ಕಲ್ಲಾಪು: ಸರಣಿ ಅಪಘಾತ; ಹಲವರಿಗೆ ಗಾಯ

Update: 2022-09-11 17:40 GMT

ಮಂಗಳೂರು, ಸೆ.11: ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಐದು ವಾಹನಗಳ ಮಧ್ಯೆ ರವಿವಾರ ರಾತ್ರಿ ಸರಣಿ ಅಪಘಾತ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ.

ತೊಕ್ಕೊಟ್ಟುವಿನಿಂದ  ಮಂಗಳೂರಿಗೆ ಬರುತ್ತಿದ್ದ ಇನೋವಾ ಕಾರು ಎದುರುಗಡೆಯಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡಲು ಏಕಾಏಕಿ ಎಡಭಾಗಕ್ಕೆ ತಿರುಗಿಸಿದ ಪರಿಣಾಮ ಹಿಂಬದಿಯಲ್ಲಿದ್ದ ಕಾರೊಂದು ಇನೋವಾ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ರಸ್ತೆಯಲ್ಲಿ ಒಂದು ಸುತ್ತು ತಿರುಗಿದ ಪರಿಣಾಮ ಆ ರಸ್ತೆಯಲ್ಲಿ ಕಾರಿನ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಈ ಕಾರಿನಲ್ಲಿ ಮಹಿಳೆಯರು, ಮಕ್ಕಳ ಸಹಿತ 10 ಮಂದಿಯಿದ್ದರೆನ್ನಲಾಗಿದೆ‌.

ಬಳಿಕ ಆ ಕಾರು ಸ್ವಿಫ್ಟ್ ಕಾರು ಮತ್ತು ದ್ವಿಚಕ್ರ ವಾಹನಕ್ಕೂ ಢಿಕ್ಕಿ ಹೊಡೆದಿದೆ. ಒಟ್ಟಿನಲ್ಲಿ ನಡೆದ ಸರಣಿ ಅಪಘಾತದಲ್ಲಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಅಮೃತ್ ಮತ್ತು ಸ್ಕೂಟರ್ ಸವಾರ ಸಹಿತ ಕಾರಿನಲ್ಲಿದ್ದವರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸರಣಿ ಅಪಘಾತಕ್ಕೆ ಕಾರಣವಾದ ಇನೋವಾ ಕಾರು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News