×
Ad

ಅ.5ರಿಂದ ಉಡುಪಿ ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ಮರಳು ಲಭ್ಯ: ಸಿಇಓ ಪ್ರಸನ್ನ

Update: 2022-09-19 19:52 IST

ಉಡುಪಿ, ಸೆ.19: ಹೊಸ ಮರಳು ನೀತಿಯಲ್ಲಿ ಸೂಚಿಸಿದಂತೆ, ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಹಳ್ಳ ಮತ್ತು ಕೆರೆಗಳಲ್ಲಿ ಈಗಾಗಲೇ  ಗುರುತಿಸಿರುವ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳನ್ನು ಅಕ್ಟೋಬರ್ 5ರಿಂದ ತೆಗೆಯಲು  ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳಲ್ಲಿ ಎಲ್ಲಾ ಅಗತ್ಯ ಸಿದ್ದತೆಗಳನ್ನು  ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾ ಪಂಚಾಯತ್‌ನ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಸೂಚಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ,  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡುವ  ತಂತ್ರಾಂಶ ಬಳಕೆ ಬಗ್ಗೆ  ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಗ್ರಾಪಂಗಳ ಅಧ್ಯಕ್ಷರು ಮತ್ತು ಪಿಡಿಓಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ  ಅವರು ಮಾತನಾಡುತಿದ್ದರು.

ಹೊಸ ಮರಳು ನೀತಿ-2020 ಮತ್ತು 2021ರಂತೆ, ಮೊದಲನೇ, ಎರಡನೇ ಮತ್ತು ಮೂರನೇ ಶ್ರೇಣಿಯ ಹಳ್ಳ ಮತ್ತು ತೊರೆಗಳಲ್ಲಿ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಅವಕಾಶ ಕಲ್ಪಿಸಿದ್ದು, ಅದರಂತೆ ಜಿಲ್ಲೆಯ ಕಾರ್ಕಳ, ಹೆಬ್ರಿ, ಕಾಪು, ಕುಂದಾಪುರ ಮತ್ತು ಬೈಂದೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ 35 ಮರಳು ನಿಕ್ಷೇಪಗಳಲ್ಲಿ ಒಟ್ಟು 49,903 ಮೆಟ್ರಿಕ್ ಟನ್ ಪ್ರಮಾಣದ ಮರಳನ್ನು ಗುರುತಿಸಲಾಗಿದೆ. ಇದನ್ನು ಅಕ್ಟೋಬರ್ 5ರಿಂದ ತೆರವುಗೊಳಿಸಲು ಸಂಬಂದಪಟ್ಟ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅವರು ತಿಳಿಸಿದರು.

ಮರಳು ನಿಕ್ಷೇಪಗಳನ್ನು ತೆರವುಗೊಳಿಸಲು ಈಗಾಗಲೇ ಪಂಚಾಯತ್‌ಗಳಿಗೆ ಆಶಯ ಪತ್ರಗಳನ್ನು  ನೀಡಲಾಗಿದ್ದು,  ಗ್ರಾಪಂ ವ್ಯಾಪ್ತಿಯ ಗ್ರಾಹಕರು ಮತ್ತು ಸರಕಾರಿ ಸ್ಥಳೀಯ ಕಾಮಗಾರಿಗಳ ಗುತ್ತಿಗೆದಾರರು, ಸರಕಾರದಿಂದ ನಿಗದಿ ಪಡಿಸಿದ ಗರಿಷ್ಠ ಮಾರಾಟ ದರವನ್ನು  ಗಾಪಂಗಳಿಗೆ ಪಾವತಿಸಿ, ರವಾನೆ ಪರವಾನಗಿ ಪಡೆದು, ಕಡಿಮೆ ಹೇರು ಭಾರ ಸಾಮರ್ಥ್ಯದ ವಾಹನಗಳಲ್ಲಿ ಮರಳನ್ನು ಸ್ವಂತ ಖರ್ಚಿನಲ್ಲಿ ತುಂಬಿಸಿ ಸಾಗಾಟ ಮಾಡಬಹುದು ಎಂದರು.

