ಅಕ್ರಮ ಮರಳುಗಾರಿಕೆ ದಕ್ಕೆಗೆ ದಾಳಿ: ಎರಡು ಲಾರಿ ವಶಕ್ಕೆ
Update: 2022-09-15 20:43 IST
ಉಡುಪಿ, ಸೆ.15: ಪೆರಂಪಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಬುಧವಾರ ರಾತ್ರಿ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ಎಚ್. ದಾಳಿ ನಡೆಸಿ 2 ಲಾರಿ ಸಮೇತ 3 ಮೆಟ್ರಿಕ್ ಟನ್ ಮರಳನ್ನು ವಶಕ್ಕೆ ಪಡೆದಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಜಿ.ಯು. ಮಾರ್ಗದರ್ಶನದಲ್ಲಿ ಪೆರಂಪಳ್ಳಿ ಪರಿಸರದಲ್ಲಿನ ಸ್ವರ್ಣ ನದಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕರ ಮಾಹಿತಿ ಮೇರೆಗೆ ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ದಾಳಿ ನಡೆಸಿದರು.
ಕಾರ್ಯಾಚರಣೆಯಲ್ಲಿ ಚಾಲಕ ಯೋಗೇಶ್ವರ್ ಶೆಟ್ಟಿಗಾರ್ ಸಹಕರಿಸಿದ್ದಾರೆ. ಈ ಬಗ್ಗೆ ಭೂವಿಜ್ಞಾನಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲು ವಶಪಡಿಸಿಕೊಂಡಿರುವ ಮರಳು ಸಹಿತ ವಾಹನಗಳನ್ನು ಮಣಿಪಾಲ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ.