ಬೆಳ್ತಂಗಡಿ | ವಿದ್ಯುತ್ ಬಿಲ್ ವಿಚಾರವಾಗಿ ಇಬ್ಬರು ಪವರ್ ಮ್ಯಾನ್ ಗಳಿಗೆ ಹಲ್ಲೆ: ಓರ್ವ ವಶಕ್ಕೆ

Update: 2022-09-23 04:51 GMT

ಬೆಳ್ತಂಗಡಿ, ಸೆ.23: ಬಿಲ್ ಬಾಕಿ ಕಾರಣ ಮನೆಯೊಂದರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪವರ್ ಮ್ಯಾನ್ ಗಳಿಬ್ಬರ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕೊಕ್ಕಡದಲ್ಲಿ ನಡೆದಿರುವುದು ವರದಿಯಾಗಿದೆ.

ಪವರ್ ಮ್ಯಾನ್ ಉಮೇಶ್ ಹಾಗೂ ದುಂಡಪ್ಪ ಹಲ್ಲೆಗೊಳಗಾದವರು. ಧರ್ಮಸ್ಥಳದ ಅಜಿಕುರಿ ನಿವಾಸಿ ರಿಜೇಶ್ ಹಾಗೂ ಇತರರು ಹಲ್ಲೆ ಆರೋಪಿಗಳೆಂದು ಪೊಲೀಸ್ ದೂರು ನೀಡಲಾಗಿದೆ. ಈ ಪೈಕಿ ರಿಜೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅಡ್ಕಾಡಿ ಕಾಂತು ಪೂಜಾರಿ ಎಂಬವರು ಹಲವಾರು ತಿಂಗಳಿನಿಂದ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ಹಲವಾರು ಬಾರಿ ಸೂಚನೆ ಮಾಡಿದರೂ ಬಿಲ್ ಪಾವತಿಸದೆ ಇರುವುದರಿಂದ ಅಲ್ಲಿನ ಪವರ್ ಮ್ಯಾನ್ ಉಮೇಶ್ ಮೇಲಾಧಿಕಾರಿಗಳ ಆದೇಶದಂತೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದೇ ಕಾರಣಕ್ಕಾಗಿ ಪವರ್ ಮ್ಯಾನ್  ಉಮೇಶ್ ಹಾಗೂ ದುಂಡಪ್ಪರ ಮೇಲೆ ಕರ್ತವ್ಯದಲ್ಲಿ ಇರುವಾಗಲೇ ಧರ್ಮಸ್ಥಳದ ಅಜಿಕುರಿ ನಿವಾಸಿ ರಿಜೇಶ್ ಹಾಗೂ ಇತರರು ಸೇರಿ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

 ಹಲ್ಲೆಗೆ ಒಳಗಾದವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರೀಜೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News