ಬೆಂಗಳೂರಿನ ಮಳೆ ನೀರಿನ ಅವಾಂತರಕ್ಕೆ IT ಕಂಪೆನಿಗಳೂ ಕಾರಣ: ಉದ್ಯಮಿ ಮೋಹನ್ ದಾಸ್ ಪೈಗೆ BJP ಮುಖಂಡನಿಂದ ಬಹಿರಂಗ ಪತ್ರ
ಬೆಂಗಳೂರು: ವ್ಯಾಪಕ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಬೆಂಗಳೂರಿನ ಟೆಕ್ ಕಾರಿಡಾರ್ ಅಕ್ಷರಶಃ ಕಂಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಉದ್ಯಮಿ ಮೋಹನ್ ದಾಸ್ ಪೈ ಅವರು ಬೆಂಗಳೂರನ್ನು ಉಳಿಸಿ #Save Bengaluru ಎಂಬ ಅಭಿಯಾನ ಆರಂಭಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರನ್ನು ಟ್ಯಾಗ್ ಮಾಡಿ ಬಿಬಿಎಂಪಿ ಹಾಗೂ ಸ್ಥಳೀಯ ಆಡಳಿತದ ವೈಫಲ್ಯದ ಬಗ್ಗೆ ಟ್ವೀಟ್ ಮಾಡಿದ್ದರು.
ಈ ಕುರಿತು ಇದೀಗ ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷ ಎನ್.ಆರ್. ರಮೇಶ್ ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
'ಬೆಂಗಳೂರು ಮಹಾನಗರದ ಇಂದಿನ ಮಳೆ ನೀರಿನ ಅವಾಂತರಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಮಹಾನಗರದ IT / BT ಕಂಪೆನಿಗಳು ಮತ್ತು Tech Park ಗಳೂ ಸಹ ಕಾರಣ ಎಂಬ ಸತ್ಯವನ್ನು ತಾವು ಉದ್ದೇಶಪೂರ್ವಕವಾಗಿ ಮರೆತಿರುತ್ತೀರಿ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ' ಎಂದು ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ.
>> ಎನ್.ಆರ್. ರಮೇಶ್ ಅವರ ಪತ್ರದ ಸಾರಾಂಶ ಹೀಗಿದೆ...
ಮೋಹನ್ ದಾಸ್ ಪೈ ಅವರೇ, ನೀವು ಕಳೆದ 10-15 ದಿನಗಳಿಂದ ಸೇವ್ ಬೆಂಗಳೂರು ಎಂಬ ಹೆಸರಿನಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಅನೇಕರಿಗೆ ಪತ್ರ ಬರೆದಿರುವುದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ನಡೆಸುತ್ತಿದ್ದೀರಿ. ಪ್ರವಾಹ ಉಂಟಾಗಿರುವುದರಿಂದ ಬೆಂಗಳೂರಿನ ಐಟಿ, ಬಿಟಿ ಕಂಪನಿಗಳು ತೆಲಂಗಾಣದತ್ತ ವಲಸೆ ಹೋಗಲು ಚಿಂತಿಸುತ್ತಿವೆ ಎಂದು ನೀವು ಪತ್ರದಲ್ಲಿ ತಿಳಿಸಿದ್ದೀರಿ. ಆದರೆ, 1999ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಅದರಲ್ಲೂ ವಿಶೇಷವಾಗಿ ಮಹದೇವಪುರ, ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಪೋರೇಟ್ ಕಂಪನಿಗಳು ಪ್ರಾರಂಭವಾದವು. ಇದಕ್ಕೆ ಕಾರಣ ಸಮುದ್ರಮಟ್ಟದಿಂದ 3,000 ಅಡಿ ಎತ್ತರದಲ್ಲಿ ಅತ್ಯಂತ ವೈಜ್ಞಾನಿಕವಾಗಿ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದ್ದಾರೆ, ಇಲ್ಲಿನ ವಾತಾವರಣ ಚೆನ್ನಾಗಿದೆ, ಇಲ್ಲಿನ ಜನರು ಮೃದು ಸ್ವಭಾವದವರು ಎಂಬುದಾಗಿತ್ತು. ಬೆಂಗಳೂರಿನ ಐಟಿ, ಬಿಟಿ ಕಂಪನಿಗಳು, ಟೆಕ್ ಪಾರ್ಕ್, ಬ್ಯುಸಿನೆಸ್ ಪಾರ್ಕ್ಗಳ ಅನುಕೂಲಕ್ಕೆಂದು 1999ರಿಂದ 2004ರ ಅವಧಿಯಲ್ಲಿ ಬೆಂಗಳೂರಿನಲ್ಲಿ 4,500 ಕಿ.ಮೀ ಉದ್ದದ ರಸ್ತೆಗಳಲ್ಲಿ OFC Ductಗಳನ್ನು ಹಾಕಿಕೊಳ್ಳಲು ರಸ್ತೆ ಅಗೆತ ಶುಲ್ಕ ಪಡೆಯದೆ ಉಚಿತ ಅನುಮತಿ ನೀಡಲಾಗಿತ್ತು. ಇದಕ್ಕೆ ಸರ್ಕಾರ ತನ್ನ ಬೊಕ್ಕಸದಿಂದಲೇ ಸುಮಾರು 3,000 ಕೋಟಿ ರೂ. ಹಣ ಖರ್ಚು ಮಾಡಿತ್ತು ಎಂಬುದನ್ನು ನೀವು ಮರೆತಂತಿದೆ.
