ಉತ್ತರಾಖಂಡ ಧ್ವಂಸಗೊಳಿಸಲಾದ ರೆಸಾರ್ಟ್ ಬಳಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ

Update: 2022-09-24 08:14 GMT
Photo: PTI

ಹೊಸದಿಲ್ಲಿ: ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದ ಖಾಸಗಿ ರೆಸಾರ್ಟ್ ಆವರಣದಿಂದ  ನಾಪತ್ತೆಯಾಗಿದ್ದ 19 ವರ್ಷದ ಸ್ವಾಗತಕಾರಿಣಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಚಿಲ್ಲಾ ಪವರ್ ಹೌಸ್ ಬಳಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಕೊಲೆ ಪ್ರಕರಣದಲ್ಲಿ ಪುಲ್ಕಿತ್ ಆರ್ಯ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿ, ಆರೋಪಿಗಳು ವೈಯಕ್ತಿಕ ಜಗಳದ ನಂತರ ಯುವತಿಯನ್ನು ರೆಸಾರ್ಟ್ ಬಳಿಯ ಕಾಲುವೆಗೆ ತಳ್ಳಿದ್ದಾಗಿ ಒಪ್ಪಿಕೊಂಡಿದ್ದರು.  ನಂತರ ಯುವತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

19 ವರ್ಷದ ಯುವತಿಯ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ  ರಾಜ್ಯ ಆಡಳಿತವು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅನ್ನು ಶವ ಹುಡುಕಲು ನಿಯೋಜಿಸಿತು. ಮೃತದೇಹದ ಪತ್ತೆಗೆ ಗಂಗಾನದಿಯಲ್ಲಿರುವ ಪಶುಲೋಕ ಬ್ಯಾರೇಜ್ ತೆರೆಯುವಂತೆ ಪೊಲೀಸರು ರಾಜ್ಯ ಸರಕಾರವನ್ನು ಕೋರಿದ್ದರು.

 ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದ್ದು, ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿಪಿ) ರೇಣುಕಾ ದೇವಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News