೆಪಿ-ಆರೆಸ್ಸೆಸ್‌ನ ದುಷ್ಟ ತಂತ್ರದ ಭಾಗ. ಆರೆಸ್ಸೆಸ್ ತೀರಾ ಇತ್ತೀಚಿನವರೆಗೂ ನಾಗಪುರದ ತಮ್ಮ ಕಚೇರಿಯ ಮೇಲೆ ಧ್ವಜ ಹಾರಿಸಿರಲಿಲ್ಲ. ಬಲವಂತವಾಗಿ ಇಬ್ಬರು ಯುವಕರು ಅವರ ಕಚೇರಿಗೆ ನುಗ್ಗಿ ಧ್ವಜ ಹಾರಿಸಿದ ಮೇಲೆ ಆರೆಸ್ಸೆಸ್ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲು ಪ್ರಾರಂಭಿಸಿದರು. ಇವರಿಗೆ ಲಾಂಛನಗಳ ಕುರಿತಾಗಿ ಎಂದಿಗೂ ಪವಿತ್ರ ಉದ್ದೇಶವಿಲ್ಲ. ನಮ್ಮ ಧ್ವಜ ಯಾವುದನ್ನು ಪ್ರತಿನಿಧಿಸುತ್ತಿತ್ತೋ ಆ ಎಲ್ಲ ಸ್ಫೂರ್ತಿಯನ್ನು ಧ್ವಂಸ ಮಾಡುತ್ತಲೇ ಇವುಗಳಿಂದ ಜನರ ಗಮನ ದೂರ ಮಾಡಲು ‘ಹರ್ ಘರ್ ತಿರಂಗಾ’ ಎಂಬ ಘೋಷಣೆ ಪ್ರಾರಂಭಿಸಿದ್ದಾರೆ.

ಧ್ವಜದಲ್ಲಿನ ತ್ರಿವರ್ಣಗಳು ಮತ್ತು ಅಶೋಕ ಚಕ್ರವು ತ್ಯಾಗ, ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಜತೆಗೆ ಸ್ವದೇಶಿ ಅಂಶವನ್ನೂ ಪ್ರತಿನಿಧಿಸುತ್ತವೆ. ಬ್ರಿಟಿಷರನ್ನು ಮಣಿಸಿ ಸಮಸ್ತ ಭಾರತೀಯರ ಆಶಯ-ಪರಂಪರೆಯನ್ನು ಪ್ರತಿಬಿಂಬಿಸುವ ಧೀರೋದಾತ್ತ ಸಂಕೇತವನ್ನಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರೂಪಿಸಿದ್ದ ಧ್ವಜವನ್ನು ಆರೆಸ್ಸೆಸ್ ಎಂದೂ ಒಪ್ಪಿರಲಿಲ್ಲವೆನ್ನುವುದು ಇದರ ಮುಖವಾಣಿ ಪತ್ರಿಕೆಯಲ್ಲಿನ ಬರಹಗಳು ಸಾಕ್ಷಿಯಾಗಿ ನಿಂತಿವೆ.