ತಮ್ಮ ಸಂಸ್ಥೆಗಳಿಗೆ OFC Duct ಗಳನ್ನು ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ 4,500 ಕಿ. ಮೀ. ಉದ್ದದ ರಸ್ತೆಗಳ ಪುನಶ್ವೇತನ ಕಾರ್ಯಕ್ಕೆಂದೇ ಸುಮಾರು 3,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ರಾಜ್ಯ ಸರ್ಕಾರವು ತನ್ನ ಖಜಾನೆಯಿಂದ ಭರಿಸಿರುತ್ತದೆ ಎಂಬ ಸತ್ಯವನ್ನೂ ಸಹ ತಮ್ಮ ಗಮನಕ್ಕೆ ಮತ್ತೊಮ್ಮೆ ತರಲು ಇಚ್ಛಿಸುತ್ತೇನೆ.
ತಾವು ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತುತ ವರ್ಷ IT / BT ಕಂಪೆನಿಗಳು ಮತ್ತು Tech Park ಗಳು ಜಲಾವೃತಗೊಂಡಿರುವ ಬಗ್ಗೆ ಉಲ್ಲೇಖಿಸಿರುತ್ತೀರಿ. ELCIA (Electronics City Industries Association) ORRCA (Outer RingRoad Companies Association) ಎಂಬ ಎರಡು ಹೆಸರಿನಲ್ಲಿ ಸಂಘಟನೆಗಳನ್ನು ಮಾಡಿಕೊಂಡಿರುವ ಬೆಂಗಳೂರಿನ ಪ್ರಮುಖ IT / BT ಕಂಪೆನಿಗಳು ಮತ್ತು Tech Park ಗಳು ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ವಿಶ್ವದ ಏಕೈಕ ನಗರ ಎಂಬ ಖಾತಿಯನ್ನು ಪಡೆದಿರುವ ಮತ್ತು ಮೇಲ್ಕಂಡ ಸಂಸ್ಥೆಗಳಿಗೆ ಎಲ್ಲವನ್ನೂ ನೀಡಿರುವ ಬೆಂಗಳೂರು ಮಹಾನಗರದ ಬಗ್ಗೆ ಜಾಗತಿಕವಾಗಿ ಕಪ್ಪು ಚುಕ್ಕೆ ತರುವಂತಹ ರೀತಿಯಲ್ಲಿ ತಾವು ವರ್ತಿಸುತ್ತಿದ್ದೀರಿ.
ಬೆಂಗಳೂರು ಮಹಾನಗರದ ಇಂದಿನ ಮಳೆ ನೀರಿನ ಅವಾಂತರಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಮಹಾನಗರದ IT / BT ಕಂಪೆನಿಗಳು ಮತ್ತು Tech Park ಗಳೂ ಸಹ ಕಾರಣ ಎಂಬ ಸತ್ಯವನ್ನು ತಾವು ಉದ್ದೇಶಪೂರ್ವಕವಾಗಿ ಮರೆತಿರುತ್ತೀರಿ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ
ವಿಶೇಷವಾಗಿ ಬೆಂಗಳೂರು Outer Ring Road Companies Association ನ ಅಡಿಯಲ್ಲಿ ಇರುವಂತಹ 79 Tech Park ಗಳು, ELCIA (Electronics City Industries Association) ಅಡಿಯಲ್ಲಿ ಇರುವಂತಹ 250 ಕ್ಕೂ ಹೆಚ್ಚು IT / BT ಕಂಪೆನಿಗಳು ಹಾಗೂ ಮಹದೇವಪುರದ ITPL ನಲ್ಲಿರುವ 100 ಕ್ಕೂ ಹೆಚ್ಚು IT ಕಂಪೆನಿಗಳು ತಾವು ನಿರ್ಮಾಣ ಮಾಡಿರುವ ತಮ್ಮ ತಮ್ಮ ಸಂಸ್ಥೆಯ ಕಟ್ಟಡಗಳ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿದ್ದಂತಹ ರಾಜಕಾಲುವೆಗಳನ್ನು ಮತ್ತು ರಾಜಕಾಲುವೆಗಳ, Buffer Zone ಗಳನ್ನು ಬಹುತೇಕ ಒತ್ತುವರಿ ಮಾಡಿಕೊಂಡಿರುವ ಸತ್ಯವನ್ನು ತಾವು ಮರೆತಂತಿದೆ.
