2023ರಲ್ಲಿ ಮತ್ತೆ ಮಣಿಪಾಲ ಮ್ಯಾರಥಾನ್; 15 ಸಾವಿರ ಸ್ಪರ್ಧಿಗಳ ನಿರೀಕ್ಷೆ

Update: 2022-08-16 14:51 GMT

ಉಡುಪಿ : ಕೊರೋನದಿಂದಾಗಿ ಕಳೆದೆರಡು ವರ್ಷಗಳಿಂದ ನಡೆಯದ ಪ್ರತಿಷ್ಠಿತ ಮಣಿಪಾಲ ಮ್ಯಾರಥಾನ್‌ನ 5ನೇ ಅಧ್ಯಾಯ 2023ರ ಫೆಬ್ರವರಿ 12ರಂದು ಮಣಿಪಾಲದಲ್ಲಿ ನಡೆಯಲಿದೆ ಎಂದು ಸಂಘಟಕರಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ನ (ಮಾಹೆ) ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಮಾಹೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ.ಬಲ್ಲಾಳ್, ಬೆಂಗಳೂರಿನ ಎನ್‌ಇಬಿ ಸ್ಪೋರ್ಟ್ಸ್ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್‌ಗಳ ಸಹಯೋಗದೊಂದಿಗೆ ಮಣಿಪಾಲ ಮ್ಯಾರಥಾನ್ ನಡೆಯಲಿದೆ ಎಂದರು.

ಈ ಬಾರಿಯ ಮ್ಯಾರಥಾನ್ ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಧ್ಯೇಯವನ್ನು ಹೊಂದಿರುತ್ತದೆ. ‘ಪ್ರಾರಂಭದಲ್ಲೇ ರೋಗಪತ್ತೆ, ಜೀವದ ರಕ್ಷಣೆ’ ಎಂಬ ಧ್ಯೇಯವಾಕ್ಯದೊಂದಿಗೆ ಮಕ್ಕಳ ಕ್ಯಾನ್ಸರ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಲಿದೆ ಎಂದು ಡಾ.ಬಲ್ಲಾಳ್ ಹೇಳಿದರು.

ಈ ಬಾರಿಯೂ ಇತಿಯೋಪಿಯಾ, ಜರ್ಮನಿ, ಕಿನ್ಯಾ, ಇಂಗ್ಲೆಂಡ್, ನೇಪಾಳ, ಮಲೇಷಿಯಾ, ಶ್ರೀಲಂಕಾ ಮುಂತಾದ ವಿದೇಶಗಳ ಮ್ಯಾರಥಾನ್ ಓಟಗಾರರೊಂದಿಗೆ ದೇಶ-ವಿದೇಶಗಳ ಒಟ್ಟು ೧೫,೦೦೦ ದೂರ ಓಟಗಾರರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಮಾತನಾಡಿ, 2020ರಲ್ಲಿ ಕೊನೆಯ ಬಾರಿ ಮಣಿಪಾಲ ಮ್ಯಾರಥಾನ್ ನಡೆದಿತ್ತು. ಆ ಬಳಿಕ ಎರಡು ವರ್ಷ ಕೊರೋನ ಸಾಂಕ್ರಾಮಿಕದಿಂದಾಗಿ ಅದನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ 2023ರ ಮಣಿಪಾಲ ಮ್ಯಾರಥಾನ್ ಮೂಲಕ ಪ್ರತಿಷ್ಠಿತ ಸ್ಪರ್ಧೆ ನಡೆಸಲು ಹರ್ಷವೆನಿಸುತ್ತಿದೆ ಎಂದರು.

ಮ್ಯಾರಥಾನ್ ಮೂಲಕ ಮಕ್ಕಳ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಪ್ರಾರಂಭಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚಿದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂಬ ಅರಿವನ್ನು ಜನರಿಗೆ ಮೂಡಿಸಬೇಕಿದೆ ಎಂದರು.

