ಮಲ್ಪೆ: 800 ಮೀಟರ್ ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಉಡುಪಿ, ಸೆ.3: ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್ ಘಟಕ ಮತ್ತು ಪರಿಸರ ಘಟಕವು ಭೂ ವಿಜ್ಞಾನ ಸಚಿವಾಲಯ ಭಾರತ ಸರಕಾರ, ವಿಜ್ಞಾನ ಪ್ರಸಾರ ಮಂಡಳಿ ನವದೆಹಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ಪಿಳಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು ಇವರ ಸಹಯೋಗ ದೊಂದಿಗೆ ಸ್ವಚ್ಛ ಕರಾವಳಿ-ಸುರಕ್ಷಿತ ಸಾಗರ ಅಭಿಯಾನದಡಿ ಸಮುದ್ರ ತೀರ ಸ್ವಚ್ಛತಾ ಕಾರ್ಯಕ್ರಮವನ್ನು ಸೆ.2ರಂದು ಆಯೋಜಿಸಲಾಗಿತ್ತು.
ಸಮುದ್ರ ತೀರದಲ್ಲಿ 800 ಮೀಟರ್ ವಿಸ್ತಾರದ ಜಾಗವನ್ನು ಸ್ವಚ್ಛತೆಗಾಗಿ ಆಯ್ಕೆ ಮಾಡಲಾಯಿತು. ಕಡಲ ತೀರದಲ್ಲಿ ಜೈವಿಕ ವಿಘಟನೀಯವಲ್ಲದ ವಸ್ತುಗಳು, ಪಾದರಕ್ಷೆಗಳು, ಗಾಜಿನ ಬಾಟಲಿಗಳು, ಪಾಲಿಥಿನ್ ಚೀಲಗಳು ಮುಂತಾದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಪ್ಲಾಸ್ಟಿಕ್ನಿಂದ ಉಂಟಾಗಬಹುದಾದ ಮಾಲಿನ್ಯದ ಬಗ್ಗೆ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರು, ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿ ಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.