ಉದಾಹರಣೆಗೆ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿರುವ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಖ್ಯಾತಿಯನ್ನು O Infosys, Wipro, Biocon, Tech Mahindra, Siemens, Tata Power, Robert Bosch, IBM, TCS, HCL, C - Dot, HP (Hewlett - Packard) ನಂತಹ ಸಂಸ್ಥೆಗಳು ತಾವು ನಿರ್ಮಾಣ ಮಾಡಿರುವ ಕಟ್ಟಡಗಳ ವ್ಯಾಪ್ತಿಯಲ್ಲಿದ್ದಂತಹ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವುದು ಅಥವಾ ರಾಜಕಾಲುವೆಗಳ Primary Drain (ಬೃಹತ್ ಮಳೆ ನೀರುಗಾಲುವೆ) ಮತ್ತು Secondary Drain (ದ್ವಿತೀಯ ಹಂತದ ರಾಜಕಾಲುವೆ) ಗಳ ಆಗಲವನ್ನು ಕಡಿತಗೊಳಿಸಿ ಮಾರ್ಗಾಂತರ (Diversion) ಮಾಡಿರುವುದು ತಮಗೂ ತಿಳಿದಿದೆ ಎಂದು ಭಾವಿಸಿರುತ್ತೇನೆ.
ಹಾಗೆಯೇ, Outer Ring Road ರಸ್ತೆ ಸೇರಿದಂತೆ ಬೆಂಗಳೂರು ಮಹಾನಗರದಲ್ಲಿರುವಂತಹ 79 Tech Park Cessna Tech Park, Ecospace Teck Park, Salarpuria Tech Park, Manyata Tech Park, Bagmane Teck Park ಗಳು ಸೇರಿದಂತೆ 79 Tech Park ಗಳ 90,85,000 ಚ. ಅಡಿಗಳಷ್ಟು ಒಟ್ಟು ನಿರ್ಮಿತ ಪ್ರದೇಶಗಳ ಪೈಕಿ ಶೇ. 25% ರಷ್ಟು ನಿರ್ಮಿತ ಪ್ರದೇಶವನ್ನು ಸಂಪೂರ್ಣವಾಗಿ ರಾಜಕಾಲುವೆಗಳು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವಂತಹ ಕಟ್ಟಡಗಳಾಗಿವೆ ಎಂಬ ಅಂಶವನ್ನೂ ಸಹ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.
[ ಎನ್.ಆರ್. ರಮೇಶ್, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರು]
ಕೇವಲ ಈ 79 Tech Park ಗಳು ಮಾತ್ರವೇ ಕನಿಷ್ಠ 06 ಲಕ್ಷ ಚ, ಅಡಿಗಳಷ್ಟು ವಿಸ್ತೀರ್ಣದ ರಾಜಕಾಲುವೆಗಳ ಪ್ರದೇಶವನ್ನು ಸಂಪೂರ್ಣವಾಗಿ ಕಬಳಿಕೆ ಮಾಡಿರುವಂತಹ ವಿಷಯ ದಾಖಲೆಗಳಿಂದ ಈಗಾಗಲೇ ರುಜುವಾತಾಗಿರುತ್ತದೆಯಲ್ಲದೇ, ಈ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳೂ ಸಹ ದಾಖಲಿಸಲ್ಪಟ್ಟಿರುತ್ತವೆ !!!!
