ಬಂಕಿಮಚಂದ್ರರ ‘ವಂದೇಮಾತರಂ’ ಮತ್ತು ‘ಹಿಂದೂ ರಾಷ್ಟ್ರ’ವಾದ

Update: 2022-08-17 03:53 GMT

‘ಆನಂದ ಮಠ’ ಕಾದಂಬರಿಯು ಎಷ್ಟೇ ದೇಶಪ್ರೇಮಿ ಎಂಬ ಪ್ರಚಾರ ಪಡೆದುಕೊಂಡಿದ್ದರೂ ಕಾದಂಬರಿಯಲ್ಲಿ ಮಾತ್ರ ಅದರ ಬ್ರಿಟಿಷ್ ವಸಾಹತುಶಾಹಿ ಪಕ್ಷಪಾತ ಮತ್ತು ಮುಸ್ಲಿಮ್ ದ್ವೇಷವನ್ನು ಕಿಂಚಿತ್ತೂ ಮುಚ್ಚುಮರೆ ಮಾಡಿಲ್ಲ. ಅದರ ಕೆಲವು ಆಯ್ದ ಭಾಗಗಳನ್ನು ಓದಿದರೂ ಅದು ಸ್ಪಷ್ಟವಾಗುತ್ತದೆ. ಬಂಕಿಮಚಂದ್ರರ ಆನಂದ ಮಠ ಕಾದಂಬರಿಯನ್ನು ವೆಂಕಟಾಚಾರ್ಯ ಅವರು 1960ರ ಮೊದಲ ಭಾಗದಲ್ಲೇ ಕನ್ನಡಕ್ಕೆ ಅನುವಾದಿಸಿದ್ದರು. ಅದಲ್ಲದೆ ಈ ಕಾದಂಬರಿಯ ಇನ್ನೂ ಮೂರು ಕನ್ನಡ ಅನುವಾದಗಳಾಗಿವೆ.


ಭಾರತವು ಈಗ ತಾನೇ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ‘‘ಆಚರಿಸಿದೆ’’. ಮೋದಿ ನೇತೃತ್ವದ ಬಿಜೆಪಿ ಸರಕಾರ ಮತ್ತು ಆರೆಸ್ಸೆಸ್ ಈ ಅವಕಾಶವನ್ನು ಬಳಸಿಕೊಂಡು ತ್ರಿವರ್ಣಧ್ವಜದ ಮೇಲೆ ಭಗವಾಧ್ವಜ ಸ್ಥಾಪಿಸುವ ಪ್ರಯತ್ನ ಪಟ್ಟಿದೆ. ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದೆ. ಕರ್ನಾಟಕದಲ್ಲಿ ಸಾಕ್ಷಾತ್ ಶಿಕ್ಷಣ ಮಂತ್ರಿಯೇ ಆ ಕೆಲಸ ಮಾಡಿದ್ದಾರೆ. ಕರ್ನಾಟಕ ಸರಕಾರ ಈ ಸಂದರ್ಭದಲ್ಲಿ ಅಧಿಕೃತವಾಗಿ ಕೊಟ್ಟಿರುವ ಜಾಹೀರಾತಿನಲ್ಲಿ ಹಿಂದೂರಾಷ್ಟ್ರ ಪ್ರತಿಪಾದಕ, ಬ್ರಿಟಿಷ್ ವಸಾಹತುಶಾಹಿಯ ಗುಲಾಮಗಿರಿ ಮಾಡಿದ ಸಾವರ್ಕರ್ ರನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮೊದಲ ಸಾಲಿನಲ್ಲೇ ಸ್ಥಾಪಿಸಿದೆ. ನೆಹರೂರನ್ನು ಕೈಬಿಟ್ಟು ಅಂಬೇಡ್ಕರ್ ಅವರನ್ನು ಎರಡನೇ ಸಾಲಿಗೆ ದೂಡಿದೆ. ಹಾಗೂ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಟಿಪ್ಪುವನ್ನು ಕೈಬಿಟ್ಟಿದೆ. ಈ ಸಂದರ್ಭಕ್ಕೆ ನಟ ಜಗ್ಗೇಶ್ ಅವರ ನೇತೃತ್ವದಲ್ಲಿ ಕರ್ನಾಟಕ ಸರಕಾರ ಸಾದರಪಡಿಸಿರುವ ‘ವಂದೇಮಾತರಂ’ ಎಂಬ ನಾಲ್ಕೂವರೆ ನಿಮಿಷದ ದೃಶ್ಯ ಚಿತ್ರದಲ್ಲಿ ಭಾರತಮಾತೆಯ ಕೈಯಲ್ಲಿ ಭಗವಾಧ್ವಜವನ್ನೇ ನೀಡಲಾಗಿದೆ.

