ತಂಬಾಕು ಮುಕ್ತ ಅಪಾರ್ಟ್ಮೆಂಟ್: ಉಡುಪಿಯಲ್ಲಿ ಪೈಲಟ್ ಯೋಜನೆ
ಉಡುಪಿ, ಸೆ.12: ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಬಳಸುವ ಜನರು ಅದರ ಪ್ರಾಥಮಿಕ ಬಳಕೆದಾರ ರಾದರೆ, ಈ ಸಂದರ್ಭದಲ್ಲಿ ಅವರ ಸಮೀಪದಲ್ಲಿ ರುವವರು ಪರೋಕ್ಷವಾಗಿ ಎರಡನೇ ಬಳಕೆದಾರರಾಗಿದ್ದಾರೆ. ಪ್ರತಿ ವರ್ಷ ವಿಶ್ವದ ಪ್ರಮುಖ ನಗರಗಳಲ್ಲಿ ಸಂಭವಿಸುವ ತಡೆಯಬಹುದಾದ ಸಾವುಗಳ ಪ್ರಮಾಣ ದಲ್ಲಿ ಇವರಿಗೆ 2ನೇ ಸ್ಥಾನವಿದೆ. ತಂಬಾಕುವಿನ ಬಳಕೆದಾರರಿಗಿಂತಲೂ ಹೆಚ್ಚಿನ ಕಾಯಿಲೆಗಳು ಇವರಲ್ಲಿ ಕಾಣಿಸಿಕೊಳ್ಳುತ್ತವೆ. ಧೂಮಪಾನದಿಂದ ಪ್ರತಿವರ್ಷ 10 ಲಕ್ಷ ಸಾವುಗಳು ಸಂಭವಿಸಿದರೆ, ಅದರಲ್ಲಿ 2 ಲಕ್ಷ ಮಂದಿ ಎರಡನೇ ಬಳಕೆದಾರರೇ ಆಗಿರುತ್ತಾರೆ. ಭಾರತದಲ್ಲಿ ಕಂಡುಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.27ರಷ್ಟು ತಂಬಾಕು ಬಳಕೆಯೇ ಕಾರಣವಾಗಿದೆ.
ತಂಬಾಕು ಮತ್ತು ಧೂಮಪಾನ ಉತ್ಪನ್ನಗಳ ನೇರ ಸೇವನೆಯಿಂದ ಮೃತ ಪಡುವವರಿಗಿಂತ, ಇವುಗಳನ್ನು ಬಳಸುವ ಬಳಕೆದಾರರ ಕುಟುಂಬದವರು ಮತ್ತು ಸಮೀಪವರ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಾರೆ ಎಂದು ಸಂಶೋಧನೆ ಗಳಿಂದ ತಿಳಿದುಬಂದಿದೆ. ಇದನ್ನು ತಪ್ಪಿಸಲು ತಂಬಾಕು ಮತ್ತು ಧೂಮಪಾನ ಬಳಕೆ ವಿರುದ್ದ ಹಲವು ನಿರ್ಭಂದಗಳನ್ನು ವಿಧಿಸಿದ್ದರೂ ಸಹ ಇದು ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.
ತಂಬಾಕು ರಹಿತ ಅಪಾರ್ಟ್ಮೆಂಟ್: ಈ ನಿಟ್ಟಿನಲ್ಲಿ ವಸತಿ ಸಮುಚ್ಚಯ ಗಳಲ್ಲಿ ತಂಬಾಕು ಉತ್ಪನ್ನ ಬಳಸುವುದನ್ನು ಸ್ವತ: ಅಲ್ಲಿನ ನಿವಾಸಿಗರೇ ಸ್ವಯಂ ಪ್ರೇರಣೆಯಿಂದ ನಿರ್ಬಂಧಿಸಿ, ತಂಬಾಕು ಮುಕ್ತ ವಸತಿ ಸಮುಚ್ಛಯವನ್ನಾಗಿ ಮಾರ್ಪಡಿಸುವ ಪ್ರಾಯೋಜಿಕ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಉಡುಪಿ ಜಿಲ್ಲೆಯನ್ನು ಪೈಲೆಟ್ ಆಗಿ ಬಳಸಲು ರಾಜ್ಯ ಸರಕಾರ ಮುಂದಾಗಿದೆ.
ಈಯೋಜನೆಯಿಂದ ಸಂಬಂಧಿತ ವಸತಿ ಸಮುಚ್ಛಯಗಳಲ್ಲಿರುವ ನಾಗರಿಕರಿಗೆ ಧೂಮಪಾನ ರಹಿತ ಶುದ್ದಗಾಳಿಯ ಸೇವನೆ ಜೊತೆಗೆ ತಂಬಾಕು ಉತ್ಪನ್ನಗಳ ಎರಡನೇ ಬಳಕೆದಾರರಾಗುವುದನ್ನು ತಪ್ಪಿಸಬಹು ದಾಗಿದೆ. ಇದರೊಂದಿಗೆ ಅವರಿಗೆ ಆರೋಗ್ಯವಂತ ಜೀವನ ನಡೆಸಲು ಅನುವು ಮಾಡಿ ಕೊಡಲು ತಂಬಾಕು ಮುಕ್ತ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ.
