ಅಂತರ್ ಜಿಲ್ಲಾ ಬೈಕ್ ಕಳವು ಆರೋಪಿಯ ಬಂಧನ: 5 ಬೈಕ್ ವಶ
ಉಡುಪಿ, ಸೆ.21: ಅಂತರ್ ಜಿಲ್ಲಾ ಬೈಕ್ ಕಳವು ಪ್ರಕರಣದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಮಂಡ್ಯ ಜಿಲ್ಲೆಯ ಕೆ.ಆರ್ಪೇಟೆಯಲ್ಲಿ ಸೆ.20ರಂದು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸೂರು ನಿವಾಸಿ ಗೋವೀಂದಪ್ಪ ಹೇಮಣ್ಣ ಪೂಜಾರ ಯಾನೆ ಗಿರೀಶ (29) ಬಂಧಿತ ಆರೋಪಿ.
ಈತನಿಂದ ಕಳವು ಗೈದ 2 ಲಕ್ಷ ರೂ. ಮೌಲ್ಯದ ಐದು ಬೈಕ್ ಹಾಗೂ ಸ್ಕೂಟರ್ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಈತನನ್ನು ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ.
ಉಡುಪಿ ನಗರದ ಬೈಲಕೆರೆಯಲ್ಲಿ ಜ.31ರಂದು ನಡೆದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಫುಟೇಜ್ ಹಾಗೂ ಸಿಡಿಆರ್ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದರು. ಈತ ಉಡುಪಿಯ ದೊಡ್ಡಣಗುಡ್ಡೆ ಮತ್ತು ಸೋದೆ ಮಠದ ಬಳಿ ಹಾಗೂ ಮಂಗಳೂರಿನ ಬಂದರು ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಬೈಕ್ ಹಾಗೂ ಸ್ಕೂಟರ್ ಕಳವು ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಈತನ ವಿರುದ್ಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.