ಕೇಸರಿ, ಬಿಳಿ, ನೀಲಿ, ಹಸಿರುಳ್ಳ ಬಾವುಟದಲ್ಲಿ ಕೇವಲ ಕೇಸರಿಯನ್ನು ಮಾತ್ರ ಉಳಿಸಿಕೊಂಡು ಉಳಿದವನ್ನು ಹೊರಗಟ್ಟುವ ಹುನ್ನಾರ ಎಲ್ಲಾ ಕಡೆ ನಿಚ್ಚಳವಾಗಿ ನಡೆದಿದೆ. ದೇಶದ ಹಲವೆಡೆಗಳಲ್ಲಿ ಕೂಡ ಕೇಂದ್ರ ಹಾಗೂ ಆಯಾ ರಾಜ್ಯಗಳ ಬಿಜೆಪಿ ಸರಕಾರ ಮಾಡಿರುವ ಪ್ರಚಾರಗಳಲ್ಲಿ ದೇಶಭಕ್ತಿಗಿಂತ ಮುಸ್ಲಿಮ್ ದ್ವೇಷ ಹಾಗೂ ಆ ದ್ವೇಷ ಸಿದ್ಧಾಂತದ ಪಿತಾಮಹ ಸಾವರ್ಕರ್ ಅವರನ್ನು ದೇಶದ ಪಿತಾಮಹಾನನ್ನಾಗಿ ಸ್ಥಾಪಿಸುವ ಪ್ರಯತ್ನ ನಡೆದಿದೆ. ಈ ದ್ವೇಷಾಧಾರಿತ ಭಾರತಕ್ಕೆ ‘ವಂದೇ ಮಾತರಂ’ ಗೀತೆಯನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗೆ ನೋಡಿದರೆ ಒಂದೆರಡು ದಶಕದ ಹಿಂದಿನವರೆಗೂ ಈ ದೇಶದಲ್ಲಿ ಯಾವುದೇ ಧರ್ಮಕ್ಕೆ ಸೇರಿದ ಇಬ್ಬರು ಪರಸ್ಪರ ಭೇಟಿಯಾದರೆ ‘‘ಜೈ ರಾಮ್‌ಜಿಕೀ’’ ಎಂದು ಕೈಕುಲುಕುವುದು ಮತ್ತು ಹೊರಡುವ ಮುನ್ನ ‘‘ರಾಮ್‌ರಾಮಮ’’ ಎಂದು ವಿದಾಯ ಹೇಳುವುದು ಸರ್ವೇ ಸಾಮಾನ್ಯವಾಗಿತ್ತು. ಅದರಲ್ಲಿ ಹಿಂದೂ ಮತ್ತು ಮುಸಲ್ಮಾನರೆಂಬ ಭೇದಗಳೇನೂ ಇರುತ್ತಿರಲಿಲ್ಲ. ಹಾಗೆಯೇ ಶಾಲಾ ಕಾಲೇಜುಗಳಲ್ಲಿ ಅದರಲ್ಲೂ ಆಗಸ್ಟ್-15ರ ಮೆರವಣಿಗೆಯ ಸಮಯಗಳಲ್ಲಿ ‘‘ಶಾಂತಿ-ಶಿಸ್ತು’’ ಎಂಬ ಘೋಷಣೆಗಳು ಹಾಗೂ ‘‘ವಂದೇ’’ ಎಂಬ ಘೋಷಣೆಗೆ ‘‘ಮಾತರಂ’’ ಎಂದು ಕೋರಸ್ ಕೊಡುವುದು ಸರ್ವೇ ಸಾಮಾನ್ಯವಾಗಿತ್ತು. ಆ ಘೋಷಣೆಗಳು ಪರಸ್ಪರ ಮನುಷ್ಯ ಸಂಬಂಧಗಳ ಮತ್ತು ಗೌರವಗಳ ಸಂಕೇತಗಳಾಗಿದ್ದವೆಯೇ ವಿನಃ ಮತ್ತೊಂದು ಧರ್ಮದವರ ದೇಶಭಕ್ತಿಯನ್ನು ಮತ್ತು ಮಾನವ ಘನತೆಯನ್ನು ಹೀಯಾಳಿಸುವ ಘೋಷಣೆಗಳಾಗಿರಲಿಲ್ಲ.

ಆದರೆ ಸಮಾಜದಲ್ಲಿ ಕೋಮುರಾಜಕಾರಣ ವ್ಯಾಪಿಸತೊಡಗಿದಂತೆ ಮತ್ತು ಅದು ರಾಜಕೀಯ ಅಧಿಕಾರ ಪಡೆದುಕೊಳ್ಳುವ ವ್ಯೆಹತಂತ್ರವಾಗುತ್ತಿದ್ದಂತೆ ಹೃದಯದಿಂದ ಬರುತ್ತಿದ್ದ ‘‘ಜೈರಾಮ್‌ಜಿಕೀ’’ ಎಂಬ ಅಭಿದಾನವೂ ಆಕ್ರಮಣಕಾರಿ ಮೆರವಣಿಗೆಗಳಲ್ಲಿ ‘‘ಜೈ ಶ್ರೀರಾಮ್’’ ಎಂಬ ಭೀತಿ ಹುಟ್ಟಿಸುವ ಕರ್ಕಶತೆಯನ್ನು ಪಡೆದುಕೊಳ್ಳತೊಡಗಿತು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ನಿಧಾನಕ್ಕೆ ‘‘ಇಸ್ ದೇಶ್ ಮೆ ರಹನಾ ಹೈತೋ ಜೈ ಶ್ರೀರಾಮ್ ಕೆಹನಾ ಹೋಗಾ’’ (ಈ ದೇಶದಲ್ಲಿರಬೇಕೆಂದರೆ ಜೈಶ್ರೀರಾಮ್ ಹೇಳಲೇ ಬೇಕು) ಎಂಬ ಪಕ್ಕಾ ಫ್ಯಾಶಿಸ್ಟ್ ಘೋಷಣೆಯಾಗಿಯೂ ಪರಿವರ್ತನೆಯಾಯಿತು. ಈ ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲೇ ಸಂಘಪರಿವಾರ ಹಾಗೂ ಬಿಜೆಪಿ ಸರಕಾರಗಳು ದೇಶದೆಲ್ಲೆಡೆ ‘ವಂದೇ ಮಾತರಂ’ಗೆ ‘ಜನಗಣಮನ’ಕ್ಕಿಂತ ಹೆಚ್ಚಿನ ಮಹತ್ವ ಮತ್ತು ಪ್ರಚಾರವನ್ನು ಕೊಡುತ್ತಿದೆ. ಏಕೆಂದರೆ ಜನಗಣಮನದ ಜನಕ ರವೀಂದ್ರನಾಥ್ ಟಾಗೋರ್ ಅವರು ಕೋಮುವಾದದ ವಿರೋಧಿಯೂ, ವಿಶ್ವಭ್ರಾತೃತ್ವದ ವಕ್ತಾರರೂ ಆಗಿದ್ದರು. ಅವರ ಜನಗಣಮನ ಮತ್ತು ಅದಕ್ಕಿಂತ ಹೆಚ್ಚಾಗಿ ಅವರ ""Where The Mind Is With Out Fear''  (ಇದನ್ನು ಆಗಲೇ ಬಿಎಂಶ್ರೀಯವರು ‘‘ಎಲ್ಲಿ ಮನಕೆ ಅಳುಕಿರದೋ..’’ ಎಂದು ಅನುವಾದ ಮಾಡಿದ್ದರು) ಪದ್ಯಗಳು ಮಾನವೀಯ ಪ್ರಜಾತಂತ್ರದ ಆಧಾರದಲ್ಲಿ ರಾಷ್ಟ್ರ ಕಟ್ಟಬೇಕೆನ್ನುವ ಯಾವುದೇ ದೇಶದ ಜನರಿಗೆ ಮಾರ್ಗದರ್ಶಿಯಂತಿದ್ದವು. ಅದಕ್ಕೆ ಟಾಗೋರರು ಸಂಘಪರಿವಾರಕ್ಕೆ ಯಾವತ್ತೂ ಪಥ್ಯವಾಗಲಿಲ್ಲ. ಬದಲಿಗೆ ಮುಸ್ಲಿಮ್ ದ್ವೇಷವನ್ನು ಬಿತ್ತುವ ಹಾಗೂ ಬ್ರಿಟಿಷರ ಜೊತೆ ಎಂದೂ ಹೋರಾಡಬಾರದೆನ್ನುವ ದಾಸ್ಯ ಬಿತ್ತುವ ಬಂಕಿಮ ಚಂದ್ರ ಚಟರ್ಜಿಯವರು, ಅದೇ ದಾಸ್ಯ ಮತ್ತು ದ್ವೇಷದ ವಸ್ತು ಹೊಂದಿರುವ ಅವರ ‘ಆನಂದಮಠ’ ಕಾದಂಬರಿ, ಈ ದ್ವೇಷದ ಆಶಯಗಳನ್ನು ಬಿತ್ತುವ ಆ ಕಾದಂಬರಿಯಲ್ಲಿ ಬರುವ ‘ವಂದೇ ಮಾತರಂ’ ಗೀತೆಯು ಸಂಘಪರಿವಾರಕ್ಕೆ ಅಚ್ಚುಮೆಚ್ಚು.

