ಪ್ರೊ.ಎಸ್.ಎ.ಕೃಷ್ಣಯ್ಯರಿಗೆ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ
ಉಡುಪಿ, ಸೆ.17: ಉಡುಪಿಯ ಜಾನಪದ ಮತ್ತು ಕಲಾ ಇತಿಹಾಸಕಾರ ಪ್ರೊ.ಎಸ್.ಎ.ಕೃಷ್ಣಯ್ಯ ಅವರನ್ನು ಕರ್ನಾಟಕ ಬಯಲಾಟ ಅಕಾಡೆಮಿಯ ೨೦೨೧ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಅಕಾಡೆಮಿ ಅಧ್ಯಕ್ಷ ಅಜಿತ್ ಬಸಾಪುರ ಅವರು ಬಾಗಲಕೋಟೆಯಲ್ಲಿ ಪ್ರಕಟಿಸಿದರು.
ಉಡುಪಿಯ ಪ್ರಾಚ್ಯವಸ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿರುವ ಪ್ರೊ.ಎಸ್.ಎ.ಕೃಷ್ಣಯ್ಯ ಅವರು ಪ್ರಶಸ್ತಿಯೊಂದಿಗೆ 50 ಸಾವಿರ ರೂ.ನಗದು ಹಾಗೂ ಸ್ಮರಣಿಕೆಯನ್ನು ಪಡೆಯಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಹುಬ್ಬಳ್ಳಿ ಅಥವಾ ಬಾಗಲಕೋಟೆಯಲ್ಲಿ ನಡೆಯಲಿದೆ ಎಂದು ಅಜಿತ್ ಬಸಾಪುರ ತಿಳಿಸಿದರು. ಕೃಷ್ಣಯ್ಯ ಸೇರಿದಂತೆ ಒಟ್ಟು ಐವರು 2021ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೂ ಅಲ್ಲದೇ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ೨೦೨೨ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನೂ ಅವರು ಪ್ರಕಟಿಸಿದರು.
ಪ್ರೊ.ಎಸ್.ಎ.ಕೃಷ್ಣಯ್ಯ ಅವರು ಈಗ ವಿಶ್ವದಲ್ಲಿ ಅಳಿವಿನ ಅಂಚಿನಲಿರುವ ಶ್ರೀತಾಳೆಮರ (ಪನೋಳಿ ಮರ)ದ ಉಳಿವಿಗಾಗಿ ಹಾಗೂ ಅದರ ಬೀಜದ ಪ್ರಸಾರಕ್ಕಾಗಿ ವಿಶೇಷ ಮುತುವರ್ಜಿಯಿಂದ ಕೆಲಸ ಮಾಡುತಿದ್ದಾರೆ.