ರಸ್ತೆಗಳು ಜಲಾವೃತ; ಬೆಂಗಳೂರಿನಲ್ಲಿ ಜಲಸಂಚಾರಕ್ಕಾಗಿ ಬೋಟ್ ಫ್ಯಾಕ್ಟರಿ ಆರಂಭಿಸುವುದು ಉತ್ತಮ ಎಂದು ಡಿಕೆಶಿ
ಬೆಂಗಳೂರು, ಸೆ.8: ರಾಜ್ಯ ಸರಕಾರ ಬೆಂಗಳೂರಿನ ಐಟಿ ಕಾರಿಡಾರ್ ನಲ್ಲಿ ಜಲಸಂಚಾರಕ್ಕಾಗಿ ಬೋಟ್ ಫ್ಯಾಕ್ಟರಿ ಆರಂಭಿಸುವುದು ಉತ್ತಮ. ಬಿಜೆಪಿ ಅವರು ಜನಸ್ಪಂದನ ಬದಲಾಗಿ ಮೊದಲು ಜಲಸ್ಪಂದನ ಕೆಲಸ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D. K. Shivakumar) ಟೀಕಿಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ನಿರಂತರ ಮಳೆ ಬೀಳುತ್ತಿದೆ. ಈ ರಾಜ್ಯ ಸರಕಾರಕ್ಕೆ ಬೆಂಗಳೂರಿನ ಬೆಲೆ ತಿಳಿದಿಲ್ಲ. ಬೆಂಗಳೂರು ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎಂಬುದು ಗೊತ್ತಿಲ್ಲ. ದೇಶಕ್ಕೆ ಸುಮಾರು ಶೇ.30ರಷ್ಟು ತೆರಿಗೆ ಆದಾಯ ಕೇಂದ್ರಕ್ಕೆ ಇಲ್ಲಿಂದಲೇ ಹೋಗುತ್ತದೆ ಎಂದರು.
ಇದನ್ನೂ ಓದಿ: ಬೆಂಗಳೂರಿನ ಮಳೆ ನೀರಿನ ಅವಾಂತರಕ್ಕೆ IT ಕಂಪೆನಿಗಳೂ ಕಾರಣ: ಉದ್ಯಮಿ ಮೋಹನ್ ದಾಸ್ ಪೈಗೆ BJP ಮುಖಂಡನಿಂದ ಬಹಿರಂಗ ಪತ್ರ
ನಾನು ಬೆಂಗಳೂರು ನಿವಾಸಿಯಾಗಿದ್ದು, ನಮಗೆ ಒಂದು ಅವಕಾಶ ನೀಡಿ. ನಾವು ನಿಮ್ಮ ಗೌರವ ಕಾಪಾಡಿ ಉತ್ತಮ ಬದುಕು ನೀಡುವಂತಹ ಆಡಳಿತ ನೀಡುತ್ತೇವೆ ಎಂದು ಜನರಿಗೆ ಮನವಿ ಮಾಡಿದರು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಮಾನ ಹರಾಜಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಮಗೆ ಅವಕಾಶ ಕೊಟ್ಟರೆ ನಾವು ಬೆಂಗಳೂರಿನ ಬ್ರ್ಯಾಂಡ್ ಅನ್ನು ಮರುಸ್ಥಾಪಿಸುತ್ತೇವೆ ಎಂದು ಉತ್ತರಿಸಿದರು.