ಸ್ವಾತಂತ್ರ್ಯದ ಈ 75ನೇ ವರ್ಷದ ಸಂದರ್ಭದಲ್ಲೂ, ತಾವು 1947ರಲ್ಲಿ ಸಾಧಿಸಲಾಗದೆ ವಿಫಲವಾದ ಹಿಂದೂರಾಷ್ಟ್ರ ಸಿದ್ಧಾಂತವನ್ನು ಪ್ರಚುರಪಡಿಸಲು ಸಂಘಪರಿವಾರವು ಮತ್ತೊಮ್ಮೆ ಬಂಕಿಮಚಂದ್ರ ಚಟರ್ಜಿಯವರ ‘ವಂದೇಮಾತರಂ’ ಅನ್ನು ಬಳಸಿಕೊಳ್ಳುತ್ತಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಮುಸ್ಲಿಮ್ ಸಂಸದರು ಪ್ರತಿಜ್ಞೆ ಸ್ವೀಕರಿಸುವಾಗ ಅವರ ದೇಶಭಕ್ತಿಯನ್ನು ಪ್ರಶ್ನಿಸುವ ರೀತಿಯಲ್ಲಿ ಬಿಜೆಪಿಯ ಸಂಸದರು ‘‘ವಂದೇ ಮಾತರಂ’’ ಎಂದು ‘‘ಜೈ ಶ್ರೀರಾಂ’’ ಎಂದು ಬೊಬ್ಬೆಯಿಟ್ಟದ್ದರು. ಇದೀಗ ಮತ್ತೊಮ್ಮೆ ಭ್ರಷ್ಟಮಾರ್ಗದಲ್ಲಿ ಮತ್ತೊಮ್ಮೆ ಅಧಿಕಾರ ಪಡೆದ ಮಹಾರಾಷ್ಟ್ರದ ಬಿಜೆಪಿ ಸರಕಾರ ಇನ್ನುಮುಂದೆ ಫೋನಿನಲ್ಲಿ ‘‘ಹಲೋ’’ ಎನ್ನುವ ಬದಲಿಗೆ ‘‘ವಂದೇ ಮಾತರಂ’’ ಎನ್ನಬೇಕೆಂದು ಆದೇಶಿಸಿದೆ..

