‘ವಾರ್ತಾಭಾರತಿ’ ಎಂಬ ಜನರ ಧ್ವನಿ

Update: 2022-08-29 04:31 GMT

ಪತ್ರಿಕೋದ್ಯಮ ಎಂಬುದು ಮಾನವ ಕುಲದ ಅದರಲ್ಲೂ ನಾಗರಿಕತೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಇದು ಮನುಷ್ಯರನ್ನು ಮನುಷ್ಯರಿಗೆ ಪರಿಚಯಿಸುತ್ತ ಜಗತ್ತನ್ನು ಜನರೆಲ್ಲರ ಸಂಪರ್ಕಕ್ಕೆ ತರುವ ಸಮರ್ಥ ಸಂಪರ್ಕ ಸಾಧನ ಅಂದರೆ ತಪ್ಪಿಲ್ಲ. ಈ ಹೊಣೆಗಾರಿಕೆಯನ್ನು ‘ವಾರ್ತಾಭಾರತಿ’ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ನೊಂದವರ ಧ್ವನಿಯಾಗಿ, ಕೆಳಗೆ ಬಿದ್ದವರ ಊರು ಗೋಲಾಗಿ, ಕಿವುಡು ಪ್ರಭುತ್ವಕ್ಕೆ ಎಚ್ಚರಿಕೆಯ ಗಂಟೆಯಾಗಿ, ಜನಪರ, ಜೀವಪರ ಹೋರಾಟಗಾರರಿಗೆ ಒಂದು ಅಸ್ತ್ರವಾಗಿ ‘ವಾರ್ತಾಭಾರತಿ’ ಯಶಸ್ಸಿನ ದಾರಿಯಲ್ಲಿ ಮುನ್ನಡೆದಿದೆ.

ಜಾಗತೀಕರಣ ಶಕೆಯ ಆರಂಭದೊಂದಿಗೆ ಮಾಧ್ಯಮ ರಂಗವೂ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಮುದ್ರಣದಿಂದ ವಿದ್ಯುನ್ಮಾನದತ್ತ ಚಲಿಸುತ್ತ ಹೊಸ ಆವಿಷ್ಕಾರಗಳೊಂದಿಗೆ ಮುನ್ನಡೆದಿದೆ. ಆದರೆ, ಈ ಅಬ್ಬರದ ಪರಿವರ್ತನೆಯ ಗದ್ದಲದಲ್ಲಿ ಸಾಮಾಜಿಕ ಕಾಳಜಿ ಎಂಬುದು ಎಲ್ಲೋ ಕಣ್ಮರೆಯಾಗಿದೆಯೇ ಎಂಬ ಸಂದೇಹ ಬರುತ್ತಿದೆ. ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ನಾವು ‘ವಾರ್ತಾಭಾರತಿ’ ನಡೆದು ಬಂದ ದಾರಿ ಅವಲೋಕಿಸಬೇಕಾಗಿದೆ.

