ಕೃಷಿ ಸಖಿಯರಿಗೆ ಪರಿಸರ ಕೃಷಿ ವಿಧಾನಗಳ ಕುರಿತು ತರಬೇತಿ ಸಮಾರೋಪ
ಉಡುಪಿ, ಸೆ.17: ಉಡುಪಿ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಬ್ರಹ್ಮಾವರ ಕೃಷಿ ವಿಜ್ಜಾನ ಕೇಂದ್ರದ ಆಶ್ರಯ ದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ( ಕೃಷಿ ಸಖಿ ಯರಿಗೆ) ಪರಿಸರ ಕೃಷಿ ವಿಧಾನಗಳ ಕುರಿತ ಆರು ದಿನದ ತರಬೇತಿ ಕಾರ್ಯ ಕ್ರಮದ ಸಮಾರೋಪ ಸಮಾರಂಭ ಕೃಷಿ ವಿಜ್ಜಾನ ಕೇಂದ್ರದಲ್ಲಿ ಶನಿವಾರ ಜರಗಿತು.
ಮುಖ್ಯ ಅತಿಥಿಯಾಗಿ ಶಿಬಿರಾರ್ಥಿಗಳಿಗೆ ಪ್ರಮಾಣ ವಿತರಿಸಿದ ಜಿಪಂ ಯೋಜನಾ ನಿರ್ದೇಶಕ ಬಾಬು ಎಂ. ಮಾತನಾಡಿ, ಈಗಾಗಲೇ ಸರಕಾರದಿಂದ ಗ್ರಾಪಂ ಮಟ್ಟದ ಒಕ್ಕೂಟದಲ್ಲಿ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಕೃಷಿ ಜೀವನೋಪಾಯ ವಿಷಯಗಳ ಬಗ್ಗೆ ಮಾಹಿತಿ, ವಿವಿಧ ತರಬೇತಿ ಹಾಗೂ ಸರಕಾರದ ಯೋಜನೆಗಳನ್ನು ತಲುಪಿಸಲು ಕೃಷಿ ಸಖಿಯರನ್ನು ನಿಯೋಜನೆ ಮಾಡಲಾಗಿದೆ. ಕೃಷಿ ಸಖಿಯರು ತಮ್ಮ ಗ್ರಾಮದ ಸಂಜೀವಿನಿ ಮಹಿಳೆಯರಿಗೆ ಕೃಷಿ ಸಂಬಂಧಿಸಿದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸ ಬೇಕು. ಆ ಮೂಲಕ ಗ್ರಾಮೀಣ ಮಟ್ಟದ ಮಹಿಳೆಯರನ್ನು ಇನ್ನಷ್ಟು ಆರ್ಥಿಕ ವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸಲು ಸಹಕರಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕಿ ಡಾ.ಲಕ್ಷ್ಮಣ್ ಮಾತನಾಡಿ, ಇಂದು ನಿಯೋಜನೆಗೊಂಡ ಕೃಷಿ ಸಖಿಯರ ಪಾತ್ರ ಗ್ರಾಪಂ ಮಟ್ಟದಲ್ಲಿ ಮಹತ್ವದಾಗಿದೆ. ಇವರು ಕೃಷಿ ಸಂಬಂದಿಸಿದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಂಬಂಧಪಟ್ಟ ಇಲಾಖೆಯ ಸಹಕಾರ ಪಡೆದು ಕೃಷಿ ಸಖಿಯರು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ಕೃಷಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಸುಧೀರ್ ಕಾಮತ್ ಕೆ.ವಿ., ಜಿಪಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್, ಯುವ ವೃತ್ತಿಪರ ಸಮಂತ್ ಶೆಟ್ಟಿ ಹಾಗೂ ಇತರೆ ವಿಜ್ಞಾನಿಗಳು ಉಪಸ್ಥಿತರಿದ್ದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ನಿರ್ದೇಶಕ ಡಾ.ಬಿ.ಧನಂಜಯ ಸ್ವಾಗತಿಸಿದರು. ಉಡುಪಿ ಜಿಪಂ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ವಂದಿಸಿದರು. ಕೇಂದ್ರದ ವಿಜ್ಞಾನಿ ಡಾ.ಸಚಿನ್ ಯು.ಎಸ್. ಕಾರ್ಯ ಕ್ರಮ ನಿರೂಪಿಸಿದರು.