ಆದ್ದರಿಂದ ಈ ಸಂದರ್ಭದಲ್ಲಿ ರಾಷ್ಟ್ರಗೀತೆಯಷ್ಟೆ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬಿಟ್ಟಿರುವ ‘ವಂದೇ ಮಾತರಂ’ ಗೀತೆಯಲ್ಲಿ ಮತ್ತು ಅದರ ಹುಟ್ಟಿನಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರೋಧಿ ದೇಶಪ್ರೇಮವಿತ್ತೇ ಅಥವಾ ಮುಸ್ಲಿಮ್ ವಿರೋಧವಿತ್ತೇ ಎಂಬುದನ್ನು ನೆನಪಿಗೆ ತಂದುಕೊಳ್ಳುವ ಅಗತ್ಯವಿದೆ. ‘ಆನಂದಮಠ’ ಮತ್ತು ‘ವಂದೇ ಮಾತರಂ’- ಬ್ರಿಟಿಷ್ ದಾಸ್ಯ, ಮುಸ್ಲಿಮ್‌ದ್ವೇಷ ಮತ್ತು ಹಿಂದೂರಾಷ್ಟ್ರ ‘ವಂದೇ ಮಾತರಂ’ ಹಾಡನ್ನು ಬಂಗಾಳದ ಪ್ರಸಿದ್ಧ ಸಾಹಿತಿ ಬಂಕಿಮಚಂದ್ರ ಚಟರ್ಜಿಯವರು 1870ರಲ್ಲೇ ರಚಿಸಿದರೂ ಅದು ಈಗಿರುವ ರೂಪದಲ್ಲಿ ತಿದ್ದುಪಡಿಗೊಂಡು ಅವರ ‘ಆನಂದ ಮಠ’ ಕಾದಂಬರಿಯಲ್ಲಿ ಸೇರ್ಪಡೆಯಾದದ್ದು 1881ರಲ್ಲಿ. ಆನಂದಮಠ ಕಾದಂಬರಿಯ ತಿರುಳನ್ನು ಅರ್ಥಮಾಡಿಕೊಳ್ಳದೆ ‘ವಂದೇ ಮಾತರಂ’ ಗೀತೆಯನ್ನಾಗಲೀ, ಅದನ್ನು ಕಡ್ಡಾಯ ಮಾಡಲು ಈಗ ‘ಚಳವಳಿ’ ಮಾಡುತ್ತಿರುವ ಹಿಂದುತ್ವವಾದಿಗಳ ನಿಜವಾದ ಉದ್ದೇಶವನ್ನಾಗಲೀ ಅರ್ಥಮಾಡಿಕೊಳ್ಳಲಾಗುವುದಿಲ್ಲ. ‘ಆನಂದಮಠ’ ಕಾದಂಬರಿ ಬ್ರಿಟಿಷರ ಆಡಳಿತದಿಂದಾಗಿ ಬಂಗಾಳವು ಹಿಂದೆಂದೂ ಕಾಣದಷ್ಟು ತೀವ್ರವಾಗಿ ಬರಗಾಲಕ್ಕೆ ತುತ್ತಾಗಿದ್ದ ಕಾಲಘಟ್ಟದಿಂದ ಪ್ರಾರಂಭವಾಗುತ್ತದೆ.

ಬರಗಾಲದಿಂದ ತನ್ನ ಹಿಂದಿನ ಎಲ್ಲಾ ವೈಭವವನ್ನು ಕಳೆದುಕೊಂಡು ಹೆಂಡತಿ ಮತ್ತು ಮಗಳೊಂದಿಗೆ ಬದುಕನ್ನು ಅರಸುತ್ತಾ ಗುಳೆ ಹೊರಡುವ ಬ್ರಾಹ್ಮಣ ಭೂಮಾಲಕ ಮಹೇಂದ್ರ ಇದರ ಕಥಾನಾಯಕ. ಆದರೆ ಮಹೇಂದ್ರ ಇಲ್ಲಿ ಕಳೆದು ಹೋದ ಹಿಂದೂ ಬ್ರಾಹ್ಮಣ ವೈಭವಕ್ಕೆ ಪ್ರತಿನಿಧಿಯಷ್ಟೆ. ಹೀಗಾಗಿ ಮತ್ತೆ ಆ ವೈಭವವನ್ನು ಗಳಿಸಿಕೊಳ್ಳುವುದು ಹೇಗೆ ಎಂಬುದೇ ‘ಆನಂದ ಮಠ’ದ ನಿಜವಾದ ಕಥೆ. ಇಲ್ಲಿ ವೈಭವ ಕಿತ್ತುಕೊಂಡವರು ಮುಸ್ಲಿಮ್ ದೊರೆಗಳು. ಹೀಗಾಗಿ ಈ ದೇಶದ ಪ್ರಧಾನ ಶತ್ರುಗಳು ಮುಸ್ಲಿಮರೆಂಬುದೇ ಕಾದಂಬರಿಯ ಸಂದೇಶ. ಆದ್ದರಿಂದಲೇ ಕಾದಂಬರಿಯು ಬರಗಾಲದ ಬವಣೆ, ರೈತಾಪಿಗಳು ಇರುವೆಗಳಂತೆ ಸಾಯುತ್ತಿರುವ ದೃಶ್ಯಗಳಿಂದ ಪ್ರಾರಂಭವಾದರೂ ಅವೆಲ್ಲವೂ ನಂತರ ಸಂಪೂರ್ಣ ಮರೆಯಾಗಿ ಬಿಡುತ್ತದೆ. ಅದೇ ರೀತಿ ಈ ಬರಗಾಲಕ್ಕೆ ಕಾರಣವಾದ ಬ್ರಿಟಿಷ್ ಆಡಳಿತದ ಪ್ರಸ್ತಾಪವೂ ಕಾದಂಬರಿಯಲ್ಲಿ ಬರುವುದಿಲ್ಲ. ಮುಸ್ಲಿಮ್ ದರೋಡೆಕೋರರು ಮತ್ತು ಮುಸ್ಲಿಮ್ ನವಾಬರ ದಾಳಿ ಇವೆರಡರ ವಿರುದ್ಧ ಸಮರ ಸಾರಲು ಹಿಂದೂಗಳು ಸಂಸಾರವನ್ನು ತೊರೆದು ಸನ್ಯಾಸಿಗಳಾಗಿ ಸಶಸ್ತ್ರ ಬಂಡಾಯ ಹೂಡಿರುತ್ತಾರೆ. ಮಹೇಂದ್ರನನ್ನು ಈ ಬಂಡಾಯದಲ್ಲಿ ಸೇರುವಂತೆ ಮಾಡಲು ಆತನನ್ನು ಗುಪ್ತ ಗುಹೆಗೆ ಕರೆದುಕೊಂಡು ದೇವಿ-ಭಾರತ ಮಾತೆ-ಯ ದರ್ಶನ ಮಾಡಿಸಲಾಗುತ್ತದೆ. ಆ ದೇವಿಯ ಮುಂದೆ ಮುಸ್ಲಿಮರನ್ನು ಕೊಂದುಹಾಕಿ ಈ ದೇಶವನ್ನು ವಿಮೋಚನೆಮಾಡುವ ವೀರ ಪ್ರತಿಜ್ಞೆಯ ಭಾಗವಾಗಿಯೇ ‘ವಂದೇ ಮಾತರಂ’ ಹಾಡನ್ನು ಹಾಡಲಾಗುತ್ತದೆ. ‘‘ವಂದೇ ಮಾತರಂ’’ ಹಾಡುತ್ತಲೇ ಮಹೇಂದ್ರನಂತಹವರು ಮುಸ್ಲಿಮರ ಮಾರಣ ಹೋಮಕ್ಕೆ ಸಜ್ಜಾಗುತ್ತಾರೆ.