ನಮ್ಮ ರೈತರು ತಯಾರಿಸಿದ ಹತ್ತಿ ಮತ್ತು ರೇಷ್ಮೆಯಲ್ಲಿ ಧ್ವಜವನ್ನು ಸಿದ್ಧಪಡಿಸಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರರು ಧ್ವಜ ರೂಪಿಸುವ ಚರ್ಚೆಯಲ್ಲಿ ನಿರ್ಣಯ ಅಂಗೀಕರಿಸಿದ್ದರು. ಆದರೆ, ಮೋದಿ ಸರಕಾರವು ಈಗ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜಗಳನ್ನು ಮುದ್ರಿಸಿ ಹಂಚುತ್ತಿದೆ. ಇದು ಧ್ವಜದ ಪಾವಿತ್ರ್ಯದ ಮತ್ತು ಸ್ವದೇಶಿ ತತ್ವದ ಅವಮಾನವೂ ಆಗಿದೆ. ಬಿಜೆಪಿ ಧ್ವಜದ ಆಕಾರವನ್ನೇ ವಿಕೃತಗೊಳಿಸಿರುವುದನ್ನು ಮಾಧ್ಯಮಗಳು ತೋರಿಸುತ್ತಿವೆ. ಚರಕದ ಮುಂದೆ ಕೂತು ಹಲವು ಬಾರಿ ಪೋಸು ಕೊಟ್ಟಿದ್ದ ಮೋದಿಯವರ ಕಣ್ಣು ಯಾವುದರ ಮೇಲೆಲ್ಲ ಬೀಳುತ್ತದೋ ಅದು ಸಂಪೂರ್ಣ ಹಾಳಾಯಿತೆಂದೇ ಅರ್ಥ. ಈಗ ಯಾವ ಸ್ವದೇಶಿಯೂ ಇಲ್ಲ ದೇಶದ ವಸ್ತುಗಳೆಲ್ಲ ಚೀನಿಮಯವಾಗುತ್ತಿವೆ. ಮೋದಿಯವರು ಧ್ವಜಗಳ ವಿಚಾರದಲ್ಲೂ ಚೀನಾಕ್ಕೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನೂ ಚೀನಾದ ಕಂಪೆನಿಗಳಿಗೆ ಗುತ್ತಿಗೆ ನೀಡಿ ತಯಾರು ಮಾಡಿಸಿದ್ದರೆಂಬ ಆರೋಪ ಈಗಾಗಲೇ ಇದೆ.

ಬಿಜೆಪಿ ಮಾಡುತ್ತಿರುವ ‘ಮನೆ ಮನೆಯಲ್ಲಿ ಧ್ವಜ’ ಯೋಜನೆಗೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಬಿಜೆಪಿಯವರು ಧ್ವಜ ಹಾರಿಸಲು ಕರೆ ಕೊಡುವ ಮೊದಲು,

೧. ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಸುಪರ್ದಿಯಲ್ಲಿ ಹತ್ತಿ ಮತ್ತು ರೇಷ್ಮೆಯಿಂದ ಸಿದ್ಧಪಡಿಸಿದ ಧ್ವಜಗಳನ್ನು ಬಳಸಬೇಕು. ಇದರಿಂದ ರೈತರಿಗೆ, ನೇಕಾರರಿಗೆ ಅನುಕೂಲವಾಗುತ್ತದೆ. ಧ್ವಜ ತಯಾರಿಯನ್ನೂ ಲಾಭದಾಯಕ ದಂಧೆ ಎಂದು ತಿಳಿದು ಅಂಬಾನಿಗಳಂತಹ ಬೃಹತ್ ಉದ್ಯಮಿಗಳಿಗೆ ಅವಕಾಶ ಮಾಡಿಕೊಟ್ಟರೆ ಅಥವಾ ಚೀನಾದಿಂದ ಧ್ವಜಗಳನ್ನು ಆಮದು ಮಾಡಿಕೊಂಡರೆ ಅದು ದುಷ್ಟತನದ ಪರಮಾವಧಿಯಾಗುತ್ತದೆ. ಧ್ವಜದ ಆಕಾರವನ್ನು ವಿಕೃತಗೊಳಿಸಿ ಪಾಲಿಸ್ಟರ್ ಬಟ್ಟೆಯಲ್ಲಿ ತಯಾರಿಸಲು ಹೊರಟಿರುವುದು ದುಷ್ಟತನದ ಸಂಕೇತ.

