KAS ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸುವುದಾಗಿ ನಂಬಿಸಿ ವಂಚನೆ: ಆರೋಪಿಯ ಬಂಧನ
ಬೆಂಗಳೂರು, ಆ.10: ಕೆಎಎಸ್ (KAS) ಪರೀಕ್ಷೆ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸವಿತಾ ಶಾಂತಪ್ಪ ಎಂಬುವರಿಗೆ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸುವುದಾಗಿ ನಂಬಿಕೆ ಹುಟ್ಟಿಸಿ ಬರೋಬ್ಬರಿ 59 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪದಡಿ ಸಿದ್ದರಾಜು ಕಟ್ಟಿಮನಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಂಚನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸವಿತಾ ಶಾಂತಪ್ಪ ದೂರು ನೀಡಿದ್ದು, ದೂರು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಕಲ್ಬುರ್ಗಿಯ ಅಫ್ಜಲ್ಪುರ ಮೂಲದ ಸವಿತಾ ಕಳೆದ ಕೆಲ ವರ್ಷಗಳಿಗೆ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದು ಈ ವೇಳೆ ಸವಿತಾರಿಗೆ ಆರೋಪಿ ಸಿದ್ದರಾಜ್ ಕಟ್ಟಿಮನಿ ಪರಿಚಿತನಾಗಿದ್ದನು. ಐಎಎಸ್, ಐಪಿಎಸ್ ಅಧಿಕಾರಿಗಳು ನನಗೆ ಗೊತ್ತಿದ್ದಾರೆ ಎಂದು ಅವರಿವರ ಹೆಸರೇಳಿ ಎಂದು ನಂಬಿಸಿದ್ದ ಎಂದು ತಿಳಿದುಬಂದಿದೆ.