‘ವಾರ್ತಾಭಾರತಿ’ಗೆ ಈಗ ಇಪ್ಪತ್ತರ ಸಂಭ್ರಮ. ಈ ಎರಡು ದಶಕಗಳಲ್ಲಿ ಬಹುತೇಕ ಅಂದರೆ ಮೊದಲ ಸಂಚಿಕೆಯಿಂದ ಇದರೊಂದಿಗೆ ಹೆಮ್ಮೆಯಿಂದ ಗುರುತಿಸಿಕೊಂಡಿದ್ದೇನೆ. ಕಳೆದ ಒಂದೂವರೆ ದಶಕದಿಂದಲೂ ತಪ್ಪದೇ ಅಂಕಣ ಬರೆಯುವ ಅವಕಾಶವನ್ನು ‘ವಾರ್ತಾಭಾರತಿ’ ನನಗೆ ನೀಡಿದೆ. ನನ್ನ ಬರವಣಿಗೆಗೆ ಪತ್ರಿಕೆಯ ಆಡಳಿತ ವರ್ಗ ಎಂದೂ ನಿರ್ಬಂಧ ಹೇರಿಲ್ಲ. ಕಟ್ಟುಪಾಡುಗಳನ್ನು ವಿಧಿಸಿಲ್ಲ. ಅನಿಸಿದ್ದನ್ನು ಬರೆಯುವ ಸ್ವಾತಂತ್ರವನ್ನು ಸಂಪಾದಕರು ನೀಡಿದ್ದಾರೆ.
ಮನುಷ್ಯನಿಗೆ ಸಂಬಂಧಿಸಿದ ಉದ್ದಿಮೆ, ಶಿಕ್ಷಣ, ಒಕ್ಕಲುತನ, ಕಲೆ,ಸಾಹಿತ್ಯ, ರಾಜಕಾರಣ, ಕ್ರೀಡೆ, ಆಡಳಿತ, ನ್ಯಾಯಾಂಗ ಹೀಗೆ ಎಲ್ಲ ಕ್ಷೇತ್ರಗಳ ಬಗ್ಗೆ ಸ್ಪಂದಿಸಿದೆ. ಸದಾ ಜನರ ಕಾವಲುಗಾರನ ಕೆಲಸವನ್ನು ದಕ್ಷವಾಗಿ ನಿರ್ವಹಿಸಿದೆ. ಅಪಾರ ಪ್ರಮಾಣದ ಓದುಗ ಸಮೂಹವನ್ನು ಸೃಷ್ಟಿಸಿಕೊಂಡಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸುದ್ದಿಯಾಗದ ಸುದ್ದಿಗಳಿಗೆ ‘ವಾರ್ತಾಭಾರತಿ’ ಜಾಗ ನೀಡಿದೆ. ಅಂಕಣ ಬರಹಗಳಿಗಾಗಿ ಈ ಪತ್ರಿಕೆಯನ್ನು ಓದುವವರಿದ್ದಾರೆ. ಸಂಪಾದಕೀಯ ಬರಹಗಳಿಗೆಂದೇ ‘ವಾರ್ತಾಭಾರತಿ’ ಓದುವ ಅನೇಕ ಅಭಿಮಾನಿಗಳಿದ್ದಾರೆ.

ಅಂತರ್‌ರಾಷ್ಟ್ರೀಯವಾಗಿ ಮುದ್ರಣ ಮಾಧ್ಯಮವೇ ಅಳಿವು ಉಳಿವಿನ ನಡುವೆ ಜೋಕಾಲಿ ಆಡುತ್ತಿರುವ ಈ ದಿನಗಳಲ್ಲಿ ‘ವಾರ್ತಾಭಾರತಿ’ ನಡೆದದ್ದು ದಾರಿ ಕಲ್ಲು ಮುಳ್ಳಿನ ದಾರಿಯಲ್ಲಿ. ಎದುರಾದ ಸವಾಲುಗಳಿಗೆ ಜವಾಬು ನೀಡುತ್ತ, ಬದ್ಧತೆಯೊಂದಿಗೆ ರಾಜಿ ಮಾಡಿಕೊಳ್ಳದೆ ಸಾಗಿ ಬಂದ ‘ವಾರ್ತಾಭಾರತಿ’ಯಂಥ ಇನ್ನೊಂದು ಪತ್ರಿಕೆ ಕನ್ನಡದಲ್ಲಿ ಇಲ್ಲ ಎಂಬ ಮಾತನ್ನು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರಿಂದ ಕೇಳಿ ಸಂಭ್ರಮಿಸಿದ್ದೇನೆ.

 ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಆಧಾರ ಸ್ತಂಭಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಜೊತೆಗೆ ನಾಲ್ಕನೇ ಅಂಗ ಪತ್ರಿಕೋದ್ಯಮ ಎಂದು ಸಂವಿಧಾನ ಹೇಳಿರದಿದ್ದರೂ ಅನೂಚಾನವಾಗಿ ಜನಜನಿತ ನಂಬಿಕೆಯಾಗಿದೆ. ಭಾರತದಲ್ಲಿ ಈಗ ಪ್ರಜಾಪ್ರಭುತ್ವ ವೇ ಅಪಾಯದಲ್ಲಿದೆ. ಸಂವಿಧಾನ ಕೂಡ ಸುರಕ್ಷಿತವಾಗಿಲ್ಲ. ಇಂಥ ಆತಂಕದ ಸನ್ನಿವೇಶದಲ್ಲಿ ‘ವಾರ್ತಾಭಾರತಿ’ ತನ್ನ ಇತಿ ಮಿತಿಯೊಳಗೆ ಜನತಂತ್ರದ ಬೇರುಗಳಿಗೆ ಧಕ್ಕೆ ಆಗದಂತೆ ಎಚ್ಚರದಿಂದ ಕಾವಲು ಕಾಯುತ್ತಿದೆ.