೨. ಆರೆಸ್ಸೆಸ್ ದೇಶದ ಜನರಿಗೆ ಧ್ವಜ ಹಾರಿಸಿ ಎಂದು ಹೇಳುವ ಮೊದಲು ಕಡ್ಡಾಯವಾಗಿ ತಮ್ಮ ಪ್ರತಿ ಶಾಖೆಗಳಲ್ಲೂ, ಕೇಶವಕೃಪಾದಂತಹ ಕಚೇರಿಗಳಲ್ಲಿ ಹಾರಿಸಬೇಕು. ತ್ರಿವರ್ಣ ಧ್ವಜವು ಅಪಶಕುನದ ಸಂಕೇತ ಎಂದು ಅಪಪ್ರಚಾರ ಮಾಡಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ಬರೆದಿರುವ ಬರಹಗಳನ್ನು ಹಿಂಪಡೆದು ದೇಶದ ಜನರಲ್ಲಿ ಬಹಿರಂಗ ಕ್ಷಮೆ ಕೇಳಬೇಕು.

೩. ಭಾರತದ ಧ್ವಜವನ್ನು ಸುರಯ್ಯಾ ತ್ಯಾಬ್ಜಿ, ಪಿಂಗಳಿ ವೆಂಕಯ್ಯ, ಗಾಂಧೀಜಿ, ನೆಹರೂ, ಸುಭಾಶ್ ಚಂದ್ರ ಬೋಸ್ ಮುಂತಾದ ಮಹಾನ್ ದೇಶಭಕ್ತರು ಸ್ವಾತಂತ್ರ್ಯ ಹೋರಾಟದ ದೀರ್ಘ ಪ್ರಯತ್ನದ ಮೂಲಕ ಸಿದ್ಧಗೊಳಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು.

೪. ಆರೆಸ್ಸೆಸ್ ಪರಿವಾರದ ಜನಸಂಘ, ಬಿಜೆಪಿ ಇತರ ಸಂಘಟನೆಗಳು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗೆಗೆ ವ್ಯಕ್ತಪಡಿಸಿರುವ ಅಸಮರ್ಪಕ ಹಾಗೂ ಹಾನಿಕರವಾದ ಅಭಿಪ್ರಾಯಗಳಿಗೆ ಕ್ಷಮೆ ಕೇಳಬೇಕು.

೫. ದೇಶದ ಅಮೂಲ್ಯ ಸಂಪತ್ತನ್ನು ದೇಶದ ಜನರಿಗೆ ಉಳಿಸಬೇಕು. ಭಿನ್ನಮತವನ್ನು ಗೌರವಿಸಬೇಕು. ಪ್ರಜಾತಂತ್ರದ ಉದಾತ್ತ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆಂದು  ಹಾಗೂ ಬಗಲಲ್ಲಿ ವಿಷ ಇಟ್ಟುಕೊಂಡು ದೇಶದ ಜನರನ್ನು ಮರುಳು ಮಾಡುವುದಿಲ್ಲವೆಂದು ಬಹಿರಂಗವಾಗಿ ಪ್ರಮಾಣ ಮಾಡಿ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಾಗಬೇಕು.