ಈ ಬಾರಿ ಅರ್ಜುನ ಪ್ರಶಸ್ತಿ ವಿಜೇತೆ, ದೇಶದ ಹೆಮ್ಮೆಯ ಅಥ್ಲೀಟ್ ಆಗಿದ್ದ ರೀತ್ ಅಬ್ರಹಾಂ ಅವರು ನಿರ್ದೇಶಕರಾಗಿರುವ ಸ್ಥಳೀಯರೇ ಆಗಿರುವ ನಾಗರಾಜ ಅಡಿಗ ಸ್ಥಾಪಿಸಿರುವ ಬೆಂಗಳೂರಿನ ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆ ಮ್ಯಾರಥಾನ್‌ನ ಸಂಪೂರ್ಣ ನಿರ್ವಹಣೆಯನ್ನು ನೋಡಿಕೊಳ್ಳಲಿದೆ ಎಂದು ಡಾ. ಎಚ್.ಎಸ್.ಬಲ್ಲಾಳ್ ವಿವರಿಸಿದರು.

ರೀತ್ ಅಬ್ರಹಾಂ ಮಾತನಾಡಿ, ತಮ್ಮ ಎನ್‌ಇಬಿ ಸಂಸ್ಥೆ ವೃತ್ತಿಪರ ರೀತಿಯಲ್ಲಿ ಮ್ಯಾರಥಾನ್‌ನ್ನು ಸಂಘಟಿಸುವ ಪ್ರಯತ್ನ ನಡೆಸಲಿದೆ. ಸ್ಪರ್ಧಿಸಲು ಆಗಮಿಸುವ ದೇಶ-ವಿದೇಶಗಳ ಅಥ್ಲೀಟ್‌ಗಳಿಗೆ ಸಂಪೂರ್ಣ ತೃಪ್ತಿ ನೀಡುವಂತೆ ಇದನ್ನು ನಾವು ನಿರ್ವಹಿಸುವ ಗುರಿಯನ್ನು ಹೊಂದಿದ್ದೇವೆ. ಈಗಾಗಲೇ ಕೆಲವು ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಿ ನಾವು ಅನುಭವ ಹೊಂದಿದ್ದೇವೆ ಎಂದರು.

ಮಣಿಪಾಲ ಮ್ಯಾರಥಾನ್-2023ರಲ್ಲಿ ಸ್ಪರ್ಧಿಸಲು ಆನ್‌ಲೈನ್‌ನಲ್ಲಿ ಪ್ರವೇಶ ಪತ್ರಗಳನ್ನು ಕಳುಹಿಸಬೇಕು. ಸ್ಪರ್ಧಿಸುವವರ ನೊಂದಾವಣಿಗೆ ಶೀಘ್ರವೇ  ಪ್ರಕಟಣೆಯನ್ನು ನೀಡಲಾಗುವುದು. ಸ್ಪರ್ಧೆಯು 42ಕಿ.ಮೀ.ನ ಪೂರ್ಣ ಮ್ಯಾರಥಾನ್, 21ಕಿ.ಮೀ.ನ ಹಾಫ್ ಮ್ಯಾರಥಾನ್ ಅಲ್ಲದೇ 10ಕಿ.ಮೀ., 5ಕಿ.ಮೀ. ಹಾಗೂ 3ಕಿ.ಮೀ. ವಿಭಾಗಗಳಲ್ಲಿ ನಡೆಯಲಿದೆ ಎಂದು ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ ಸಿ.ನಾಯಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ವಿ.ಎಂ.ಪ್ರಭು, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಡಾ.ಶರತ್ ರಾವ್, ಡಾ.ಅವಿನಾಶ್ ಶೆಟ್ಟಿ, ಆನಂದ್ ವೇಣಿಗೋಪಾಲ್, ಡಾ.ವಾಸುದೇವ ಭಟ್, ಉಡುಪಿ ಅಮೆಚೂರು ಅತ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ಕೆಂಪರಾಜ್, ಬಾಲಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News