ಸಾಮೂಹಿಕ ಧರಣಿ ಯಶಸ್ಸಿಗೆ ಬಜ್ಪೆಯಲ್ಲಿ ಸಮಾನ ಮನಸ್ಕರ ಸಭೆ
ಬಜ್ಪೆ, ಸೆ.11: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಿಸಲು ಆಗ್ರಹಿಸಿ ಸೆಪ್ಟಂಬರ್ 13 ರಂದು ನಡೆಯಲಿರುವ ಸಾಮೂಹಿಕ ಧರಣಿಯ ಯಶಸ್ಸಿಗೆ ಬಜ್ಪೆ ಹೋಬಳಿ ಮಟ್ಟದ ಸಭೆ ಇಲ್ಲಿನ ಕರಾವಳಿ ಸಭಾಂಗಣದಲ್ಲಿ ಹಿರಿಯ ದಲಿತ ಮುಖಂಡ ಎಂ. ದೇವದಾಸ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು.
ಈ ಸಂದರ್ಭ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಹೋರಾಟ್ ರೂಪುರೇಷೆಗಳನ್ನು ಸಭೆಯಲ್ಲಿ ವಿವರಿಸಿದರು. ಅಲ್ಲದೇ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಬಜ್ಪೆ ಸಮಾನ ಮನಸ್ಕರಿಂದ ಸಲಹೆ, ಸೂಚನೆಗಳನ್ನು ಇದೆ ವೇಳೆ ಪಡೆಯಿತು.
ಟೋಲ್ ತೆರವು ಧರಣಿಯ ಕುರಿತು ವ್ಯಾಪಕ ಪ್ರಚಾರ ನಡೆಸಲು, ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಡಿವೈಎಫ್ಐ ಮುಖಂಡ ಶ್ರೀನಾಥ್ ಕುಲಾಲ್, ಸಾಮಾಜಿಕ ಕಾರ್ಯಕರ್ತ ನಿಸಾರ್ ಕರಾವಳಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಮುಖಂಡರಾದ ಮಂಜಪ್ಪ ಪುತ್ರನ್, ಉದಯ ಎಕ್ಕಾರು, ಬಾಲಕೃಷ್ಣ ಪಡುಬಿದ್ರೆ, ಗ್ರಾಪಂ ಮಾಜಿ ಸದಸ್ಯರಾದ ಅಶ್ರಫ್ ಬಜ್ಪೆ, ಶೇಖರ್ ಗೌಡ, ಸಿರಾಜ್ ಬಜ್ಪೆ, ಖಾದರ್ ಬಜ್ಪೆ, ಜೋಕಟ್ಟೆ ಗ್ರಾಪಂ ಸದಸ್ಯ ಅಬೂಬಕ್ಕರ್ ಬಾವ, ಡಾ. ಶೇಖರ ಪೂಜಾರಿ, ರೈತ ನಾಯಕ ಮ್ಯಾಕ್ಸಿ ಪಿಂಟೊ, ನಾಗರಿಕ ಹೋರಾಟ ಸಮಿತಿ ಜೋಕಟ್ಟೆಯ ಇಕ್ಬಾಲ್ ಜೋಕಟ್ಟೆ, ಲಾನ್ಸಿ ಜೋಕಟ್ಟೆ, ಅಫೀಝ್ ಕೊಳಂಬೆ, ಅಸ್ಲಂ ಸೌಹಾರ್ದ ನಗರ ಮತ್ತಿತರರು ಉಪಸ್ಥಿತರಿದ್ದರು.