ದಲಿತ ಬಾಲಕನಿಗೆ ಬಹಿಷ್ಕಾರ ಹಾಕಿರುವುದು ಖೇದಕರ: ಪೇಜಾವರ ಶ್ರೀ

Update: 2022-09-21 11:09 GMT

ಉಡುಪಿ, ಸೆ.21: ಮಾಲೂರಿನಲ್ಲಿ ಉತ್ಸವದ ಸಂದರ್ಭ ಪಲ್ಲಕ್ಕಿ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ ಸವರ್ಣೀಯರು ಬಹಿಷ್ಕಾರ ಹಾಕಿರುವ ವಿಚಾರ ಕೇಳಿ ಬಹಳ ಖೇದವಾಗಿದೆ. ಧರ್ಮ ಗ್ರಂಥಗಳು ಇಂತಹ ಬೆಳವಣಿಗೆಯನ್ನು ಒಪ್ಪುವುದಿಲ್ಲ. ಉತ್ಸವ ಇಡೀ ಊರಿಗೆ ಸಂಬಂಧಿಸಿದ ಕಾರ್ಯಕ್ರಮವಾಗಿದ್ದು, ಬಹಿಷ್ಕಾರ ಶಿಕ್ಷೆ ದಂಡವನ್ನು ಯಾವ ಧರ್ಮಗ್ರಂಥವು ಒಪ್ಪುವುದಿಲ್ಲ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಸಂಘಟನೆಗಳು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಸರಕಾರ ಕೂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ತಪ್ಪು ಮಾಡಿದವರನ್ನು ಶಿಕ್ಷಿಸಿದರೆ ಸಾಲದು, ಜಾಗೃತ ಕಾರ್ಯಕ್ರಮ ಆಗಬೇಕು. ಸಮಾಜ ಮತ್ತು ಧರ್ಮ ಒಪ್ಪದ ಚಟುವಟಿಕೆಗಳಿಗೆ ಯಾರು ಇಳಿಯಬಾರದು ಎಂದರು.

ಶಿವಮೊಗ್ಗಕ್ಕೆ ಉಗ್ರರ ಪ್ರವೇಶವಾಗಿದೆ ಎಂದು ಕೇಳಿ ನಮಗೆ ತೀವ್ರ ಖೇದ ವಾಗಿದೆ. ಮಂಗಳೂರು ಉಡುಪಿ ಭಾಗದಲ್ಲೂ ಇಂತಹ ಚಟುವಟಿಕೆ ನಡೆದಿದೆ. ಸ್ಯಾಟಲೈಟ್ ಫೋನ್ ಗಳ ಮೂಲಕ ಸಂಭಾಷಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿತ್ತು. ನಿಖರವಾದ ಮಾಹಿತಿಗಳ ಜೊತೆಗೆ ಇದನ್ನು ಪರಿಶೀಲನೆ ಮಾಡಬೇಕು. ಪ್ರಕರಣದಲ್ಲಿ ಹತ್ತು ಹಲವು ಜನಭಾಗಿ ಆಗಿರುವ ಸಾಧ್ಯತೆ ಇದೆ ಎಂದು ಪೇಜಾವರ ಶ್ರೀ ಸಂಶಯ ವ್ಯಕ್ತಪಡಿಸಿದರು.

ಉಗ್ರರ ವಿರುದ್ಧ ಕೂಂಬಿಂಗ್ ಮಾದರಿಯಲ್ಲಿ ಪರಿಶೀಲನೆ ಆಗಬೇಕು. ಸಮಾಜದ ಶಾಂತಿ ಕದಡೋದನ್ನು ತಪ್ಪಿಸಬೇಕು. ಉಗ್ರರಿಂದ ಸಮಾಜದಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಬೇಕು. ಯಾವುದೇ ಕೋಮಿನ ಬಣ್ಣ ನೀಡದೆ ಭಯೋತ್ಪಾದನೆಯನ್ನು ನಿಗ್ರಹ ಮಾಡಬೇಕು. ಭಾರತ ದೇಶದ ಒಳಗೆ ಇರುವವರು ಭಾರತೀಯರು. ದೇಶದ ಯಾವುದೇ ಭಾಗದಲ್ಲಿ ಉಗ್ರರ ನೆರಳು ಹಾಯಬಾರದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಟ್ಟುನಿಟ್ಟಿದ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News