×
Ad

'ವಾರ್ತಾಭಾರತಿ'ಯ ಸಂಶುದ್ದೀನ್ ಎಣ್ಮೂರ್‌ಗೆ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ ಪ್ರದಾನ

Update: 2022-09-04 15:07 IST

ಬಂಟ್ವಾಳ, ಸೆ.4: ನಿರತ ಸಾಹಿತ್ಯ ಸಂಪದ ಕಡೆಗೋಳಿ ತುಂಬೆ ಹಾಗೂ ಗಲ್ಫ್ ಕನ್ನಡಿಗ ಡಾಟ್ ಕಾಮ್ ಇದರ ಜಂಟಿ ಆಶ್ರಯದಲ್ಲಿ ವೆಬ್ ಸೈಟ್ ನಲ್ಲಿ ಪ್ರಕಟವಾದ ರಾಜ್ಯ ಮಟ್ಟದ ಅತ್ಯುತ್ತಮ ವರದಿಗೆ ನೀಡುವ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ - 2022 ಅನ್ನು 'ವಾರ್ತಾಭಾರತಿ'ಯ ಪತ್ರಕರ್ತ ಸಂಶುದ್ದೀನ್ ಎಣ್ಮೂರ್ ಅವರಿಗೆ ಪ್ರದಾನ ಮಾಡಲಾಯಿತು.

ರವಿವಾರ ಬಿ.ಸಿ.ರೋಡ್ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶುದ್ದೀನ್ ಎಣ್ಮೂರ್, ದೇಶದ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಸ್ವಾಭಿಮಾನದಂತೆ ಬದುಕಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಇಂದಿಗೂ ಸಂಕಷ್ಟ ಪಡುತ್ತಿದೆ. ಮೂಡನಂಬಿಕೆ, ಅಂಧಶ್ರದ್ಧೆ, ಅಸ್ಪೃಶ್ಯತೆಗೆ ಒಳಗಾಗಿ ಮೂಲಭೂತ ಸೌಕರ್ಯ, ಮಾನವ ಹಕ್ಕುಗಳಿಂದ ವಂಚಿತವಾಗಿದೆ. ಪೌಷ್ಟಿಕಾಂಶದ ಕೊರತೆಯಿಂದ ಇಡೀ ಸಮುದಾಯ ಅಳಿವಿನ ಅಂಚಿನಲ್ಲಿದೆ. ಈ ಬಗ್ಗೆ ಸರಕಾರದ ಕಣ್ಣು ತೆರೆಸುವ ಉದ್ದೇಶದಿಂದ ನಾನು ಮಾಡಿರುವ ಕಿರು ಪ್ರಯತ್ನದ ವರದಿಗೆ ಬಿ.ಜಿ.ಮೋಹನ್ ದಾಸ್ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ ಎಂದರು.

ಪ್ರಶಸ್ತಿಗೆ ನನ್ನ ವರದಿ ಆಯ್ಕೆ ಮಾಡಿದ ನಿರತ ಸಾಹಿತ್ಯ ಸಂಪದ ಮತ್ತು ಗಲ್ಫ್ ಕನ್ನಡಿಗ ಡಾಟ್ ಕಾಮ್ ತಂಡಕ್ಕೆ ಕೃತಜ್ಞತೆ. ವೃತ್ತಿ ಜೀವನದಲ್ಲಿ ನನಗೆ ಸಹಕಾರ, ಪ್ರೋತ್ಸಾಹ ನೀಡಿದ ವಾರ್ತಾಭಾರತಿ ತಂಡಕ್ಕೆ ಧನ್ಯವಾದ. ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಬಿ.ಜಿ.ಮೋಹನ್ ದಾಸ್ ಅವರ ಸಹೋದರ, ಉಡುಪಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಜಂಟಿ ಕಾರ್ಯದರ್ಶಿ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್ ಮಾತನಾಡಿ, ಸಮಾಜದಲ್ಲಿ ಕಡೆಗಣಿಸಲ್ಪಟ್ಟ, ಸಮಾಜದಿಂದ ಸಂಕಷ್ಟದಲ್ಲಿ ಇರುವ, ಮುಖ್ಯವಾಹಿನಿಯಿಂದ ದೂರ ಉಳಿದವರ ಬಗ್ಗೆ ಬಿ.ನಿ.ಮೋಹನ್ ದಾಸ್ ಅವರು ಅಪಾರ ಕಾಳಜಿ ವಹಿಸುತ್ತಿದ್ದರು. ಅವರ ಹೆಸರಿನಲ್ಲಿ ಪ್ರದಾನಿಸುವ ಪ್ರಶಸ್ತಿ ಕೊರಗರ ಬಗೆಗಿನ ಆಯ್ಕೆಯಾಗಿರುವುದು ಅವರಿಗೆ ಸಂದ ಗೌರವವಾಗಿದೆ ಎಂದರು.

ನಿರತ ಸಾಹಿತ್ಯ ಸಂಪದ ಅಧ್ಯಕ್ಷ ಬ್ರಿಜೇಶ್ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲ ಸುಕೇಶ್ ಕುಮಾರ್ ಶೆಟ್ಟಿ ಬಿ.ಜಿ.ಮೋಹನ್ ದಾಸ್ ಅವರ ಪರಿಚಯ ಭಾಷಣ ಮಾಡಿದರು. ಉಪನ್ಯಾಸಕ ಅಬ್ದುಲ್ ಮಜೀದ್ ಅವರು ಪ್ರಶಸ್ತಿ ಪುರಸ್ಕೃತ ಸಂಶುದ್ದೀನ್ ಅವರ ಪರಿಚಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಉಪಸ್ಥಿತರಿದ್ದರು.  ಪ್ರಶಸ್ತಿಯ ತೀರ್ಪುಗಾರ ಗುರುಪ್ರಸಾದ್ ವಿಷಯ ಮಂಡಿಸಿದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೂ ಮೊದಲು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಬಿ.ಎಂ.ತುಂಬೆ ಉದ್ಘಾಟಿಸಿದರು. ರಾಯಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಅಧ್ಯಕ್ಷತೆ ವಹಿಸಿದ್ದರು. 

ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ಸಹಶಿಕ್ಷಕಿ ಸುಧಾ ನಾಗೇಶ್ ಸ್ವಾಗತಿಸಿದರು. ಕರುಣಾಕರ ಮಾರಿಪಳ್ಳ ಧನ್ಯವಾದಗೈದರು. ಬಿ.ಎಂ.ರಫೀಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News