ಅರವಿಂದ ಲಿಂಬಾವಳಿ ಪ್ರಕರಣ; ಮನುವಾದ ಪ್ರತಿಪಾದನೆಯ ಸ್ತ್ರೀ ವಿರೋಧಿ ಧೋರಣೆಗೆ ಸಾಕ್ಷಿ: ಉಡುಪಿ ಜಿಲ್ಲಾ ಕಾಂಗ್ರೆಸ್
ಕಾರ್ಕಳ: ಶಾಸಕ ಅರವಿಂದ ಲಿಂಬಾವಳಿ ಪ್ರಕರಣ ಬಿಜೆಪಿಯ ಮನುವಾದ ಪ್ರತಿಪಾದನೆಯ ಸ್ತ್ರೀ ವಿರೋಧಿ ಧೋರಣೆಗೆ ಸಾಕ್ಷಿ. ಬಿಜೆಪಿಗಿದು ಹೊಸತಲ್ಲ. ಇದು ಇವರ ರಾಜಕೀಯ ಸಂಸ್ಕೃತಿ. ಈ ಪಕ್ಷದಿಂದ ಮಹಿಳೆಯರು ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಜನರ ದು:ಖ ದುಮ್ಮಾನಗಳಿಗೆ ಸ್ಪಂದಿಸ ಬೇಕಾದ ಶಾಸಕನಾದವನ ಕರ್ತವ್ಯ. ಅದುಬಿಟ್ಟು ಮನವಿ ಹಿಡಿದು ಬಂದ ಸಂತ್ರಸ್ಥೆಯನ್ನು ಅವ್ಯಾಚ್ಯ ಭಾಷೆಯಿಂದ ನಿಂದಿಸಿ ಬೈದಿರುವುದಷ್ಟೇ ಅಲ್ಲದೆ ಇದನ್ನು ಪ್ರಶ್ನಿಸಿದ ಮಾಧ್ಯಮದವರಲ್ಲಿ ನಾನೇನು ಅವಳ ರೇಪ್ ಮಾಡಿದ್ದೇನೆಯೇ ಎಂದು ಮರು ಪ್ರಶ್ನೆ ಮಾಡಿರುವುದು ಇವರ ವಿಕೃತ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದಿರುವ ಕಾಂಗ್ರೆಸ್ ಜನರ ಸಮಸ್ಯೆಗಳನ್ನು ಕೇಳುವಷ್ಟು ಸಹನೆ ಇಲ್ಲದ ಈ ಮನುಷ್ಯ ಕೂಡಲೇ ತನ್ನ ಶಾಸಕನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದಿದೆ.
ಸಂತ್ರಸ್ಥೆಯ ಮೇಲೆ ಪೊಲೀಸರ ಮೂಲಕ ಕೇಸು ದಾಖಲಿಸಿರುವುದು ಖಂಡನೀಯ. ತನ್ನ ಕ್ಷೇತ್ರದ ಶಾಸಕನಲ್ಲಿ ತನಗಾದ ಅನ್ಯಾಯದ ಬಗ್ಗೆ ಮನವಿ ನೀಡುವುದು ಮತ್ತು ಮನವಿಗೆ ಸ್ಪಂದಿಸುವಂತೆ ಒತ್ತಾಯಿಸುವುದು ಪ್ರಜೆಯೊಬ್ಬನ ಹಕ್ಕು. ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ಅದನ್ನು ಯಾವುದೇ ಕಾರಣಕ್ಕೂ ಶಾಸಕನ ಕರ್ತವ್ಯಕ್ಕೆ ಅಡ್ಡಿ ಎಂದು ಪರಿಗಣಿಸಲಾಗದು. ಆದರೆ ಈ ಪ್ರಕರಣದಲ್ಲಿ ಪೊಲೀಸರೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಶಾಸಕ ಲಿಂಬಾವಳಿ ಆದೇಶವನ್ನು ಪರಿಗಣಿಸಿ ಸಂತ್ರಸ್ಥೆಯ ಮೇಲೆ ಕೇಸ್ ಹಾಕಿರುವುದು ವಿಷಾದನೀಯ. ವಾಸ್ತವದಲ್ಲಿ ಇಲ್ಲಿ ಸಂತ್ರಸ್ಥ ಮಹಿಳೆಯ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಕಾಂಗ್ರೆಸ್ ಹೇಳಿದೆ.
ರಾಜ್ಯದ ಗೃಹ ಸಚಿವರು ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸ ಬೇಕು. ಶಾಸಕ ಲಿಂಬಾವಳಿಯಿಂದ ಕೂಡಲೇ ಶಾಸಕತ್ವಕ್ಕೆ ರಾಜೀನಾಮೆ ಕೊಡಿಸಬೇಕು. ಸಂತ್ರಸ್ತ ಮಹಿಳೆಯ ಮೇಲಿನ ಪ್ರಕರಣವನ್ನು ಕೂಡಲೇ ಹಿಂತೆಗೆದುಕೊಂಡು ಆಕೆಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.