ಬರಗಾಲದ ಬವಣೆಯಿಂದ ಹಿಂದೂಗಳಷ್ಟೆ ಮುಸ್ಲಿಮ್ ರೈತರು ಸಹ ತುತ್ತಾಗಿ ಇರುವೆಗಳಂತೆ ಸಾಯುತ್ತಿದ್ದರೂ ಇಡೀ ಮುಸ್ಲಿಮ್ ಸಮುದಾಯವನ್ನೇ ಹಿಂದೂಗಳ ಬವಣೆಗೆ ಕಾರಣವೆಂಬಂತೆ ಚಿತ್ರಿಸಲಾಗಿದೆ. ಹೀಗೆ ಕಾದಂಬರಿ ಮೊದಲಿನಿಂದಲೂ ಇಡೀ ಮುಸ್ಲಿಮ್ ಸಮುದಾಯವನ್ನೇ ದೇಶದಿಂದ ಬಿಟ್ಟೋಡಿಸುವಂತೆ ಮಾಡುವುದನ್ನು ತನ್ನ ಗುರಿಯನ್ನಾಗಿರಿಸಿಕೊಳ್ಳುತ್ತದೆ. ಕಾದಂಬರಿಯ ನಾಯಕನಾದ ಸತ್ಯಾನಂದ ಘೋಷಿಸುವಂತೆ ‘‘ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಉದ್ದೇಶ ಎಲ್ಲಾ ಮುಸ್ಲಿಮರನ್ನು ಕೊಂದುಹಾಕುವುದು.

ಏಕೆಂದರೆ ಅವರು ದೇವರ ಶತ್ರುಗಳು!’’. ಇದೇ ಆ ಕಾದಂಬರಿಯ ಪ್ರಧಾನ ಧಾತು. ‘‘ಸನಾತನ ಧರ್ಮದ ಪುನರುತ್ಥಾನವೇ ನಮ್ಮ ಗುರಿ’’ಯೆಂದು ಘೋಷಿಸುವ ‘ಆನಂದಮಠ’ದ ಬಂಡಾಯಗಾರರು ತಮ್ಮನ್ನು ತಾವು ಸನಾತನಿಗಳೆಂದೇ ಗುರುತಿಸಿಕೊಳ್ಳುತ್ತಾರೆ. ‘ಆನಂದ ಮಠ’ ಕಾದಂಬರಿಯು ಎಷ್ಟೇ ದೇಶಪ್ರೇಮಿ ಎಂಬ ಪ್ರಚಾರ ಪಡೆದುಕೊಂಡಿದ್ದರೂ ಕಾದಂಬರಿಯಲ್ಲಿ ಮಾತ್ರ ಅದರ ಬ್ರಿಟಿಷ್ ವಸಾಹತುಶಾಹಿ ಪಕ್ಷಪಾತ ಮತ್ತು ಮುಸ್ಲಿಮ್ ದ್ವೇಷವನ್ನು ಕಿಂಚಿತ್ತೂ ಮುಚ್ಚುಮರೆ ಮಾಡಿಲ್ಲ. ಅದರ ಕೆಲವು ಆಯ್ದ ಭಾಗಗಳನ್ನು ಓದಿದರೂ ಅದು ಸ್ಪಷ್ಟವಾಗುತ್ತದೆ. ಬಂಕಿಮಚಂದ್ರರ ಆನಂದ ಮಠ ಕಾದಂಬರಿಯನ್ನು ವೆಂಕಟಾಚಾರ್ಯ ಅವರು 1960ರ ಮೊದಲ ಭಾಗದಲ್ಲೇ ಕನ್ನಡಕ್ಕೆ ಅನುವಾದಿಸಿದ್ದರು. ಅದಲ್ಲದೆ ಈ ಕಾದಂಬರಿಯ ಇನ್ನೂ ಮೂರು ಕನ್ನಡ ಅನುವಾದಗಳಾಗಿವೆ. ಇದನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ 2007ರಲ್ಲಿ ಮರುಮುದ್ರಣ ಮಾಡಿ ಪ್ರಕಟಿಸಿತ್ತು. ಅದರ ಕೆಲವು ಆಯ್ದ ಭಾಗಗಳು ಕೆಳಗಿವೆ: ‘ಆನಂದ ಮಠ’ ಕಾದಂಬರಿಯ ಕೆಲವು ಆಯ್ದ ಭಾಗಗಳು