ಗ್ರಾಮ ಪಂಚಾಯತ್‌ಗಳು ಗ್ರಾಹಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಜಧನ ಹಾಗೂ ಅನ್ವಯವಾಗುವ ಇತರೆ ಶುಲ್ಕಗಳನ್ನು ಸ್ವೀಕರಿಸಿ, ವಿಶೇಷ ರಕ್ಷಣಾತ್ಮಕವುಳ್ಳ ಸಾಗಾಣಿಕೆ ಪರವಾನಗಿಯನ್ನು  ಗ್ರಾಹಕರಿಗೆ ನೀಡಬೇಕು. ಈ ಕುರಿತಂತೆ ಅಗತ್ಯವಿರುವ ಎಲ್ಲಾ ರೀತಿಯ ತಾಂತ್ರಿಕ ತರಬೇತಿ ಮತ್ತು ನೆರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಪಡೆಯುವಂತೆ ಸಿಇಓ ತಿಳಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ನಿಕ್ಷೇಪಗಳಲ್ಲಿ ನಿರೀಕ್ಷಿತ ಪ್ರಮಾಣದ ಮರಳು ಇಲ್ಲದೇ ಇರುವ ಬಗ್ಗೆ ಅಥವಾ ಆ ಪ್ರದೇಶದಲ್ಲಿ ಮರಳು ತೆಗೆಯಲು ಅಡೆತಡೆಗಳಿದ್ದಲ್ಲಿ ಆಥವಾ ಹೊಸ ಪ್ರದೇಶದಲ್ಲಿ ಮರಳು ಲಭ್ಯವಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ, ಅಗತ್ಯ ಸ್ಥಳ ಬದಲಾವಣೆಯನ್ನು ಮಾಡಿಕೊಳ್ಳಲು ಅವಕಾಶವಿದೆ ಎಂದೂ ಪ್ರಸನ್ನ ಎಚ್. ವಿವರಿಸಿದರು.

ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಮರಳು ತೆಗೆಯುವ ಹಾಗೂ ಸಾಗಾಣಿಕೆ ಕಾರ್ಯವನ್ನು ನಿರ್ವಹಿಸುವಂತೆ, ಅಲ್ಲದೇ ಯಾವುದೇ ಸಂದರ್ಭದಲ್ಲೂ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಮರಳು ತೆಗೆಯುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಯಂತ್ರೋಪಕರಣ ಬಳಕೆ ಮಾಡದಂತೆ ಸೂಚನೆ ನೀಡಿದ  ಅವರು, ಪರವಾನಗಿ ಪಡೆದ ಪ್ರಮಾಣಕ್ಕೆ ಅನುಗುಣವಾಗಿ ಮಾತ್ರ ಮರಳು ತೆಗೆದು, ಸಾಗಾಟ ಮಾಡುವ ಬಗ್ಗೆ ಸ್ಥಳದಲ್ಲಿ ಹಾಜರಿದ್ದು ಪರಿಶೀಲಿಸುವಂತೆ ಹಾಗೂ  ಸ್ಥಳೀಯ ನಿರ್ಮಾಣ ಚಟುವಟಿಕೆಗಳಿಗೆ ಮರಳಿನ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.

ಮರಳು ತೆಗೆಯಲು ನಿಗದಿತ ಶುಲ್ಕ ಸಂಗ್ರಹ, ಸಾಗಾಟ ಪರವಾನಗಿ ನೀಡುವ  ಕುರಿತ ತಂತ್ರಾಂಶ ಬಳಕೆ ಮಾಡುವ ಬಗ್ಗೆ ಸಂಬಂಧಿತರಿಗೆ ತರಬೇತಿ ನೀಡಲಾಯಿತು.

ಸಭೆಯಲ್ಲಿ ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಹಾಗೂ   ತಾಪಂಗಳ ಕಾರ್ಯ ನಿರ್ವಹಣಾಧಿಕಾರಿಗಳು, ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಪಿಡಿಓಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News