135 ಕೋಟಿ ಭಾರತೀಯರನ್ನು ಕೋಮು ಮತ್ತು ಜಾತಿಯ ಆಧಾರದಲ್ಲಿ ವಿಭಜಿಸುವ ಮೂಲಕ ದೇಶವನ್ನು ದುರ್ಬಲಗೊಳಿಸಲು ಹೊಂಚು ಹಾಕಿರುವ ಇಂದಿನ ದಿನಗಳಲ್ಲಿ ಬಹುತ್ವ ಭಾರತದ ಒರತೆ ಬತ್ತದಂತೆ ‘ವಾರ್ತಾಭಾರತಿ’ ಎಚ್ಚರ ವಹಿಸುತ್ತಿದೆ. ಭಾರತದ ಮಾಧ್ಯಮ ಅದರಲ್ಲೂ ಪತ್ರಿಕೋದ್ಯಮ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಎನ್‌ಡಿಟಿವಿಯ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಅದಾನಿ ಕಂಪೆನಿ ವಿದ್ಯುನ್ಮಾನ ಮಾಧ್ಯಮದ ಮೇಲೆ ನಿಯಂತ್ರಣ ಹೊಂದಲು ಪ್ರಯತ್ನಿಸುತ್ತಿರುವ ಈ ದಿನಗಳಲ್ಲಿ ಮಾಧ್ಯಮ ಲೋಕವನ್ನು ಏಕಸ್ವಾಮ್ಯದಿಂದ ಮುಕ್ತಗೊಳಿಸಲು ಪರ್ಯಾಯ ಪತ್ರಿಕೋದ್ಯಮ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ‘ವಾರ್ತಾಭಾರತಿ’ಯ ಕೊಡುಗೆ ಗಮನಾರ್ಹ.

ಭಾರತದ ರಾಜಧಾನಿ ದಿಲ್ಲಿಯಲ್ಲಿ ಒಂದು ವರ್ಷದಷ್ಟು ಸುದೀರ್ಘ ಕಾಲ ನಡೆದ ಐತಿಹಾಸಿಕ ರೈತರ ಸಾಮೂಹಿಕ ನಿರಶನ ಮತ್ತು ದಿಗ್ಬಂಧನದ ಕುರಿತ ವರದಿಗಳು ‘ವಾರ್ತಾಭಾರತಿ’ಯಲ್ಲಿ ಬಂದಷ್ಟು ವ್ಯಾಪಕವಾಗಿ ಕನ್ನಡದ ಬೇರಾವ ಪತ್ರಿಕೆಯಲ್ಲಿ ಬಂದಿಲ್ಲ ಎಂಬುದು ಹೆಮ್ಮೆಯ ಸಂಗತಿ. ಕೋವಿಡ್ ಕಾಲದಲ್ಲಿ ಇಡೀ ದೇಶವೇ ಸ್ತಬ್ಧವಾಗಿತ್ತು. ಆಗ ಯಾವುದೇ ವಾಹನ ಸಂಪರ್ಕ ಇರಲಿಲ್ಲ. ದೂರದ ಮುಂಬೈ, ದಿಲ್ಲಿ, ಕೋಲ್ಕತ, ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೊರಟ ಜನಸಾಮಾನ್ಯರು ಬೀದಿ ಹೆಣವಾದ ದಾರುಣ ಘಟನೆಗಳು, ಅನುಭವಿಸಿದ ಯಾತನೆಯ ಕತೆಗಳನ್ನು ವಾರ್ತಾಭಾರತಿ ವಿವರವಾಗಿ ಪ್ರಕಟಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.
ಒಂದು ಕಾಲದಲ್ಲಿ ಪತ್ರಕರ್ತರೆಂದರೆ ಅಧಿಕಾರದಲ್ಲಿ ಇರುವವರು ಹೆದರುತ್ತಿದ್ದರು. ಖಡ್ಗ, ಮದ್ದು ಗುಂಡುಗಳಿಗಿಂತ ಲೇಖನಿ ಕಂಡರೆ ಭಯಪಡುತ್ತಿದ್ದರು. ಒಂದು ಸಾವಿರ ಭರ್ಚಿಗಳಿಗಿಂತಲೂ ಮೂರು ಪತ್ರಿಕೆಗಳಿಗೆ ತಾನು ಹೆದರುವುದಾಗಿ ನೆಪೋಲಿಯನ್ ಹೇಳುತ್ತಿದ್ದ. ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕದಲ್ಲಿ ಅಂದಿನ ಸರಕಾರಗಳು ಅಭಿವ್ಯಕ್ತಿ ಸ್ವಾತಂತ್ರ ವನ್ನು ಹತ್ತಿಕ್ಕಲು ಅತ್ಯಂತ ಕ್ರೂರ ಶಾಸನಗಳನ್ನು ತಂದವು.