ಸತ್ಯಾನಂದ -ನಮಗೆ ನಮ್ಮ ಹದಿನಾಲ್ಕು ತಲೆಯಾಂತರದಿಂದ ಬಂದ ಮಾತು, ಅಂಥಾದ್ದನ್ನು ನಿನಗೆ ಹೇಳುತ್ತೇನೆ. ಈಶ್ವರನು ತ್ರಿಗುಣಾತ್ಮಕನು. ಅದನ್ನು ಬಲ್ಲೆಯಷ್ಟೆ? ಮಹೇಂದ್ರ -ಹೌದು, ಸತ್ಯ ರಜಃ ತಮಃ ಈ ಮೂರು ಗುಣಗಳು. ಗೊತ್ತಾಯಿತು. ಸಂತಾನರು ಹಾಗಾದರೆ ಉಪಾಸಕ ಸಂಪ್ರದಾಯದವರಾಗಿ ಮಾತ್ರ ಇದ್ದಾರೆ? ಸತ್ಯಾನಂದ -ಹೌದು. ನಮಗೆ ರಾಜ್ಯ ಬೇಡ -ಮುಸಲ್ಮಾನರು ಭಗವಂತನ ವಿದ್ವೇಷಿಗಳಾಗಿರುವ ಕಾರಣ ಅವರನ್ನು ಸವಂಶವಾಗಿ ನಿಪಾತಮಾಡುವ ಇಷ್ಟ ಒಂದೇ. (ಪು.73)

ಈ ಸಮಯದಲ್ಲಿ ಆ ಪ್ರದೇಶಕ್ಕೆ ನಾಲ್ಕೈದು ಪಟಾಲಂಗಳ ಸಹಿತವಾಗಿ ಕ್ಯಾಪ್ಟನ್ ಥಾಮಸ್ ಸಾಹೇಬರ ಸವಾರಿಯು ಚಿತ್ತೈಸಿತ್ತು. ಆ ಸಮಯದಲ್ಲಿ ಕೆಲ ಹೊಲೆಯರು ಮುಂತಾದ ಕೀಳು ಜಾತಿಯವರಾದ ಹೊಸದಾಗಿ ಆದ ಸಂತಾನರು ಆ ಕಾಲದ ಉತ್ಸಾಹವನ್ನು ನೋಡಿ ಪರದ್ರವ್ಯಾಪಹರಣದಲ್ಲಿ ಉತ್ಸಾಹಿಗಳಾಗಿದ್ದರು. ಕ್ಯಾಪ್ಟನ್ ಥಾಮಸ್ ಸಾಹೇಬರು ಸೈನ್ಯದ ಸರಬರಾಯಿಗೋಸ್ಕರ ಉತ್ತಮವಾದ ಅಕ್ಕಿ, ತುಪ್ಪ, ಗೋಧಿ ಮುಂತಾದ್ದನ್ನು ಭಂಡಿ ಭಂಡಿಗಳ ಮೇಲೆ ತರಿಸುತಲಿದ್ದರು. ಅದನ್ನು ನೋಡಿ ಬಾಯಿ ನೀರು ಕರಗಿ ಆ ನೂತನವಾಗಿ ಸಂತಾನರಾದ ಹೊಲೆಯರ ಗುಂಪಿಗೆ ಸೇರಿದವರು ಭಂಡಿಗಳ ಮೇಲೆ ಬಿದ್ದರು. ಆದರೆ ಥಾಮಸನ ಸಿಪಾಯಿಗಳ ಕೈಲಿದ್ದ ಬಂದೂಕುಗಳಿಂದ ಪೆಟ್ಟು ತಿಂದು ಹಿಂದಿರುಗಿ ಓಡಿಹೋಗಿಬಿಟ್ಟರು. (ಪು.94)

ಥಾಮಸನು ನೋಡುತ್ತಿದ್ದ ಹಾಗೆ ಒಂದಪೂರ್ವವಾದ ಸುಂದರ ಸ್ತ್ರೀಮೂರ್ತಿಯು ನಿಂತಿತು. ಸುಂದರಿಯು ನಗುನಗುತ್ತ, ಸಾಹೇಬ! ನಾನು ಹೆಂಗಸು; ಯಾರನ್ನೂ ಆಘಾತಮಾಡುವುದಿಲ್ಲ; ಹಿಂದೂಗಳಿಗೂ ಮುಸಲ್ಮಾನರಿಗೂ ಕನರ್ವ ಕದನವಾಗುತ್ತದೆ; ಮಧ್ಯೆ ನೀವೇತಕ್ಕೆ ಬರಬೇಕು? ನೀವು ಮನೆಗೆ ಹಿಂದಿರುಗಬೇಕು ಎಂದಳು. (ಪು.96)