ಯೋಜನೆಯ ಪ್ರಕಾರ, ತಂಬಾಕು ಮುಕ್ತ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ಈಗಾಗಲೇ ಸಮುಚ್ಛಯದಲ್ಲಿ ಇರುವ ನಿವಾಸಿಗಳ ಸರ್ವೇ ನಡೆಸಿ, ಅವರಲ್ಲಿ ದೂಮಪಾನ ಮತ್ತು ತಂಬಾಕು ಬಳಸುವವರ ಮತ್ತು ಬಳಸದೇ ಇರುವವರ ಪಟ್ಟಿ ಮಾಡಿ, ಅವರಿಗೆ ತಮ್ಮ ಮನೆಗಳನ್ನು ಧೂಮಪಾನ ಮುಕ್ತಗೊಳಿಸುವ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ.
ಉಡುಪಿ- ಮಣಿಪಾಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರಜಿಲ್ಲೆ, ಹೊರರಾಜ್ಯಗಳಿಂದ ವಲಸೆ ಬಂದ ಕುಟುಂಬಗಳು, ವಿದ್ಯಾರ್ಥಿಗಳು, ನೌಕರರು ವಾಸ ಮಾಡುತ್ತಿದ್ದಾರೆ. ಇಲ್ಲಿ ವಸತಿ ಸಮುಚ್ಛಯಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ರುವುದರ ಜೊತೆಗೆ ಅವುಗಳಿಗೆ ಬೇಡಿಕೆಯೂ ಇದೆ. ಆದರೆ ಇಲ್ಲಿಯ ವರೆಗೆ ಇಲ್ಲಿನ ಯಾವುದೇ ಸಮುಚ್ಛಯಗಳಲ್ಲಿ ತಂಬಾಕು ಮತ್ತು ಧೂಮಪಾನ ಮುಕ್ತಗೊಳಿಸುವಂತಹ ಚಟುವಟಿಕೆಗಳು ನಡೆದಿರುವ ಬಗ್ಗೆ ಕಂಡುಬಂದಿಲ್ಲ.
ಪೈಲಟ್ ಯೋಜನೆ: ಆದ್ದರಿಂದ ಇಲ್ಲಿನ ವಸತಿ ಸಮುಚ್ಛಯಗಳನ್ನು ತಂಬಾಕು ಮುಕ್ತ ಸಮುಚ್ಛಯಗಳನ್ನಾಗಿ ಮಾರ್ಪಡಿಸುವುದರ ಬಗ್ಗೆ ಪೈಲಟ್ ಯೋಜನೆ ರೂಪಿಸಿ, ಅದು ಯಶಸ್ವಿಯಾದಲ್ಲಿ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶ ಸರಕಾರದ್ದು. ಉಡುಪಿ ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಈ ಪ್ರಾಯೋಗಿಕ ಯೋಜನೆ ಅನುಷ್ಠಾನಗೊಳ್ಳಲಿದ್ದು, ವಸತಿ ಸಮುಚ್ಛಯಗಳ ಸಮೀಕ್ಷಾ ಕಾರ್ಯ ಮತ್ತು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ದತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.
ಪ್ರಸ್ತುತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದು, ವಸತಿ ಸಮುಚ್ಛಯಗಳನ್ನು ಧೂಮಪಾನ ಮುಕ್ತಗೊಳಿಸುವುದರಿಂದ ಅಲ್ಲಿನ ನಿವಾಸಿ ಗಳಿಗೆ ಆರೋಗ್ಯಕರ ವಾತಾವರಣ ನಿರ್ಮಿಸಲು ಸಾದ್ಯವಾಗಲಿದೆ. ಜೊತೆಗೆ ಮುಂದಿನ ದಿನಗಳಲ್ಲಿ ವಸತಿ ಸಮುಚ್ಛಯಗಳ ನಿರ್ಮಾಣ ಸಂದರ್ಭದಲ್ಲೇ ಸಾರ್ವಜನಿಕರು ಧೂಮಪಾನ ಮುಕ್ತ ಸಮುಚ್ಛಯಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುವ ಸಾದ್ಯತೆಗಳು ಇವೆ.
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮ ವನ್ನಾಗಿ ಘೋಷಣೆ ಮಾಡಲಾಗಿದೆ. ಇನ್ನು ಕಾರ್ಕಳದ ರೆಂಜಾಳ ಮತ್ತು ಕುಂದಾಪುರದ ಕೊರ್ಗಿ ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳನ್ನು ಸಹ ತಂಬಾಕು ಮುಕ್ತ ಕಚೇರಿಗಳೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಂಡು ದೃಢೀಕರಣಕ್ಕಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯ ಸರಕಾರ ಸೂಚಿಸಿರುವ ತಂಬಾಕು ಮುಕ್ತ ವಸತಿ ಸಮುಚ್ಛಯದ ಪೈಲಟ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡು ಅದರಂತೆ ಕಾರ್ಯ ನಿರ್ವಹಿಸಲಾಗುವುದು.
-ಡಾ.ನಾಗರತ್ನ, ಜಿಲ್ಲಾ ಸವೇಕ್ಷಣಾಧಿಕಾರಿ, ಉಡುಪಿ ಜಿಲ್ಲೆ.