ಆದರೆ, ಭಾರತದಲ್ಲಿ ಸ್ವಾತಂತ್ರ ಹೋರಾಟ ತೀವ್ರಗೊಳ್ಳುವ ಮುಂಚೆಯೇ ರಾಜಾ ರಾಮ ಮೋಹನರಾಯ್ ಭಾಷಾ ಪತ್ರಿಕೋದ್ಯಮಕ್ಕೆ ಚಾಲನೆ ನೀಡಿದರು. ಭಾರತದ ಪತ್ರಿಕೋದ್ಯಮಕ್ಕೆ ಪ್ರತಿರೋಧದ ಬಹುದೊಡ್ಡ ತಿರುವನ್ನು ನೀಡಿದವರು. ಬಾಲ ಗಂಗಾಧರ ತಿಲಕ್ ಅವರ ‘ಮರಾಠಾ’ ಹಾಗೂ ‘ಕೇಸರಿ’ ಪತ್ರಿಕೆಗಳು ಜನರ ಅಭಿವ್ಯಕ್ತಿ ಯಾಗುವ ಹೊಸ ದಾರಿ ತೋರಿಸಿಕೊಟ್ಟವು.ಸ್ವಾತಂತ್ರ ಹೋರಾಟದ ಧ್ವನಿಯಾದವು.
ಭಾರತದಲ್ಲಿ 1780ರಲ್ಲಿ ಆರಂಭವಾದ ಪತ್ರಿಕೋದ್ಯಮಕ್ಕೆ ಉದಾತ್ತ ಉದ್ದೇಶ ಗಳೇನೂ ಇರಲಿಲ್ಲ. ಬೆಂಗಾಲ್ ಗೆಝೆಟ್ ಪತ್ರಿಕೆ ಆರಂಭಿಸಿದ ಜೇಮ್ಸ್ ಅಗಸ್ಟಸ್ ಹಿಕ್ಕಿ ಆಗಿನ ಗವರ್ನರ್‌ಗಳನ್ನು ಓಲೈಸುವುದು ಏಕೈಕ ಉದ್ದೇಶವಾಯಿತು.
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ ಎತ್ತಿ ಹಿಡಿಯಲು ಅನೇಕ ಮಂದಿ ತಮ್ಮ ಜೀವ ಪಣಕ್ಕಿಟ್ಟಿದ್ದಾರೆ. ಅವರಲ್ಲಿ ಮೋತಿಲಾಲ್ ಘೋಷ್, ಅರವಿಂದ್ ಘೋಷ್, ಡಾ. ಸಚ್ಚಿದಾನಂದ ಸಿನ್ಹಾ, ಜಿ.ಸುಬ್ರಹ್ಮಣ್ಯ ಅಯ್ಯರ್, ಕೆ.ನಟರಾಜನ್, ಬಿ.ಜೆ.ಹಾರ್ನಿಮನ್, ಮಾನವೇಂದ್ರನಾಥ್ ರಾಯ್ (ಎಂ.ಎನ್.ರಾಯ್) ಸಯ್ಯದ್ ಅಬ್ದುಲ್ಲಾ, ಎಸ್.ಸದಾನಂದ ಮೊದಲಾದವರು ನಿರ್ಭೀತ ಪತ್ರಿಕೋದ್ಯಮ ವನ್ನು ಕಟ್ಟಿ ಬೆಳೆಸಿದ್ದಾರೆ.

