ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಕುದ್ರೋಳಿ ಕ್ಷೇತ್ರದವರೆಗೆ ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಗುರು ಸಂದೇಶ ಯಾತ್ರೆ

Update: 2022-09-10 11:49 GMT

ಮಂಗಳೂರು, ಸೆ. 10: ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ವತಿಯಿಂದ 'ನಮ್ಮ ನಡೆ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದೆಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಗುರು ಸಂದೇಶ ಯಾತ್ರೆಗೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಚಾಲನೆ ನೀಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ 168ನೆ ಜನ್ಮ ಜಯಂತಿ ಆಚರಣೆಯ ನಿಮಿತ್ತ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದವರೆಗಿನ ಸಂದೇಶ ಯಾತ್ರೆಯಲ್ಲಿ ನಾರಾಯಣ ಗುರುಗಳ ಭಾವಚಿತ್ರದ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ದೊರೆಯಿತು.

ಈ ಸಂದರ್ಭ ಮಾತನಾಡಿದ ಬಿ.ಕೆ. ಹರಿಪ್ರಸಾದ್, ದಕ್ಷಿಣ ಕನ್ನಡಕ್ಕೆ ಪ್ರಥಮ ಬಾರಿಗೆ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ನಾರಾಯಣ ಗುರುಗಳು ಶೋಷಿತ ವರ್ಗವನ್ನು ಮೇಲೆತ್ತುವ ಸಂದೇಶವನ್ನು ಸಾರಿದ್ದರು ಎಂದರು. 

'ಕೇರಳದಲ್ಲಿ ಶಾಂತಿಯುತ ಕ್ರಾಂತಿ ಮೂಲಕ ಶೋಷಿತ ವರ್ಗಕ್ಕೆ ಧ್ವನಿಯಾದ ನಾರಾಯಣ ಗುರುಗಳ ತತ್ವ ಸಂದೇಶಗಳು ಕರ್ನಾಟಕದ ಕರಾವಳಿ ಜಿಲ್ಲೆಗಳು, ದೇಶ ಮತ್ತು ವಿದೇಶಗಳಲ್ಲಿಯೂ ಪಸರಿಸಿದೆ. ಶೋಷಿತ ವರ್ಗವನ್ನು ಮೇಲೆತ್ತುವ ಅವರ ರಕ್ತರಹಿತ ಕ್ರಾಂತಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ.ಇಂದು ಸಮಾಜದಲ್ಲಿ ಅಸಮಾನತೆ ಪರ, ಸಂವಿಧಾನಕ್ಕೆ ವಿರುದ್ಧ ನಡೆದುಕೊಂಡವರನ್ನು ಮುನ್ನಲೆಗೆ ತರುವ ಪ್ರಯತ್ನ ನಡೆಸುವ ಮೂಲಕ ನಮ್ಮನ್ನು ಮತ್ತೆ 150 ವರ್ಷಗಳ ಹಿಂದೆ ತಳ್ಳಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ನಾರಾಯಣ ಗುರುಗಳ ಸಿದ್ಧಾಂತವನ್ನು ಸಮಾಜಕ್ಕೆ ತಿಳಿಸುವ ಅಗತ್ಯ ಹೆಚ್ಚಾಗಿದೆ' ಎಂದು ಹೇಳಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಜನರು ಹಾಗೂ ಧರ್ಮಗಳ ನಡುವೆ ಅಪನಂಬಿಕೆ, ದ್ವೇಷವನ್ನು ಹುಟ್ಟಿ ಹಾಕಲಾಗುತ್ತಿರುವ ಇಂದಿನ ದಿನಗಳಲ್ಲಿ ಸಮಾನತೆಯ ಸಂದೇಶ ಸಾರಿ, ಅಸ್ಪಶ್ಯತೆಯನ್ನು ತೊಡೆದು ಹಾಕಿ, ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶ ಪ್ರಸ್ತುತವಾಗಿದೆ.ಶೋಷಣೆಯಿಂದ ತತ್ತರಿಸಿದ್ದ ಹಿಂದೂ ಧರ್ಮದ ಭಾಗವಾದ ಹಿಂದುಳಿದ ವರ್ಗಗಳು ಇಂದು ತಲೆ ಎತ್ತಿ ನಿಂತಿದ್ದರೆ, ಹಿಂದೂ ಧರ್ಮ ಉಳಿಯಲು ಮುಖ್ಯ ಕಾರಣ ನಾರಾಯಣ ಗುರುಗಳು. ಸಮಸ್ತ ನಾಗರಿಕ ವರ್ಗಕ್ಕೆ ನ್ಯಾಯ ಕೊಟ್ಟವರು ನಾರಾಯಣ ಗುರುಗಳು. ಅವರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇರಿಸಬೇಕೆಂಬ ಬೇಡಿಕೆ ಈಡೇರಬೇಕಾಗಿದೆ ಎಂದು ಹೇಳಿದರು.

ಯಾತ್ರೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಅಭಯಚಂದ್ರಜೈನ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದೀನ್ ಬಾವ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮುಖಂಡರಾದ ಪಿ.ವಿ. ಮೋಹನ್, ಪ್ರಕಾಶ್ ಸಾಲ್ಯಾನ್, ಸಲೀಂ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ಅಬ್ಬಾಸ್ ಅಲಿ, ಶಶಿಧರ ಹೆಗ್ಡೆ, ಭಾಸ್ಕರ ಕೆ., ಹರಿನಾಥ್, ಅಬ್ದುಲ್ ರವೂಫ್, ಕೇಶವ ಮರೋಳಿ, ಅಬ್ದುಲ್ ಲತೀಫ್, ಸದಾಶಿವ ಉಳ್ಳಾಲ್, ಝೀನತ್ ಸಂಶುದ್ದೀನ್, ಮುಹಮ್ಮದ್ ಮೋನು, ಲುಕ್ಮಾನ್ ಬಂಟ್ವಾಳ, ಸುರೇಶ್ ಬಳ್ಳಾಲ್, ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ, ಚಂದ್ರಕಲಾ, ಶಾಂತಲ ಗಟ್ಟಿ, ದಿನೇಶ್ ಕುಂಪಲ, ಮುಹಮ್ಮದ್ ಕುಂಜತ್ತಬೈಲ್, ದೀಪಕ್ ಪಿಲಾರ್, ಅಪ್ಪಿ, ಭರತೇಶ್ ಅಮೀನ್, ಹೇಮಂತ್ ಗರೋಡಿ ಮೊದಲಾದವರು ಉಪಸ್ಥಿತರಿದ್ದರು.

'ಬ್ರಹ್ಮಶ್ರೀ ನಾರಾಯಣಗುರುಗಳು ಪ್ರಥಮವಾಗಿ ಮಂಗಳೂರಿಗೆ ಬಂದು ಇಳಿದ ಮಂಗಳೂರು ವಿಮಾನ ನಿಲ್ದಾಣಕ್ಕೆ ಅವರ ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಈ ಹಿಂದೆ ಪಾಲಿಕೆಯಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ ಅದು ನೆನೆಗುದಿಗೆ ಬಿದ್ದಿದ್ದು, ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಲಾಗುವುದು.'

ಬಿ.ಕೆ. ಹರಿಪ್ರಸಾದ್, ಪ್ರಧಾನ ಕಾರ್ಯದರ್ಶಿ, ಎಐಸಿಸಿ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News