ಚೆಂಡು ಭಾರತ ಸರಕಾರದ ಅಂಗಣದಲ್ಲಿದೆ ಎಂದ ನಾಗಾ ಪ್ರತ್ಯೇಕತಾವಾದಿ ನಾಯಕ
ಗುವಹಾಟಿ: ನಾಗಾಲ್ಯಾಂಡ್(Nagaland)ಗೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನ ಬೇಕೆಂಬ ತನ್ನ ಬೇಡಿಕೆಗೆ ತಾನು ಅಂಟಿಕೊಳ್ಳುವುದಾಗಿ ಪ್ರತ್ಯೇಕತಾವಾದಿ ನ್ಯಾಷನಲಿಸ್ಟ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್-ಇಸಕ್ ಮುವಾಹ್ ಹೇಳಿದೆ ಎಂದು theprint.in ವರದಿ ಮಾಡಿದೆ.
"ನಾಗಾ ಧ್ವಜ ಮತ್ತು ಸಂವಿಧಾನವು ನಮ್ಮ ಸಾರ್ವಭೌಮತ್ವ ಮತ್ತು ಅನನ್ಯ ಇತಿಹಾಸದ ಅವಿಭಾಜ್ಯ ಭಾಗಗಳು. ನಾವು ಭಾರತೀಯ ನಾಯಕರ ಮೇಲೆ ವಿಶ್ವಾಸ ಹೊಂದಿದ್ದೇವೆ, ಅರ್ಥೈಸಿಕೊಳ್ಳಿ,'' ಎಂದು ಕೌನ್ಸಿಲ್ ನ ಅಟೊ ಕಿಲೊನ್ಸೆರ್ (ಅಂದರೆ ಪ್ರಧಾನಿ) ತುಇಂಗಲೆಂಗೆ ಮುವಾಹ್ ರವಿವಾರ ನಡೆದ 76ನೇ ನಾಗಾ ಸ್ವಾತಂತ್ರ್ಯ ದಿನಾಚರಣೆ ವೇಳೆ ಹೇಳಿದ್ದಾರೆ.
"ಚೆಂಡು ಈಗ ಭಾರತ ಸರಕಾರದ ಅಂಗಣದಲ್ಲಿದೆ. ನಾಗಾಗಳಿಗೆ ನೀಡಲಾದ ಆಶ್ವಾಸನೆಯನ್ನು ಈಡೇರಿಸಲು ಸರಿಯಾದ ಹೆಜ್ಜೆಯನ್ನಿಡುವುದು ಅದಕ್ಕೆ ಬಿಟ್ಟ ವಿಚಾರ, ರಾಜಕೀಯ ಸಂಧಾನಗಳಿಲ್ಲದೆ ಕದನ ವಿರಾಮಕ್ಕೆ ಅರ್ಥವಿಲ್ಲ.'' ಎಂದು ಅವರು ಹೇಳಿದರು.
ಎಪ್ರಿಲ್ನಲ್ಲಿ ನಾಗಾ ಶಾಂತಿ ಮಾತುಕತೆಗಳಿಗಾಗಿರುವ ಕೇಂದ್ರ ಸರಕಾರದ ಮಧ್ಯಸ್ಥಿಕೆದಾರ ಎ ಕೆ ಮಿಶ್ರಾ ಅವರು ನಾಗಾಲ್ಯಾಂಡ್ ಭೇಟಿ ವೇಳೆ ಪ್ರತಿಕ್ರಿಯಿಸಿ ಸರಕಾರದ ನಿಲುವಿನಲ್ಲಿ ಬದಲಾವಣೆಯಿಲ್ಲ ಸರಕಾರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರತ್ಯೇಕ ಧ್ವಜವನ್ನಷ್ಟೇ ಅನುಮತಿಸಬಹುದು ಎಂದಿದ್ದರು.
ಆಗಸ್ಟ್ 15, 1947ರಂದು ಈಗಿನ ಕೌನ್ಸಿಲ್ನ ಮಾತೃ ಸಂಸ್ಥೆಯಾಗಿರುವ ನಾಗಾ ನ್ಯಾಷನಲ್ ಕೌನ್ಸಿಲ್ ಭಾರತದಿಂದ ಪ್ರತ್ಯೇಕ ದೇಶವಾಗುವ ಉದ್ದೇಶದಿಂದ ಬ್ರಿಟಿಷರಿಂದ ಸ್ವಾತಂತ್ರ್ಯ ಘೋಷಿಸಿತ್ತು. ಅಂದಿನಿಂದ ಸಂಘಟನೆಯು ಈ ದಿನವನ್ನು ನಾಗಾ ಸ್ವಾತಂತ್ರ್ಯ ದಿನ ಎಂದು ಆಚರಿಸುತ್ತಿದೆ.
ಇದನ್ನೂ ಓದಿ: 'ದೃಶ್ಯಂ' ಕಥೆಗೆ ಮೂರನೇ ಭಾಗದಲ್ಲಿ ಮುಕ್ತಾಯ?