ಉಳ್ಳಾಲ ಗೃಹರಕ್ಷಕರಿಂದ ‘ಸ್ವಚ್ಛ ಕಡಲು-ಸ್ವಚ್ಛ ಸಾಗರ’ ಅಭಿಯಾನ
Update: 2022-09-18 18:33 IST
ಮಂಗಳೂರು : ಉಳ್ಳಾಲ ಗೃಹ ರಕ್ಷಕ ದಳದ ವತಿಯಿಂದ ‘ಸ್ವಚ್ಛ ಕಡಲು-ಸ್ವಚ್ಛ ಸಾಗರ’ ಅಭಿಯಾನವು ಸೋಮೇಶ್ವರ ಕಡಲ ತೀರದಲ್ಲಿ ರವಿವಾರ ಜರಗಿತು. 20ಕ್ಕೂ ಅಧಿಕ ಗೃಹ ರಕ್ಷಕರು ಸುಮಾರು 100 ಕೆಜಿಗೂ ಅಧಿಕ ತ್ಯಾಜ್ಯ ಸಂಗ್ರಹಿಸಿದರು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ದ.ಕ. ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟ ಡಾ ಮುರಲಿ ಮೋಹನ್ ಚೂಂತಾರು ‘ಕಡಲ ತೀರದ ಸ್ವಚ್ಛತೆ ಕೇವಲ ಜಿಲ್ಲಾಡಳಿತದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಪ್ರಜೆಯೂ ಇದರಲ್ಲಿ ಪಾಲ್ಗೊಳ್ಳಬೇಕು. ಹಾಗಾದರೆ ಮಾತ್ರ ಕಡಲ ತೀರ ಸ್ವಚ್ಛವಾಗಬಹುದು ಎಂದರು.
ಉಳ್ಳಾಲ ಘಟಕದ ಹಿರಿಯ ಗೃಹ ರಕ್ಷಕ ಸುನಿಲ್, ಹಮೀದ್ ಪಾವಳ, ದಿವ್ಯಾ ಪೂಜಾರಿ, ಧನಂಜಯ್, ಪ್ರಸಾದ್ ಸುವರ್ಣ, ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.