ಆಗ ಆ ಸ್ವಲ್ಪಜನ ಸಂತಾನರು ‘‘ಜಯಜಗದೀಶಹರೆ’’ ಹೇಳುತ್ತ ಹುಲಿಗಳ ಹಾಗೆ ಕ್ಯಾಪ್ಟನ್ ಥಾಮಸನ ಮೇಲೆ ಬಿದ್ದರು. ಆ ಬಿದ್ದ ಜೋರನ್ನು ಆ ಅಲ್ಪಸಂಖ್ಯಾಕರಾದ ಸಿಪಾಯಿಗಳು ತೆಲಂಗೀ ದಳದವರು ಸಹಿಸಲಾರದೆ ಎಲ್ಲರೂ ನಷ್ಟರಾಗಿಹೋದರು. ಆಗ ಭವಾನಂದನು ತಾನೇ ಹೋಗಿ ಕ್ಯಾಪ್ಟನ್ ಥಾಮಸನ ತಲೆಯ ಕೂದಲನ್ನು ಹಿಡಿದುಕೊಂಡನು. ಕ್ಯಾಪ್ಟನ್ ಥಾಮಸನು ಕಡೆಯವರೆಗೆ ಯುದ್ಧಮಾಡಿದನು. ಭವಾನಂದನು: ಕ್ಯಾಪ್ಟನ್ ಸಾಹೇಬ! ನಿನ್ನನ್ನು ಹೊಡೆದುಹಾಕುವುದಿಲ್ಲ, ಇಂಗ್ಲಿಷರು ನಮಗೆ ಶತ್ರುಗಳಲ್ಲ. ನೀವು ಮುಸಲ್ಮಾನರ ಸಹಾಯಕ್ಕೆ ಏತಕ್ಕೆ ಬಂದಿರಿ? ಬಾ -ನಿನಗೆ ಪ್ರಾಣದಾನ ಮಾಡಿದ್ದೇನೆ. ನೀನೇನೋ ಈಗ ಬಂದಿಯಾಗಿದ್ದೀ. ಇಂಗ್ಲಿಷರಿಗೆ ಜಯವಾಗಲಿ, ನಾವು ನಿಮ್ಮ ಹಿತಚಿಂತಕರು ಎಂದು ಹೇಳಿದನು. ಆಗ ಥಾಮಸನು ಭವಾನಂದನನ್ನು ವಧೆ ಮಾಡುವುದಕ್ಕೆ ಸನೀನ ಸಹಿತವಾದ ಬಂದೂಕನ್ನು ಎತ್ತುವುದಕ್ಕೆ ಪ್ರಯತ್ನಪಟ್ಟನು. ಆದರೆ ಭವಾನಂದನು ಅವನನ್ನು ಹುಲಿಯ ಹಾಗೆ ಹಿಡಿದಿದ್ದನಾದ್ದರಿಂದ ಥಾಮಸನು ಅಲ್ಲಾಡುವುದಕ್ಕಾಗದೆ ಹೋಯಿತು. ಭವಾನಂದನು ಇವನನ್ನು ಕಟ್ಟಿಹಾಕಿರೆಂದು ಅನುಚರರಿಗೆ ಹೇಳಿದನು. ಎರಡು ಮೂರು ಜನ ಸಂತಾನರು ಬಂದು ಥಾಮಸನನ್ನು ಕಟ್ಟಿದರು. ಭವಾನಂದನ ಅಪ್ಪಣೆಯ ಪ್ರಕಾರ ಕಟ್ಟಿದವನನ್ನು ಕುದುರೆಯ ಮೇಲೆ ಕಟ್ಟಿಹಾಕಿ ‘ವಂದೇ ಮಾತರಂ’ ಹಾಡುತ್ತಾ ವಾಟ್ಸನ್ ಇದ್ದ ಕಡೆಗೆ ಹೊರಟರು. (ಪು.123)

ಚಿಕಿತ್ಸಕ -ಸತ್ಯಾನಂದ ಕಾತರನಾಗಬೇಡ. ಆಗುವುದೆಲ್ಲ ಒಳ್ಳೆಯದಾಗುತ್ತೆ. ಇಂಗ್ಲಿಷರು ರಾಜರಾಗದೆ ಹೋದರೆ ಆರ್ಯಧರ್ಮವು ಪುನರುದ್ಧಾರವಾಗುವ ಸಂಭವವಿಲ್ಲ. ಮಹಾತ್ಮರು ಹೇಳಿರುವ ಮಾತನ್ನೇ ನಾನು ಹೇಳುತ್ತೇನೆ. ಮನವಿಟ್ಟು ಕೇಳು. ಮೂವ್ವತ್ತಮೂರು ಕೋಟಿ ದೇವತೆಗಳನ್ನು ಪೂಜೆಮಾಡುವುದು ಆರ್ಯರ ಧರ್ಮವಲ್ಲ -ಅದೊಂದು ಲೌಕಿಕವಾದ ಅಪಕೃಷ್ಟವಾದ ಧರ್ಮ: ಅದರ ಪ್ರಭಾವವೇ ಈಗಿನ ಆರ್ಯಧರ್ಮವಾಗಿದೆ. ಮ್ಲೇಚರು ಯಾವುದನ್ನು ಹಿಂದೂ ಧರ್ಮವೆನ್ನುತ್ತಾರೋ ಅದು ಲೋಪವಾಗಿಹೋಗಿದೆ. ಶುದ್ಧವಾದ ಹಿಂದೂ ಧರ್ಮವು ಜ್ಞಾನಾತ್ಮಕವಾದುದು. ಕೇವಲ ಕರ್ಮಾತ್ಮಕವಾದುದಲ್ಲ; ಆ ಜ್ಞಾನವು ಎರಡು ಪ್ರಕಾರ, ಬಹಿರ್ವಿಷಯಕವಾದುದೊಂದು, ಅಂತರ್ವಿಷಯಕವಾದುದೊಂದು. ಅಂತರ್ವಿಷಯಕವಾದ ಜ್ಞಾನವೇ ಆರ್ಯಧರ್ಮದ ಪ್ರಧಾನ ಭಾಗ. ಆದರೆ ಬಹಿರ್ವಿಷಯಕವಾದ ಜ್ಞಾನವು ಮೊದಲು ಹುಟ್ಟದಿದ್ದರೆ ಅಂತರ್ವಿಷಯಕವಾದ ಜ್ಞಾನ ಹುಟ್ಟುವುದರ ಸಂಭವವು ಕಡಿಮೆ. ಸ್ಥೂಲವಾದುದನ್ನು ತಿಳಿಯದಿದ್ದರೆ ಸೂಕ್ಷ್ಮವಾದುದನ್ನು ತಿಳಿಯುವುದು ಕಷ್ಟ. ಈಗ ಈ ದೇಶದಲ್ಲಿ ಬಹಳ ಕಾಲದಿಂದ ಬಹಿರ್ವಿಷಯಕ ಜ್ಞಾನವು ವಿಲುಪ್ತವಾಗಿ ಹೋಗಿದೆ.