ದೇಶದ ಸ್ವಾತಂತ್ರ್ಯ, ಭಿನ್ನಮತಗಳ ಕುರಿತಾದ ಗೌರವ, ವೈಜ್ಞಾನಿಕ ಮನೋಭಾವ, ಜಾತ್ಯತೀತವಾದ ಸೌಹಾರ್ದಭಾರತ, ದೇಶದ ಸಂಪತ್ತಿನ ಸಂರಕ್ಷಣೆ, ಯುವಜನರನ್ನು ಇತ್ಯಾತ್ಮಕ ಹಾದಿಗೆ ತಂದು ಮಾಡಬೇಕಾದ ಅಭಿವೃದ್ಧಿಯ ಆಶಯಗಳನ್ನು ಧ್ವಂಸ ಮಾಡಿ ದೆವ್ವವೊಂದು ಸಜ್ಜನರ ವೇಷ ತೊಟ್ಟು ಕುಣಿದಂತೆ ವರ್ತಿಸುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಗಾಂಧೀಜಿಯವರು ‘‘ಸಕಲ ಜನರು ನಮ್ಮ ಮಾತಿಗೂ ಇಲ್ಲಿ ಬೆಲೆಯುಂಟು ಎಂದುಕೊಳ್ಳಬೇಕು, ಎಲ್ಲಿ ಜನರಲ್ಲಿ ಮೇಲಿನ ವರ್ಗ, ಕೆಳವರ್ಗ  ಎಂಬುದು ಇರುವುದಿಲ್ಲವೋ,  ಎಲ್ಲಿ ವಿವಿಧ  ಮತ ಧರ್ಮಗಳ ಜನರು ಸಂಪೂರ್ಣವಾದ ಅನ್ಯೋನ್ಯತೆಯಿಂದ ಇರುವರೋ ಅಂತಹ ಭಾರತಕ್ಕಾಗಿ ನಾವು ಶ್ರಮಿಸಬೇಕಾಗಿದೆ. ಅಂತಹ ಭಾರತದಲ್ಲಿ ಅಸ್ಪಶ್ಯತೆಯ ಕಾಟ ಇರಬಾರದು, ಮಾದಕ ವಸ್ತುಗಳ ಪೀಡೆ ಇರಬಾರದು, ಇಲ್ಲಿ ಪುರುಷರಿಗೆ ಏನು ಹಕ್ಕೊ ಸ್ತ್ರೀಯರಿಗೂ ಅಂಥ ಹಕ್ಕುಗಳೇ ಇರಬೇಕು’’ ಎನ್ನುತ್ತಾರೆ. ಅಂತಹ ಭಾರತ ನಿರ್ಮಾಣ ಮಾಡುವ ಕನಸುಗಳನ್ನು ಬಿಜೆಪಿಯು ಮುಕ್ಕು ಮಾಡುತ್ತಿದೆ. ಹಾಗಾಗಿ ಅಂತರಂಗದಲ್ಲಿರಬೇಕಾದ ಭಕ್ತಿ ಭಾವಗಳನ್ನು, ಪಾವಿತ್ರ್ಯದ ಮಹೋದ್ದೇಶಗಳನ್ನು ಹೊಸಕಿ ಹಾಕುತ್ತಿದೆ. ದೇಶವನ್ನು ಭಿಕಾರಿ ಮಾಡಿ ಜನರ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಧ್ವಜವನ್ನು ಬಳಸಲಾಗುತ್ತಿದೆ. ಹಾಗಾಗಿ ಬಿಜೆಪಿ ಹಾಗೂ ಆರೆಸ್ಸೆಸ್‌ಗಳು  ಹಿಟ್ಲರ್‌ನನ್ನು ಆದರ್ಶ ಎಂದು ಭಾವಿಸುವುದು ಬಿಟ್ಟು ನೈಜ ಪ್ರಜಾತಂತ್ರದ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಾಗ ಮಾತ್ರ ಧ್ವಜ ಹಾರಿಸಿ ಎಂದು ಜನರಿಗೆ ಕರೆಕೊಡುವ ನೈತಿಕತೆ ಬರುತ್ತದೆ.

