ಕೋಟೇಶ್ವರ: ಪುಷ್ಕರಣಿ ನೀರು ಕಲುಷಿತ; ಮೀನುಗಳ ಮಾರಣಹೋಮ

Update: 2022-10-06 14:53 GMT

ಕುಂದಾಪುರ, ಅ.6: ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿ ತೀರ್ಥ ಪುಷ್ಕರಣಿಯ ನೀರು ಕಲುಷಿತಗೊಂಡಿದ್ದು ಕೆಲವು ದಿನಗಳ ಅಂತರದಲ್ಲಿ ಹಲವು ಮೀನುಗಳು ಮೃತಪಟ್ಟಿವೆ. ಈ ಬಗ್ಗೆ ದೇವಸ್ಥಾನ ದವರು, ಸ್ಥಳೀಯಾಡಳಿತ ಹಾಗೂ ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮವಹಿಸಬೇಕೆಂದು ಸಾರ್ವ ಜನಿಕರು ಆಗ್ರಹಿಸಿದ್ದಾರೆ.

ಹಲವು ವರ್ಷಗಳ ಇತಿಹಾಸವಿರುವ ಕೋಟಿತೀರ್ಥ ಪುಷ್ಕರಣಿ ಸುಮಾರು 4 ಎಕರೆ ವಿಸ್ತೀರ್ಣ ಹೊಂದಿದ್ದು, ಈಶಾನ್ಯ ದಿಕ್ಕಿನಲ್ಲಿ ಕೊಳಚೆ ನೀರು ಹರಿದು ಬಂದು ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ನೀರು ವಿಪರೀತ ದುರ್ವಾಸನೆ ಬೀರುತ್ತಿದೆ. ಇದರ ಪರಿಣಾಮ ಕೆರೆಯಲ್ಲಿರುವ ಮೀನುಗಳು ಸಾಯುತ್ತಿದ್ದು ಕೆರೆಯ ನೀರಿನ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಪದರದಂತೆ ಕಂಡುಬರುತ್ತಿದೆ.

ಪುಷ್ಕರಣಿ ಈಶಾನ್ಯ ಭಾಗದಲ್ಲಿ ಚರಂಡಿಯೊಂದು ಹರಿಯುತ್ತಿದ್ದು ಅಲ್ಲಿಗೆ ಕೆಲವು ಉದ್ಯಮದವರು ಕಲುಷಿತ ನೀರನ್ನು ಬಿಡುತ್ತಿದ್ದಾರೆಂದು ಆರೋಪಿಸಲಾಗಿದೆ. ಈ ಚರಂಡಿಯಲ್ಲಿ ನೀರು ತುಂಬಿ ದೇವಸ್ಥಾನದ ಕೆರೆ, ನೆರೆಹೊರೆಯ ಪರಿಸರ, ಕೃಷಿಭೂಮಿಗೂ ನೀರು ನುಗ್ಗುತ್ತಿವೆ. ಅಲ್ಲದೇ ಸಮೀಪದ ಹದಿನೈದಕ್ಕೂ ಅಧಿಕ ಮನೆಗಳ ಬಾವಿಯ ನೀರು ಹಾಳಾಗುತ್ತಿವೆ ಎಂದು ಸ್ಥಳೀಯರಿಂದ ಆರೋಪ ಕೇಳಿ ಬಂದಿದೆ.

ಈ ಪುಷ್ಕರಣಿಯ ನೀರಿನಿಂದ ದೇವರಿಗೆ ಪ್ರತಿನಿತ್ಯ ಅಭಿಷೇಕ ಮಾಡಲಾಗುತ್ತಿದೆ. ಅಲ್ಲದೆ ಬರುವ ಭಕ್ತರು ಕೂಡ ಸ್ನಾನ ಹಾಗೂ ತೀರ್ಥ ಪ್ರೋತ್ಸಾಹ ಮಾಡುವ ಸಂಪ್ರದಾಯ ಕೂಡ ಇದ್ದು ಇದೀಗ ನೀರು ಸಂಪೂರ್ಣ ಕಲುಷಿತವಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಸ್ಥಳೀಯರು ಕೋಟೇಶ್ವರ ಗ್ರಾಪಂಗೆ ದೂರು ನೀಡಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಪಂನಿಂದ ಸ್ಥಳ ಪರಿಶೀಲನೆ

