ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಾವಳಿ ಪಾಲಿಸಲು ‘ದಾರಿ’ ಆಗ್ರಹ
ಮಂಗಳೂರು, ಅ.4: ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ‘ಇಂಡಿಯನ್ ರೋಡ್ ಕಾಂಗ್ರೆಸ್’ ನಿಯಮಗಳನ್ನು ಪಾಲಿಸಬೇಕು ಎಂದು ಮಂಗಳೂರಿನ ‘ದಾರಿ’ ಸಂಘಟನೆ ಆಗ್ರಹಿಸಿದೆ.
ಇತ್ತಿಚೀನ ದಿನಗಳಲ್ಲಿ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ನೆಪದಲ್ಲಿ ಜಾಹೀರಾತು ಗುತ್ತಿಗೆದಾರರು ಸಾರ್ವಜನಿಕ ಹಿತಾಸಕ್ತಿಯ ವಿರುದ್ದ ಬಸ್ ಬೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರಿಂದ ಅಮಾಯಾಕರ ಜೀವ ಬಲಿ ಪಡೆಯುವ ಸಾಧ್ಯತೆಗಳು ಇದೆ. ರಸ್ತೆ ಬದಿಯಲ್ಲಿ ಬಸ್ ನಿಲ್ದಾಣವಿದ್ದರೆ ಚಾಲಕ ಹಠಾತ್ ಬ್ರೇಕ್ ಹಾಕಿದರೆ ಹಿಂದೆ ಬರುವ ವಾಹನ ಢಿಕ್ಕಿ ಹೊಡೆಯುವುದು ನಿಶ್ಚಿತವಾಗಿದೆ.
ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಾವಳಿ ಹಾಗೂ ರಸ್ತೆ ಸುರಕ್ಷತೆ ವಿಧೇಯಕ ಮಂಡಿಸಿ ರಸ್ತೆ ಸುರಕ್ಷತೆಗೆ ತಕ್ಕ ಸೂಕ್ತ ನಿರ್ಧಾರ ಕೈಗೊಳ್ಳುವ ತೀರ್ಮಾನ ರಸ್ತೆ ಸಾರಿಗೆ ಅಯುಕ್ತರಿಗೆ ನೀಡಿದೆ. ರಾಜ್ಯ ಹೆದ್ದಾರಿ ರಸ್ತೆ ಬದಿಗಳಲ್ಲಿ ನಿಗದಿತ ರಸ್ತೆ ಮಾರ್ಜಿನ್ ಬಿಟ್ಟು ಬಸ್ ನಿಲ್ದಾಣ ಹಾಗೂ ರಿಕ್ಷಾ ಪಾರ್ಕ್ಗಳನ್ನು ನಿರ್ಮಿಸಲು ಸ್ಪಷ್ಟ ಸುತ್ತೋಲೆ ಇಲ್ಲದ ಕಾರಣ ಗ್ರಾಪಂ ಗುತ್ತಿಗೆ ಮಾಫಿಯಾ ಬಸ್ ಬೇ ಹಾಗೂ ರಿಕ್ಷಾ ಪಾರ್ಕಿಂಗ್ ನಿರ್ಮಾಣ ಮಾಡಲು ಹೊರಟಿರುವುದರಿಂದ ಇಲಾಖೆಯು ನೂರಾರು ಜನರ ಪ್ರಾಣದ ಜೊತೆ ಚೆಲ್ಲಾಟ ಮಾಡಲು ಮುಂದಾಗಿದೆ ಎಂದು ‘ದಾರಿ’ ಆರೋಪಿಸಿದೆ.
ಜಾಹೀರಾತು ಗುತ್ತಿಗೆದಾರ ಮಾಫಿಯಾಗಳು ಸಾರ್ವಜನಿಕ ಹಿತಾಸಕ್ತಿ ವಿರುದ್ಧ ಬಸ್ ಬೇ ನಿರ್ಮಾಣ ಮಾಡಲು ಹೊರಟಿರುವುದು ‘ಇಂಡಿಯನ್ ರೋಡ್ ಕಾಂಗ್ರೆಸ್’ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ ರಾಜ್ಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಗರಿಷ್ಠ ದೂರದಲ್ಲಿ ಬಸ್ ಬೇ ನಿರ್ಮಿಸಲು ಸರಕಾರ ಸುತ್ತೋಲೆ ಹೊರಡಿಸಬೇಕು ಎಂದು ‘ದಾರಿ’ ಆಗ್ರಹಿಸಿದೆ.