‘ಮಂಗಳೂರು ದಸರಾ’ಕ್ಕೆ ಸಂಭ್ರಮದ ಚಾಲನೆ: ದೇವಳದ ಅಂಗಣದಲ್ಲಿ ಹುಲಿವೇಷಗಳ ನಲಿಕೆಯ ಸಡಗರ

Update: 2022-09-26 10:14 GMT

ಮಂಗಳೂರು, ಸೆ. 26: ವಿಶ್ವದ ಗಮನ ಸೆಳೆದಿರುವ ‘ಮಂಗಳೂರು ದಸರಾ’ಕ್ಕೆ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿ, ವೆಂಕಟ್ರಮಣ ಕ್ಷೇತ್ರದ ಸೇರಿದಂತೆ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಇಂದು ಸಡಗರದ ಚಾಲನೆ ದೊರೆಯಿತು.

ಕ್ಷೇತ್ರದ ದಸರಾ ದರ್ಬಾರು ಸ್ವರ್ಣಮಯ ಕಲಾ ಮಂಟಪದಲ್ಲಿ ನವದುರ್ಗೆಯರು ಹಾಗೂ ಗಣಪತಿ ದೇವರ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ, ನವರಾತ್ರಿ ಉತ್ಸವದ ವಿಶೇಷ ಆಕರ್ಷಣೆ ಹಾಗೂ 9 ದಿನಗಳ ಕಾಲ ವಿಶೇಷವಾಗಿ ಆರಾಧಿಸ್ಪಡುವ ಶಾರದಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಕುದ್ರೋಳಿ ಕ್ಷೇತ್ರದ ನವೀಕರಣದ ರುವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕಿ ಉಪಸ್ಥಿತಿಯಲ್ಲಿ ಮಂಗಳೂರು ದಸರಾ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಕುದ್ರೋಳಿ ಕ್ಷೇತ್ರದ ಅಂಗಣದಲ್ಲಿ ಪ್ರದಕ್ಷಿಣೆ ನಡೆಸಿ ದರ್ಬಾರು ಮಂಟಪಕ್ಕೆ ಚೆಂಡೆ, ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಶಾರದಾ ಮೂರ್ತಿಯನ್ನು ಹೊತ್ತು ತರಲಾಯಿತು. ದರ್ಬಾರು ಮಂಟಪದ ವೇದಿಕೆಯಲ್ಲಿ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ ದೀಪ ಬೆಳಗಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ಅಭಯಚಂದ್ರ ಜೈನ್, ಐವನ್ ಡಿಸೋಜಾ, ಕವಿತಾ ಸನಿಲ್, ಕ್ಷೇತ್ರದ ಅಧ್ಯಕ್ಷ ಎಚ್. ಎಸ್. ಸಾಯಿರಾಂ, ಉಪಾಧ್ಯಕ್ಷೆಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ್ ಪೂಜಾರಿ, ರವಿಶಂಕರ ಮಿಜಾರು, ಜಗದೀಪ್ ಡಿ. ಸುವರ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ. ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

'ಮಂಗಳೂರು ದಸರಾ ಅಜರಾಮರ': ಮುಂದಿನ ವರ್ಷ ನಾನಿರುವೆನೋ ಗೊತ್ತಿಲ್ಲ. ಆದರೆ ದಸರಾ ಮಹೋತ್ಸವ ಎಂದೆಂದಿಗೂ ಅದ್ದೂರಿಯಾಗಿ ನಡೆಯಲಿದೆ. ಇದು ಎಲ್ಲವೂ ದೇವರ ಕೃಪೆ. ಮಂಗಳೂರು ದಸರಾವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾಕ್ಕೆ ಚಾಲನೆ ನೀಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.

ಹುಲಿವೇಷ ಕುಣಿತದ ಸಡಗರ: 

ಮಂಗಳೂರು ದಸರಾದ ಮತ್ತೊಂದು ವಿಶೇಷ ಆಕರ್ಷಣೆ ಹುಲಿವೇಷ ಕುಣಿತ. ಪುಟ್ಟ ಮಕ್ಕಳು ಸೇರಿದಂತೆ ಹುಲಿವೇಷಧಾರಿಗಳ ತಂಡ ಪ್ರತಿಷ್ಠಾಪನೆಗೊಂಡ ಶಾರದಾ ಮಾತೆಯ ವಿಗ್ರಹದ ಎದುರು ಕುಣಿಯುವ ಮೂಲಕ ದಸರಾ ಸಂಭ್ರಮಕ್ಕೆ ಮೆರುಗು ನೀಡಿದರು. ದಸರಾ ಮಹೋತ್ಸವದ ಪ್ರಥಮ ದಿನದಂದೇ ಕ್ಷೇತ್ರದ ತುಂಬಾ ಭಕ್ತರ ಮಹಾಪೂರವೇ ಹರಿದು ಬಂದಿತ್ತು.

ಕೋವಿಡ್ ಹಿನ್ನಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ನಿಯಮ ಪಾಲನೆಯೊಂದಿಗೆ ಆಚರಿಸಲ್ಪಟ್ಟಿದ್ದ ಮಂಗಳೂರು ದಸರಾ ಈ ಬಾರಿ ಮತ್ತೆ ಹಿಂದಿನ ಸಡಗರದೊಂದಿಗೆ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News