ಕೋಟಿತೀರ್ಥ ಪುಷ್ಕರಣಿ ಹಾಗೂ ಚರಂಡಿಯಲ್ಲಿ ಕಲುಷಿತ ನೀರು ಹರಿಯುವ ಸ್ಥಳಕ್ಕೆ ಕೋಟೇಶ್ವರ ಗ್ರಾಪಂ ಅಧ್ಯಕ್ಷ ಕೃಷ್ಣಗೊಲ್ಲ, ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ್, ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ, ಸುರೇಶ್ ದೇವಾಡಿಗ, ರಾಯ್ಸನ್ ಡಿಮೆಲ್ಲೂ, ರಾಜು ಮರಕಾಲ ಮತ್ತಿತ್ತರರು  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಸುರೇಶ್ ಕಾಮತ್, ಜಗನ್ನಾಥ್ ಭಟ್, ಡಾ.ಕೆ.ಸೋಮಶೇಖರ ಉಡುಪ ಮೊದಲಾದವರು ಮಾಹಿತಿ ನೀಡಿದರು.

"ಕೆರೆ ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಸ್ಥಳೀಯ ರಿಂದ ಗ್ರಾಪಂಗೆ ದೂರು ಬಂದಿದೆ. ದೂರಿನಲ್ಲಿ ಸ್ಥಳೀಯ ರೈಸ್ ಮಿಲ್ ನೀರು ಚರಂಡಿಗೆ ಬೀಡಲಾಗುತ್ತಿದೆ ಎಂಬ ದೂರುಗಳಿವೆ. ಆ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ ಸಂಬಂಧಪಟ್ಟವರನ್ನು ಕರೆಸಿ ಮಾಹಿತಿ ಪಡೆಯ ಲಾಗಿದ್ದು ಅವರು ತಮ್ಮ ಸಮಸ್ಯೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆಯನ್ನು ನೀರನ್ನು ಹೆಚ್ಚಿನ ಮಾಹಿತಿಗಾಗಿ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು".
-ಕೃಷ್ಣ ಗೊಲ್ಲ, ಅಧ್ಯಕ್ಷರು, ಕೋಟೇಶ್ವರ ಗ್ರಾಪಂ

"ಅವಿಭಜಿತ ದಕ್ಷಿಣ ಕನ್ನಡದಲ್ಲಿ ಪ್ರಸಿದ್ಧ ಕೋಟಿತೀರ್ಥ ಪುಷ್ಕರಣಿ ಇಂದು ಕಲುಷಿತವಾಗಿ ಜಲಚರಗಳು ಸಾಯುತ್ತಿರುವುದು ದುರಂತ. ಮಾನವನ ಬೇಜವಾಬ್ದಾರಿತನಕ್ಕೆ ಸಿಕ್ಕಿ ಆರೋಗ್ಯವೇ ಭಾಗ್ಯ ಎಂಬ ಪರಿಕಲ್ಪನೆ ಹಾದಿ ತಪ್ಪುತ್ತಿದೆ. ನಮ್ಮ ಮನೆ ಸಹಿತ ಅಕ್ಕಪಕ್ಕದ ಮನೆಗಳ ಬಾವಿ ನೀರು ಕಲುಷಿತಗೊಂಡಿದ್ದು ಇದೆಲ್ಲ ಸರಿಯಾಗಲು ಹಲವು ವರ್ಷಗಳೇ ಬೇಕಾಗಬಹುದು. ತಕ್ಷಣ ಸಂಬಂಧಪಟ್ಟವರು ಸೂಕ್ತ ಕ್ರಮವಹಿಸಬೇಕು.
-ಡಾ.ಕೆ.ಸೋಮಶೇಖರ್ ಉಡುಪ, ಸ್ಥಳೀಯರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News