ಸ್ವತಂತ್ರ್ಯದ ಸಂಭ್ರಮದ ನಡುವೆ ಬಿಸಿಯೂಟ ಕಾರ್ಮಿಕರ ಶೋಷಿಸುತ್ತಿರುವ ಸರಕಾರ: ಬಿ.ಎಂ.ಭಟ್ ಆರೋಪ

Update: 2022-08-16 17:47 GMT

ಬೆಳ್ತಂಗಡಿ; ಶಾಲಾ ಮಕ್ಕಳಿಗೆ ಅಡುಗೆ ಮಾಡಿ ಬಿಸಿಯೂಟ ಬಡಿಸುವ ಕೆಲಸ ಮಾಡುವ ಮಾತೆಯರನ್ನ ಸಂಬಳ ನೀಡದೆ ದುಡಿಸುವ ಸರಕಾರದ ಸ್ವತಂತ್ರ್ಯದ ಅಮೃತ ಮಹೋತ್ಸವದ ಕೊಡುಗೆಯೇ? ಎಂದು ಕಾರ್ಮಿಕ ನಾಯಕ ಬಿ.ಎಂ.ಭಟ್ ಪ್ರಶ್ನಿಸಿದರು.

ಬೆಳ್ತಂಗಡಿ ತಾಲೂಕು ಅಕ್ಷರ ದಾಸೋಹ ನೌಕರರ ಸಂಘಟನೆಯ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ನಡೆದ ಬಿಸಿಯೂಟ ನೌಕರರ ಹೋರಾಟವನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು.

ಮೊದಲೇ ಬದುಕಲು ತಕ್ಕ ಸಂಬಳ ನೀಡದ ಸರಕಾರ ನೀಡುವ 3,500 ರೂ ಮಾಸಿಕ ಸಂಬಳವನ್ನೂ ಕಳೆದ 3 ತಿಂಗಳಿಂದ ನೀಡದೆ ಬಿಸಿಯೂಟ ಕಾರ್ಮಿಕರ ದುಡಿಸುವ ಸರಕಾರ ನಡೆ ಖಂಡನೀಯ ಎಂದವರು ಹೇಳಿದರು. ಸರಕಾರದ ಬಳಿ ಕೇಳಿದರೆ ಹಣ ಇಲ್ಲದಾಗಿದೆ ಎನ್ನುವ ಸರಕಾರಕ್ಕೆ ಕಮೀಶನ್ ಧಂಧೆಗೆ, ದುಂದು ವೆಚ್ಚಗಳಿಗೆ ಶಾಸಕರ ಸಂಬಳಗಳಿಗೆ ಹಣ ಇರುವಾಗ ಬಡ ತಾಯಂದಿರಿಗೆ ಹಣ ಇಲ್ಲ ಎನ್ನುತ್ತಾ ಜೀತದಾಳುಗಳಂತೆ ದುಡಿಸುವುದನ್ನು ಖಂಡಿಸುತ್ತೇವೆ. ಬಿಸಿಯೂಟ ನೌಕರರಿಗೆ ತಕ್ಷಣ ದುಡಿದ ವೇತನ ನೀಡಿ, ಮಾಸಿಕ ವೇತನ ಕನಿಷ್ಟ 10,000 ನೀಡಬೇಕು ಹಾಗೂ ತಿಂಗಳ ಮೊದಲ ದಿನ ನೀಡಬೇಕು ಎಂದವರು ಹೇಳಿದರು. 60 ವರ್ಷ ಆಗಿದೆ ಎಂದು ಬಡ ತಾಯಂದಿರ ಕಡ್ಡಾಯ ನಿವೃತ್ತಿಗೊಳಿಸಿದ ಸರಕಾರ ಅವರಿಗೆ ಕನಿಷ್ಟ ಪರಿಹಾರವನ್ನಾಗಲಿ ಪಿಂಚಿಣಿಯನ್ನಾಗಲಿ ನೀಡದೆ ಬೀದಿಗೆ ತಳ್ಳಿದೆ. ಮಾತೆ ಮಾತೆ ಎನ್ನುವ ಬಿಜೆಪಿ ತನ್ನ ಮಾತು ಉಳಿಸಲಾದರೂ ಅವರಿಗೆ ಪರಿಹಾರ ಪಿಂಚಿಣಿ ಒದಗಿಸಬೇಕು ಎಂದರು.

ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಿ ಬಳಿಕ ಮೆರವಣಿಗೆಯಿಂದ ತಾಲೂಕು ಪಂಚಾಯತಿಗೆ ತೆರಳಿ ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ಧಶಕರ ಮೂಲಕವೂ ಸರಕಾರಕ್ಕೆ ಮನವಿ ನೀಡಿದರು.

ಮೊದಲಿಗೆ ಕಾರ್ಮಿಕ ನಾಯಕಿ ಜಯಶ್ರೀ ಸ್ವಾಗತಿಸಿ ಕೊನೆಗೆ ಕಾರ್ಯದರ್ಶಿ ಜಾನಕಿ ವಂದಿಸಿದರು. ಹೋರಾಟದಲ್ಲಿ ಸಂಘದ ಅದ್ಯಕ್ಷರಾದ ಬಾಲಕಿ, ಉಪಾದ್ಯಕ್ಷರಾದ ಶ್ಯಾಮಲ, ಸಹಕಾರ್ಯದರ್ಶಿ ಸುಂದರಿ, ಖಜಾಂಜಿ ಹೇಮ, ಕ್ಲೆಸ್ಟರ್ ಮುಖಂಡರಾದ ವಾರಿಜ, ಜಾನಕಿ ಬಂಗಾಡಿ, ಗೀತ ಕಾಯರ್ತಡ್ಕ, ಪದ್ಮಾವತಿ, ವೇದಾವತಿ, ಕಾರ್ಮಿಕ ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ, ಭವ್ಯ, ರಾಮಚಂದ್ರ, ಲಾರೆನ್ಸ್, ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News