ಅದರೊಂದಿಗೆ ಸ್ವಭಾವಸಿದ್ಧವಾದ ಆರ್ಯಧರ್ಮವೂ ಲೋಪವಾಗಿದೆ. ಆರ್ಯಧರ್ಮವನ್ನು ಪುನರುದ್ಧಾರಮಾಡಬೇಕಾದರೆ ಮೊದಲು ಬಹಿರ್ವಿಷಯಕವಾದ ಜ್ಞಾನವನ್ನು ಪ್ರಚಾರಮಾಡಬೇಕು. ಈಗ ಈ ದೇಶದಲ್ಲಿ ಬಹಿರ್ವಿಷಯಕವಾದ ಜ್ಞಾನವೇ ಇಲ್ಲ. ತಿಳಿಸಿ ಹೇಳಿಕೊಡುವ ಜನರಿಲ್ಲ; ನಾವು ಜನಗಳಿಗೆ ಶಿಕ್ಷಿಸುವುದರಲ್ಲಿ ಅಷ್ಟು ಸಮರ್ಥರಾಗಿಲ್ಲ; ಆದಕಾರಣ ಬೇರೆ ದೇಶದಿಂದ ಬಹಿರ್ವಿಷಯಕವಾದ ಜ್ಞಾನವು ಬರಬೇಕು. ಇಂಗ್ಲಿಷರು ಬಹಿರ್ವಿಷಯಕವಾದ ಜ್ಞಾನದಲ್ಲಿ ಪಂಡಿತರು, ಜನಗಳಿಗೆ ತಿಳಿಸುವುದರಲ್ಲಿ ಪಟುಗಳಾಗಿದ್ದಾರೆ. ಆದುದರಿಂದ ಇಂಗ್ಲಿಷರು ರಾಜರಾಗಬೇಕು. ಇಂಗ್ಲಿಷ್ ಕಲಿತರೆ ಬಹಿರ್ವಿಷಯಕವಾದ ಜ್ಞಾನದಲ್ಲಿ ಸುಶಿಕ್ಷಿತರಾಗಿ ಜನರು ಅಂತಃಸತ್ವವನ್ನು ತಿಳಿಯಲು ಸಮರ್ಥರಾಗುವರು. ಆಗ ಆರ್ಯಧರ್ಮದ ಪ್ರಚಾರಕ್ಕೆ ವಿಘ್ನವುಂಟಾಗುವುದಿಲ್ಲ. ಆಗ ನಿಜವಾದ ಧರ್ಮವು ತನಗೆ ತಾನಾಗಿಯೇ ಪುನರುದ್ದೀಪ್ತವಾಗುವುದು. ಎಷ್ಟುದಿನ ಹಾಗಾಗುವುದಿಲ್ಲವೋ ಎಷ್ಟು ದಿನ ಹಿಂದೂಗಳು ಜ್ಞಾನಿಗಳಾಗುವುದಿಲ್ಲವೋ, ಗುಣಾಢ್ಯರಾಗುವುದಿಲ್ಲವೋ, ಬಲಿಷ್ಠರಾಗುವುದಿಲ್ಲವೋ ಅಷ್ಟುದಿನ ಇಂಗ್ಲಿಷರ ರಾಜ್ಯವು ಅಕ್ಷಯವಾಗಿರುವುದು. ಇಂಗ್ಲಿಷರ ರಾಜ್ಯದಲ್ಲಿ ಪ್ರಜೆಗಳು ಸುಖಿಗಳಾಗುವರು. ನಿಷ್ಕಂಟಕವಾಗಿ ಧರ್ಮಾಚರಣೆಯನ್ನು ಮಾಡಬಲ್ಲರು. ಆದುದರಿಂದ ಎಲೈ ಬುದ್ಧಿವಂತನೆ! ಇಂಗ್ಲಿಷರ ಸಂಗಡ ಯುದ್ಧಮಾಡದೆ ನನ್ನನ್ನು ಅನುಸರಿಸಿ ಬಂದುಬಿಡು (ಪು. 159)

ಸತ್ಯಾನಂದನ ಕಣ್ಣುಗಳಿಂದ ಕಿಡಿಕೆಂಡಗಳು ಸುರಿದವು. ಅವನು ಶತ್ರುಗಳ ರಕ್ತದಿಂದ ಸಿಂಚನಮಾಡಿ ಮಾತೆಯನ್ನು ಸಸ್ಯಶಾಲಿನಿಯಾಗಿ ಮಾಡುವೆನೆಂದನು. ಮಹಾಪುರುಷ -ಶತ್ರು ಯಾರು? ಶತ್ರುಗಳು ಇನ್ನು ಇಲ್ಲ. ಇಂಗ್ಲಿಷರು ಮಿತ್ರ ರಾಜರು. ಇಂಗ್ಲಿಷರ ಸಂಗಡ ಯುದ್ಧವಾಡಿ ಜಯಿಸುವುದಕ್ಕೆ ಯಾರಿಗೂ ಶಕ್ತಿ ಇಲ್ಲ.
ಸತ್ಯಾನಂದ -ಶಕ್ತಿ ಇಲ್ಲದಿದ್ದರೆ ಇಲ್ಲಿಯೇ ಈ ಮಾತೆಯ ಪ್ರತಿಮೆಯ ಎದುರಿಗೆ ದೇಹತ್ಯಾಗವನ್ನು ಮಾಡಿಬಿಡುವೆನು.

ಮಹಾಪುರುಷ -ಅಜ್ಞಾನದಿಂದಲೆ? ನಡೆ. ಜ್ಞಾನಲಾಭವನ್ನು ಮಾಡು, ಹಿಮಾಲಯಶಿಖರದಲ್ಲಿ ಮಾತೃಮಂದಿರವಿರುವುದು. ಅಲ್ಲಿಯೇ ಮಾತೆಯ ಮೂರ್ತಿಯನ್ನು ತೋರಿಸುವೆನು - ಮುಕ್ತಾಯ- (ಪು.160)

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News