ಇಂಥ ಪರಂಪರೆಯಿರುವ ಭಾರತದ ಪತ್ರಿಕೋದ್ಯಮ ಈಗ ಮತ್ತೆ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗುತ್ತಿರುವ ದಿನಗಳಲ್ಲಿ ‘ವಾರ್ತಾಭಾರತಿ’ ಇಪ್ಪತ್ತರ ಸಂಭ್ರಮವನ್ನು ಆಚರಿಸುತ್ತಿದೆ. ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲಿ, ತನ್ನ ಬದ್ಧತೆ ಬಿಟ್ಟು ಕೊಡದೆ ಜನತೆಯ ಧ್ವನಿಯಾಗಿ ನಿಂತಿದೆ.
ದೇಶ ವಿದೇಶದಲ್ಲಿ ಅತ್ಯಂತ ಹೆಚ್ಚು ಆನ್ ಲೈನ್ ಓದುಗರನ್ನು ಹೊಂದಿರುವ ಈ ನಮ್ಮೆಲ್ಲರ ಪತ್ರಿಕೆ ಯಾವ ಆಸೆ , ಆಮಿಷಗಳಿಗೆ ಒಳಗಾಗದೇ, ಯಾವುದೇ ಒತ್ತಡಕ್ಕೆ ಮಣಿಯದೇ ಜಾತಿ ಮತಗಳ ಆಚೆಗೆ ನಿಂತು ಪ್ರಜಾಪ್ರಭುತ್ವದ ಘನತೆ, ಗೌರವಗಳನ್ನು ಎತ್ತಿ ಹಿಡಿಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಪತ್ರಿಕಾ ಸ್ವಾತಂತ್ರಕ್ಕಾಗಿ ಬ್ರಿಟಿಷ್ ಪ್ರಭುತ್ವದ ವಿರುದ್ಧ ಹೋರಾಡಿ ಅನೇಕ ಪತ್ರಕರ್ತರು, ಸಂಪಾದಕರು ಜೈಲಿಗೆ ಹೋದರು. ‘ತಾಯಿನಾಡು’ ಪತ್ರಿಕೆಯ ಮಾಲಕರಾದ ಪಿ.ಆರ್. ರಾಮಯ್ಯನವರು ಮತ್ತು ಸಂಪಾದಕರಾಗಿದ್ದ ಪಿ.ಬಿ.ಶ್ರೀನಿವಾಸ 1943ರಲ್ಲಿ ಕೆಲ ಕಾಲ ಜೈಲುವಾಸ ಅನುಭವಿಸಿದರು .ಆ ಕಾಲದ ಹೆಸರಾಂತ ಪತ್ರಿಕೆಗಳಾದ ‘ಜನವಾಣಿ’ ಮತ್ತು’ ಪ್ರಜಾಮತ’ ಸ್ಥಾಪಕರಾದ ಬಿ.ಎನ್.ಗುಪ್ತರು ಸೆರೆಮನೆವಾಸ ಮಾತ್ರವಲ್ಲದೆ ಗಡಿಪಾರು ಶಿಕ್ಷೆಯನ್ನು ಅನುಭವಿಸಿದರು. ಗಡಿಪಾರಾಗಿ ಹುಬ್ಬಳ್ಳಿಗೆ ಹೋದ ಗುಪ್ತರು ‘ಪ್ರಜಾಮತ’ವನ್ನು ‘ಪ್ರಜಾಮಿತ್ರ’ ಎಂದು ಹೆಸರು ಬದಲಿಸಿ ಸ್ವಾತಂತ್ರ ಹೋರಾಟದ ಸುದ್ದಿಗಳನ್ನು ತುಂಬಿ ಪ್ರಕಟಿಸುತ್ತಿದ್ದರು. ‘ಕರ್ಮವೀರ’ ಮತ್ತು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಾರಥ್ಯವನ್ನು ವಹಿಸಿದ್ದ ರಂಗನಾಥ ದಿವಾಕರ ಹಾಗೂ ‘ಕರ್ನಾಟಕ ವೈಭವ’ ಸಂಪಾದಕರಾಗಿದ್ದ ಮೊಹರೆ ಹಣಮಂತರಾಯರು ಹಾಗೂ ‘ಕನ್ನಡಿಗ’ ಪತ್ರಿಕೆಯನ್ನು ನಡೆಸುತ್ತಿದ್ದ ಮಂಗಳವೇಢೆ ಶ್ರೀ ನಿವಾಸರಾವ್ ಅವರೂ ಕೂಡ ಜೈಲು ವಾಸ ಅನುಭವಿಸಿದರೂ ಹೋರಾಟದಿಂದ ಹಿಂದೆ ಸರಿಯಲಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News