ಚೀನಾ ಆಕ್ರಮಣ ಮಾಡಿದರೆ ತೈವಾನ್ ರಕ್ಷಣೆಗೆ ನಾವಿದ್ದೇವೆ: ಬೈಡನ್ ಘೋಷಣೆ

Update: 2022-09-19 16:57 GMT

ವಾಷಿಂಗ್ಟನ್, ಸೆ.19: ಒಂದು ವೇಳೆ ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಿದರೆ ಅಮೆರಿಕದ ಸೇನೆ ತೈವಾನ್‍ನ ರಕ್ಷಣೆಗೆ ಧಾವಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್  ಹೇಳಿದ್ದಾರೆ. ತೈವಾನ್ ವಿಷಯದಲ್ಲಿ ಬೈಡನ್ ಅವರ ಅತ್ಯಂತ ಸ್ಪಷ್ಟವಾದ ಹೇಳಿಕೆ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾ ಹಕ್ಕು ಸಾಧಿಸುತ್ತಿರುವ ಪ್ರಜಾಸತ್ತಾತ್ಮಕ ಆಡಳಿತದ ತೈವಾನ್ ರಕ್ಷಣೆಗೆ ಅಮೆರಿಕ ನಿಲ್ಲಲಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೈಡನ್ ` ಹೌದು, ಖಂಡಿತ. ವಾಸ್ತವದಲ್ಲಿ ಅಸಾಮಾನ್ಯ ರೀತಿಯ ದಾಳಿ ನಡೆದರೆ ನಾವು ರಕ್ಷಣೆಗೆ ಧಾವಿಸಲಿದ್ದೇವೆ' ಎಂದರು. ಉಕ್ರೇನ್‍ಗಿಂತ ಭಿನ್ನವಾಗಿ, ಅಮೆರಿಕದ ಪಡೆಗಳು- ಅಮೆರಿಕದ ಪುರುಷರು ಮತ್ತು ಮಹಿಳೆಯರು- ಚೀನಾದ ಆಕ್ರಮಣದ ಸಂದರ್ಭದಲ್ಲಿ ತೈವಾನ್ ಅನ್ನು ರಕ್ಷಿಸುತ್ತದೆ ಎಂಬುದು ಈ ಹೇಳಿಕೆಯ ಅರ್ಥವೇ ಎಂಬ ಮತ್ತೊಂದು ಪ್ರಶ್ನೆಗೆ `ಹೌದು' ಎಂದು ಬೈಡನ್ ಉತ್ತರಿಸಿದರು.

ಏಕಚೀನಾ ನೀತಿಗೆ ಅಮೆರಿಕ ಬದ್ಧವಾಗಿದೆ ಎಂದು ಇದೇ ವೇಳೆ ಬೈಡನ್ ಪುನರುಚ್ಚರಿಸಿದರು.  ಅಮೆರಿಕವು ಅಧಿಕೃತವಾಗಿ ಚೀನಾಕ್ಕೆ ಮಾನ್ಯತೆ ನೀಡುತ್ತದೆ, ತೈವಾನ್‍ಗೆ ಅಲ್ಲ ಎಂಬುದು ಇದರರ್ಥ. ತೈವಾನೀಯರ ಸ್ವಾತಂತ್ರ್ಯವನ್ನು ಅಮೆರಿಕ ಪ್ರೋತ್ಸಾಹಿಸುತ್ತಿಲ್ಲ. ನಾವಾಗಿ ಯಾವ ಹೆಜ್ಜೆಯನ್ನೂ ಮುಂದಿರಿಸಿಲ್ಲ. ಅವರು ಸ್ವತಂತ್ರವಾಗಿರಲು ನಾವು ಪ್ರೋತ್ಸಾಹಿಸುತ್ತಿಲ್ಲ. ಅದು ಅವರ ನಿರ್ಧಾರ' ಎಂದು ಬೈಡನ್ ಹೇಳಿದರು.

ಈ ಹಿಂದೆಯೂ ಅಧ್ಯಕ್ಷರು ಇದನ್ನು ಹೇಳಿದ್ದರು. ಈ ವರ್ಷ ಟೋಕಿಯೋದಲ್ಲೂ ಈ ಮಾತನ್ನು ಪುನರುಚ್ಚರಿಸಿದ್ದಾರೆ. ಇದೇ ವೇಳೆ ನಮ್ಮ ತೈವಾನ್ ನೀತಿ ಬದಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಶ್ವೇತಭವನದ ವಕ್ತಾರರು ಹೇಳಿದ್ದಾರೆ.

ತೈವಾನ್ ವಿಷಯದಲ್ಲಿ ಅಮೆರಿಕ ದೀರ್ಘಕಾಲದಿಂದ `ಕಾರ್ಯತಂತ್ರದ ಅಸ್ಪಷ್ಟತೆ'ಯ ಕಾರ್ಯನೀತಿಗೆ ಅಂಟಿಕೊಂಡಿದೆ ಮತ್ತು ತೈವಾನ್ ಮೇಲೆ ಮಿಲಿಟರಿ ಆಕ್ರಮಣವಾದರೆ ಪ್ರತಿಕ್ರಿಯಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ತೈವಾನ್‍ನ ಭದ್ರತೆಗೆ ಸಂಬಂಧಿಸಿ ಅಮೆರಿಕದ ಅಚಲ ನಿರ್ಧಾರ ಪುನರುಚ್ಚರಿಸಿದ ಬೈಡನ್‍ಗೆ ಧನ್ಯವಾದಗಳು. ತೈವಾನ್ ತನ್ನ ಸ್ವರಕ್ಷಣೆ ಸಾಮಥ್ರ್ಯಗಳನ್ನು ಬಲಪಡಿಸುವುದನ್ನು ಮತ್ತು ಅಮೆರಿಕದೊಂದಿಗಿನ ನಿಕಟ ಭದ್ರತಾ ಪಾಲುದಾರಿಕೆಯನ್ನು ಮುಂದುವರಿಸಲಿದೆ ಎಂದು ತೈವಾನ್‍ನ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

ಈ ರೀತಿಯ ವಾಗ್ದಾನ, ಪ್ರತಿಜ್ಞೆ ಮಾಡುವ ಮುನ್ನ , ವಾಗ್ದಾನ ಈಡೇರಿಸಲು ಸಾಧ್ಯವೇ ಎಂಬುದನ್ನು ಬೈಡನ್ ಖಾತರಿಪಡಿಸಬೇಕು. ವಾಕ್ಚಾತುರ್ಯದ ಪ್ರದರ್ಶನಕ್ಕೂ ಮೊದಲು ನೈಜ ಸಾಮಥ್ರ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಮೆರಿಕದ `ಜರ್ಮನ ಮಾರ್ಷಲ್ ಫಂಡ್'ನ ಏಶ್ಯಾ ತಜ್ಞೆ ಬೋನಿ ಗ್ಲೇಸರ್ ಹೇಳಿದ್ದಾರೆ.

ತೈವಾನ್ ವಿಷಯಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಸ್ಪಷ್ಟತೆಯ ಯಾವುದೇ ಕ್ರಮವನ್ನು ಬೈಡನ್ ಅವರ ಏಶ್ಯಾ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಕರ್ಟ್ ಕ್ಯಾಂಪ್‍ಬೆಲ್ ಈ ಹಿಂದೆ ತಿರಸ್ಕರಿಸಿದ್ದು, ಇಂತಹ ವಿಧಾನಗಳಿಗೆ ಮಹತ್ವದ ಅಡ್ಡಿಗಳಿವೆ ಎಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News