ಅಲ್ಲದೇ ಮಹದೇವಪುರದ ITPL ನಲ್ಲಿರುವ Accenture, MU signa, Aegis, Tesco, Dell ಗಳಂತಹ ಮಾಹಿತಿ ತಂತ್ರಜ್ಞಾನ ಸಮೂಹ ಸಂಸ್ಥೆಗಳು ಅವುಗಳಿಗೆ ಹೊಂದಿಕೊಂಡಂತಿರುವ ಗಿಡ್ಡನಕೆರೆ ಮತ್ತು ಕುಂದಲ ಹಳ್ಳಿ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಸತ್ಯವನ್ನೂ ಸಹ ತಮಗೆ ತಿಳಿಸಲು ಇಚ್ಛಿಸುತ್ತೇನೆ.
ಸದರಿ ಕಂಪೆನಿಗಳು ನಿರ್ಮಾಣಗೊಂಡ ಆಯಾ ಕಾಲದ ಭ್ರಷ್ಟ ಅಧಿಕಾರಿಗಳು ಮತ್ತು ಕೆಲವು ವಂಚಕ ಜನ ಪ್ರತಿನಿಧಿಗಳ ಕಾನೂನುಬಾಹಿರ ಸಹಕಾರಗಳಿಂದಲೇ ಇಷ್ಟೊಂದು ಬೃಹತ್ ಮಟ್ಟದ ಒತ್ತುವರಿ ಕಾರ್ಯಗಳು ನಡೆದಿವೆ ಎಂಬುದೂ ಸಹ ಬಹಿರಂಗ ಸತ್ಯ |||
ಈ ಎಲ್ಲಾ ವಿಷಯಗಳ ಬಗ್ಗೆ ತಮಗೆ ಅರಿವಿದ್ದೂ ಸಹ ಉದ್ದೇಶಪೂರ್ವಕವಾಗಿ ಇಂತಹ ವಿಷಯಗಳನ್ನು ಮರೆಮಾಚಿ ಬೆಂಗಳೂರು ಮಹಾನಗರದಂತಹ ಐತಿಹಾಸಿಕ ನಗರಕ್ಕೆ ಜಾಗತಿಕ ಮಟ್ಟದಲ್ಲಿ ಮಸಿ ಬಳಿಯುವಂತಹ ಕೆಲಸವನ್ನು ತಾವು ಮಾಡುವ ಮೂಲಕ ಬೆಂಗಳೂರು ನಗರದ ವಿರೋಧಿದೋರಣೆಯನ್ನು ನಿರಂತಂತರವಾಗಿ ಪ್ರದರ್ಶನ ಮಾಡುತ್ತಿರುತ್ತೀರಿ. ಕೇವಲ ಎಲೆಕ್ಟ್ರಾನಿಕ್ ಸಿಟಿ ಪ್ರದೇಶ ಒಂದರಿಂದಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಿಂದಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯ ಅನುಸಾರವಾಗಿ ಸುಮಾರು 350 ರಿಂದ 400 ಕೋಟ ರೂಪಾಯಿಗಳಷ್ಟು ಹಣವನ್ನು ಆಸ್ತಿ ತೆರಿಗೆಯ ರೂಪದಲ್ಲಿ ಪಾವತಿಸಬೇಕಿರುವ ತಾವು ಎಲೆಕ್ಟ್ರಾನಿಕ್ ಸಿಟಿ ಪ್ರದೇಶವು ಬಿಬಿಎಂಪಿ ವ್ಯಾಪ್ತಿಗೆ ಒಳಪಡಬೇಕಾದ ಅನಿವಾರ್ಯತೆಯನ್ನು ತಪ್ಪಿಸಿ Township ಎಂಬ ಹೆಸರಿನಲ್ಲಿ ಪ್ರತ್ಯೇಕವಾದ ಕೈಗಾರಿಕಾ ಪ್ರದೇಶವನ್ನು ಮಾಡಿಕೊಂಡಿರುತ್ತೀರಿ.
BBMP ಮತ್ತು BWSSB ಇಲಾಖೆಗಳ ಮೂಲಕ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡಿರುವ ELCIA, ಕಾನೂನು ರೀತ್ಯಾ ಪಾವತಿಸಬೇಕಿರುವ 400 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಆಸ್ತಿ ತೆರಿಗೆಯನ್ನು ವಂಚಿಸಿ, ಕೇವಲ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಸುತ್ತ ಮುತ್ತಲಿರುವ ನಾಲೈದು ಗ್ರಾಮ ಪಂಚಾಯಿತಿಗಳಿಗೆ ವಾರ್ಷಿಕವಾಗಿ ನಾಲೈದು ಕೋಟಿ ರೂಪಾಯಿಗಳನ್ನಷ್ಟೇ ವೆಚ್ಚ ಮಾಡಿ ELCIA ದ ಸದಸ್ಯ ಸಂಸ್ಥೆಗಳು ಆಸ್ತಿ ತೆರಿಗೆಗಳ್ಳತನವನ್ನು ಮಾಡುತ್ತಿರುವ ವಿಷಯವನ್ನೂ ಸಹ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.