ಆದರೆ ಆರೆಸ್ಸೆಸ್ ಮತ್ತು ಬಿಜೆಪಿಯವರಿಗೆ ಪಾವಿತ್ರ್ಯ, ನೈತಿಕತೆ ಇತ್ಯಾದಿಗಳೆಲ್ಲ ವೇಷದ ಸಂಗತಿಗಳೇ ಹೊರತು, ನೈಜ ಸ್ಫೂರ್ತಿಯಿಂದ ಹುಟ್ಟುವುದು ಅನುಮಾನ. ಯಾಕೆಂದರೆ ಮನುಷ್ಯತ್ವದಲ್ಲಿ ನಂಬಿಕೆ ಇಟ್ಟು ರಾಜಕಾರಣ ಮಾಡಿದರೆ ಮಾತ್ರ ಜನಪರವಾಗಿರಲು ಸಾಧ್ಯ. ಬಿಜೆಪಿ ಉದ್ದೇಶಪೂರ್ವಕವಾಗಿ ವಿಶ್ವಸ್ಥವಾದ ಮಾನವೀಯ ಆದರ್ಶಗಳನ್ನು ನಿರಾಕರಿಸುತ್ತದೆ. ದೇಶದ ಅಸಂಖ್ಯಾತ ಜನರು ತಮ್ಮ ಪ್ರಾಣ ಬಲಿಕೊಟ್ಟು ಆಸ್ತಿ ಪಾಸ್ತಿಗಳನ್ನು ತ್ಯಾಗ ಮಾಡಿ ದೇಶಕ್ಕಾಗಿ ರಕ್ತ ಸುರಿಸುತ್ತಿದ್ದಾಗ ಇದೇ ಬಿಜೆಪಿಯ ಪೂರ್ವಜರು ಬ್ರಿಟಿಷರ ಜೊತೆ ಸೇರಿಕೊಂಡು ಜನರನ್ನು ದಮನಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟವರೂ ಇದ್ದಾರೆ. ಇಂಥವರಿಗೆ ಧ್ವಜ ಹಾರಿಸುವ ಯಾವ ನೈತಿಕತೆಯೂ ಇಲ್ಲ. ಬಾವುಟ ಹಾರಿಸುವ ಮೂಲಕ ದೇಶಭಕ್ತರ ವೇಷ ತೊಡಲು ಹೊರಟಿರುವ ಬಿಜೆಪಿಯವರ ಬೆನ್ನ ಹಿಂದೆ ಕ್ರೂರವೂ, ದಮನಕಾರಿಯೂ, ಕೇಡಿಗತನದ ದೆವ್ವವೊಂದು ಅಡಗಿದೆ. ಈ ದೆವ್ವದ ಸ್ವಭಾವವು ಈಗಾಗಲೇ ದೇಶದ ಮೇಲೆ ಮಾಡಿರುವ ಹಾನಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು.

ಆದರೆ ದೇಶದ ಜನರು ಧ್ವಜ ಹಾರಿಸಬೇಕು. ಯಾಕೆಂದರೆ ಈ ದೇಶ ಜನರಿಗೆ ಸೇರಿದ್ದು. ಧ್ವಜ ಹಾರಿಸುವ ಕಾರ್ಯಕ್ರಮವನ್ನು ನಾಡಿನ, ದೇಶದ ಜನರು ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅರ್ಪಿಸಬೇಕು ಹಾಗೂ ಧ್ವಜದ ವಿರುದ್ಧ ಇದ್ದ, ಬ್ರಿಟಿಷರ ಜೊತೆ ಸೇರಿಕೊಂಡು ದೇಶಕ್ಕೆ, ದೇಶಭಕ್ತರಿಗೆ ದ್ರೋಹ ಮಾಡಿದ ಆರೆಸ್ಸೆಸ್‌ನ ವಿರುದ್ಧ ಹಾರಿಸಬೇಕು. ರಾಜ್ಯಗಳ, ದುಡಿಯುವ ಜನರ, ಬಹುಸಂಖ್ಯಾತರ ಆಶಯಗಳನ್ನು, ಸ್ವಾತಂತ್ರ್ಯವನ್ನು ಕಿತ್ತುಕೊಂಡು ಅಂಬಾನಿ, ಅದಾನಿ ಹಾಗೂ ಚೀನಿಯರಿಗೆ ಅನುಕೂಲ ಮಾಡಿಕೊಡಲು ಹೊರಟಿರುವ ಬಿಜೆಪಿಯವರಿಗೆ ಧಿಕ್ಕಾರ ಹೇಳಿ ಧ್ವಜವನ್ನು ಹಾರಿಸಬೇಕು. ಸ್ವಾತಂತ್ರ್ಯ ಸಂಗ್ರಾಮಕ್ಕೆ ನಿರಂತರವಾಗಿ ದ್ರೋಹ ಬಗೆದ ಸಂಘಪರಿವಾರದವರೇ ನಮ್ಮ ಪವಿತ್ರವಾದ ಬಹುತ್ವದ ಶಕ್ತಿಯ ಧ್ವಜ ಮುಟ್ಟುವಷ್ಟು ಪಾವಿತ್ರ್ಯ ನಿಮ್ಮ ಬಳಿಯಿಲ್ಲ,  ನೀವು ಪವಿತ್ರರಾಗಬೇಕಾದರೆ ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಬಗೆದ ದ್ರೋಹದ ಬಗ್ಗೆ ಸಾರ್ವಜನಿಕವಾಗಿ  ಕ್ಷಮೆ ಕೇಳಬೇಕೆಂದು ಸ್ವಾತಂತ್ರ್ಯ ಪ್ರೇಮಿ ನಾಡಿನ ಜನರು, ಯುವಜನರು ಅವರನ್ನು ಒತ್ತಾಯಿಸಬೇಕಾಗಿದೆ.

