ಗಾಝಾದ ಮೇಲಿನ ಇಸ್ರೇಲ್ ದಾಳಿ ಅಕ್ರಮ: ವಿಶ್ವಸಂಸ್ಥೆ ವಿಶೇಷ ಪ್ರತಿನಿಧಿ

Update: 2022-08-07 18:19 GMT

ವಿಶ್ವಸಂಸ್ಥೆ, ಆ.7: ಆಕ್ರಮಿತ ಪಶ್ಚಿಮ ದಂಡೆಯಲ್ಲಿನ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ವಾಯುದಾಳಿ ಕಾನೂನುಬಾಹಿರವಷ್ಟೇ ಅಲ್ಲ ಬೇಜವಾಬ್ದಾರಿಯ ಕೃತ್ಯವಾಗಿದ್ದು, ಈ ಹಿಂಸಾಚಾರ ಅಂತ್ಯಕ್ಕೆ ರಾಜತಾಂತ್ರಿಕ ಕ್ರಮದ ಅಗತ್ಯವಿದೆ ಎಂದು ಆಕ್ರಮಿತ ಪೆಲೆಸ್ತೀನ್ ಪ್ರದೇಶಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫ್ರಾನ್ಸೆಸ್ಕಾ ಅಲ್ಬಾನೆರ್ ಹೇಳಿರುವುದಾಗಿ ಅಲ್ಜಝೀರಾ ವರದಿ ಮಾಡಿದೆ. ಗಾಝಾ ನಗರದ ಮೇಲೆ ಶುಕ್ರವಾರ ಇಸ್ರೇಲ್ ವಾಯುದಾಳಿ ಆರಂಭಿಸಿದೆ. 

ಈಗ ಅಲ್ಲಿನ ಪರಿಸ್ಥಿತಿ ಮಾನವೀಯ ಬಿಕ್ಕಟ್ಟಿನ ಅಂಚಿನಲ್ಲಿದೆ. ಪೆಲೆಸ್ತೀನೀಯರು ಎಲ್ಲೇ ಇದ್ದರೂ ಅವರ ಯೋಗಕ್ಷೇಮವನ್ನು ಖಾತರಿ ಪಡಿಸುವ ಏಕೈಕ ಮಾರ್ಗವೆಂದರೆ ಗಾಝಾದ ಮೇಲಿನ ಮುತ್ತಿಗೆಯನ್ನು ತೆಗೆದುಹಾಕಿ ಪೆಲೆಸ್ತೀನೀಯರು ಅಲ್ಲಿಗೆ ಪ್ರವೇಶಿಸಲು ನೆರವಾಗುವುದು ಎಂದವರು ಹೇಳಿದ್ದಾರೆ. ಇಸ್ರೇಲ್ಗೆ ಸ್ವರಕ್ಷಣೆಯ ಅಧಿಕಾರವಿದೆ ಎಂಬ ಅಮೆರಿಕದ ಹೇಳಿಕೆಯನ್ನು ಖಂಡಿಸಿದ ಅವರು, ಈ ಸಂಷರ್ಘ ತನ್ನನ್ನು ತಾನು ರಕ್ಷಿಸಿಕೊಳ್ಳುವ ನಡೆ ಎಂದು ಇಸ್ರೇಲ್ ಪ್ರತಿಪಾದಿಸುವಂತಿಲ್ಲ ಎಂದರು. ಅಮೆರಿಕದ ಹೇಳಿಕೆಯನ್ನು ಬ್ರಿಟನ್ ಪ್ರಧಾನಿ ಅಭ್ಯರ್ಥಿ ಲಿರ್ ಟ್ರುಸ್ ಕೂಡಾ ಬೆಂಬಲಿಸಿದ್ದರು. ಪೆಲೆಸ್ತೀನ್ನಲ್ಲಿ ರಕ್ಷಣೆಯ ಅಗತ್ಯವಿದೆ. ನನಗೆ ಮಾತ್ರವಲ್ಲ, ನಾಗರಿಕರ ಜೀವ ರಕ್ಷಿಸಲು ರಕ್ಷಣೆಯ ಅಗತ್ಯವಿದೆ. 

1967ರಿಂದಲೂ ಇಸ್ರೇಲ್ ತನ್ನನ್ನು ನಾಗರಿಕರಿಂದ ರಕ್ಷಿಸಿಕೊಳ್ಳುತ್ತಿದೆಯೇ ಎಂದವರು ಪ್ರಶ್ನಿಸಿದ್ದಾರೆ. ಆಕ್ರಮಿತ ಪೆಲೆಸ್ತೀನ್ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಆ ಬಗ್ಗೆ ವಿಶ್ವಸಂಸ್ಥೆಗೆ ವರದಿ ಮಾಡುವ ಸ್ವತಂತ್ರ ತಜ್ಞರಾಗಿ ವಿಶೇಷ ಪ್ರತಿನಿಧಿ ಕಾರ್ಯ ನಿರ್ವಹಿಸುತ್ತಾರೆ. ಗಾಝಾದಲ್ಲಿ ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆಯೇ ಎಂದು ವಿಶ್ವಸಂಸ್ಥೆ ಪರಿಶೀಲಿಸಿ ಇದಕ್ಕೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು. ಹೊಣೆಗಾರಿಕೆಯ ಕೊರತೆ ಇಸ್ರೇಲ್ ಅನ್ನು ಬಲಪಡಿಸುತ್ತಿದೆ. ಆಕ್ರಮಣವನ್ನು ಕೊನೆಗೊಳಿಸುವುದು ಇದಕ್ಕೆ ಇರುವ ಏಕೈಕ ಪರಿಹಾರವಾಗಿದೆ ಎಂದು ಅಲ್ಬಾನೆರ್ ಹೇಳಿದ್ದಾರೆ. 

ಗಾಝಾದಲ್ಲಿ 2021ರ ಮೇ ತಿಂಗಳಿನಲ್ಲಿ ನಡೆದ ಕ್ರೂರ ಯುದ್ಧದ ಬಳಿಕ ವಿಶ್ವಸಂಸ್ಥೆ ನೇಮಿಸಿದ್ದ ಸ್ವತಂತ್ರ ತನಿಖಾ ಆಯೋಗವು ‘ಪೆಲೆಸ್ತೀನಿಯನ್ ಮುಖಂಡರು ಭವಿಷ್ಯದ ದೇಶಕ್ಕಾಗಿ ಬಯಸುತ್ತಿರುವ ಭೂಮಿಯ ಮೇಲಿನ ಆಕ್ರಮಣವನ್ನು ಕೊನೆಗೊಳಿಸುವುದಕ್ಕಿಂತಲೂ ಹೆಚ್ಚಿನದನ್ನು ಇಸ್ರೇಲ್ ಮಾಡಬೇಕಿದೆ. ಪೆಲೆಸ್ತೀನೀಯರಿಗೂ ಸಮಾನ ಮಾನವ ಹಕ್ಕುಗಳ ಅವಕಾಶ ನೀಡಬೇಕು ’ ಎಂದು ವರದಿ ನೀಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News