ಹಾಗೆಯೇ, ಇನ್ನು ಮುಂದಾದರೂ CSR ನಿಯಮಗಳಿಗೆ ಅನುಗುಣವಾಗಿ ಮೇಲ್ಕಂಡ ಪ್ರದೇಶಗಳಲ್ಲಿರುವ IT / BT ಸಂಸ್ಥೆಗಳು ಮತ್ತು Tech Park ಗಳು ಕಾನೂನು ರೀತ್ಯಾ ತಾವು ನೀಡಲೇಬೇಕಿರುವ ಸಾರ್ವಜನಿಕ ಕಾರ್ಯಗಳಿಗೆ ವರ್ಷಂಪ್ರತಿ ಬಿಡುಗಡೆ ಮಾಡಿರುವ CSR ನಿಧಿಯ ವಿವರಗಳನ್ನು ಒಳಗೊಂಡ 'ಶ್ವೇತ ಪತ್ರ'' ಗಳನ್ನು ಬಹಿರಂಗವಾಗಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಕೊನೆಯದಾಗಿ ತಮಗೊಂದು ಕಿವಿ ಮಾತು:- ನಿಜಕ್ಕೂ ತಾವು "Save Bengaluru' ಅಭಿಯಾನ ನಡೆಸಬೇಕಿರುವುದು "ಸ್ವತಃ ತಮ್ಮದೇ ನೇತೃತ್ವ ಹೊಂದಿರುವ ECLIA, ORRCA ಮತ್ತು ITPL ಪ್ರದೇಶಗಳಲ್ಲಿ ರಾಜಕಾಲುವೆಗಳನ್ನು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಸದ್ಯದ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿ ಬೆಂಗಳೂರು ಮಹಾನಗರಕ್ಕೆ ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ಅಭಿಪ್ರಾಯ ಬರಲು ಪ್ರಮುಖ ಕಾರಣಕರ್ತವಾಗಿರುವ IT / BT ಕಂಪೆನಿಗಳು ಮತ್ತು Tech Park ಗಳ ವಿರುದ್ಧ ಮತ್ತು ತಮ್ಮ ಒಟ್ಟು ನಿರ್ಮಿತ ಪ್ರದೇಶಗಳ ಪೈಕಿ ಶೇ. 50% ಕ್ಕೂ ಹೆಚ್ಚು ನಿರ್ಮಿತ ಪ್ರದೇಶಗಳ ಮಾಹಿತಿಯನ್ನು ಮರೆಮಾಚಿ ಪ್ರತಿ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂರಾರು ಕೋಟಿ ಆಸ್ತಿ ತೆರಿಗೆ ವಂಚಿಸಿರುವ / ವಂಚಿಸುತ್ತಿರುವ ಹಾಗೂ ನ್ಯಾಯಯುತವಾಗಿ ವೆಚ್ಚ ಮಾಡಲೇಬೇಕಿರುವ CSR ನಿಧಿಯ ಮೊತ್ತದಲ್ಲಿ ಶೇ. 95% ಕ್ಕೂ ಹೆಚ್ಚು ಮೊತ್ತವನ್ನು ವಂಚಿಸುತ್ತಿರುವ ಇದೇ ಸಂಸ್ಥೆಗಳ ವಿರುದ್ಧ' ಎಂಬ ಪರಮ ಸತ್ಯವನ್ನು ತಾವು ಅರಿತುಕೊಳ್ಳಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
BJP leader NR Ramesh targets @TVMohandasPai over his campaign "Save #Bengaluru" after the recent flooding of the IT corridor. Rames alleges he is trying to tarnish the image of #Karnataka by posting various details of the floods on social media. pic.twitter.com/pryPgaBbeY
— Imran Khan (@KeypadGuerilla) September 8, 2022
BJP leader NR Ramesh targets @TVMohandasPai over his campaign "Save #Bengaluru" after the recent flooding of the IT corridor. Rames alleges he is trying to tarnish the image of #Karnataka by posting various details of the floods on social media. pic.twitter.com/pryPgaBbeY
— Imran Khan (@KeypadGuerilla) September 8, 2022