ಭಾರತವು ೭೫ ವರ್ಷಗಳ ಹಾದಿ ತುಳಿದಿದೆ. ದೇಶದ ಸ್ವಾತಂತ್ರ್ಯ ಇಂದು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ನಾಡಿನ ಯುವಜನತೆಯ ಮುಂದಿನ ಬಾಳು ಹಸನಾಗಬೇಕಾದರೆ ಸಂಕಷ್ಟಕ್ಕೆ ಕಾರಣರಾಗುತ್ತಿರುವವರನ್ನು ಸರಿಯಾಗಿ ಗುರುತಿಸಿ  ಅವರನ್ನು ಸೈದ್ಧಾಂತಿಕವಾಗಿ  ವಿರೋಧಿಸುವ ಸಂಕಲ್ಪ ಮಾಡಿ ಪವಿತ್ರ ಧ್ವಜವನ್ನು ಬಾನಿನೆತ್ತರಕ್ಕೆ ಹಾರಿಸಬೇಕೆಂದು ಹಾಗೂ ಬಿಜೆಪಿ ಆರೆಸ್ಸೆಸ್ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಹಾರಿಸುತ್ತಿದ್ದೇವೆಂದು ತೀರ್ಮಾನಿಸಿ ಹಾರಿಸಬೇಕೆಂದು ವಿನಂತಿಸುತ್ತೇನೆ.

 ತಮ್ಮ ಸೋಷಿಯಲ್ ಮೀಡಿಯಾಗಳ ಡಿಪಿಗಳಲ್ಲಿ ರಾಷ್ಟ್ರಧ್ವಜವನ್ನು ಹಾಕಿಕೊಳ್ಳುವವರೆಲ್ಲರೂ ಸಹ ಸ್ವಾತಂತ್ರ್ಯ ಹೋರಾಟದ ವಿರೋಧಿಗಳೂ ಹಾಗೂ ಪ್ರಸ್ತುತ ದೇಶದ ಆಸ್ತಿ ಪಾಸ್ತಿಗಳನ್ನು ಖಾಸಗಿಯವರಿಗೆ ಅಡವಿಡುತ್ತಿರುವ, ಯುವಜನರ ಬದುಕನ್ನು ಕಿತ್ತುಕೊಳ್ಳುತ್ತಿರುವ, ನಿರುದ್ಯೋಗ ಸೃಷ್ಟಿಸುತ್ತಿರುವವರ ವಿರುದ್ಧ ನಡೆಸುತ್ತಿರುವ ಬೃಹತ್ ಆಂದೋಲನವಿದೆಂದು ತೀರ್ಮಾನಿಸಿ ಹಾಕಿಕೊಳ್ಳಬೇಕೆಂದು ತಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ.

ಜೈ ಹಿಂದ್, ಜೈ ಕರ್ನಾಟಕ

Writer - ಸಿದ್ದರಾಮಯ್ಯ

contributor

Editor - ಸಿದ್ದರಾಮಯ್ಯ

contributor

Similar News