ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಆರೋಪ; ವಾಹನ ವಶ

Update: 2022-10-06 16:40 GMT

ಉಪ್ಪಿನಂಗಡಿ: ವರ್ಷದ ಹಿಂದೆ ಶಿರಾಡಿಯ ಶಿಶಿಲ ಮೀಸಲು ಅರಣ್ಯದಿಂದ ಅಕ್ರಮವಾಗಿ ಹೆಬ್ಬಲಸು ಮರಗಳನ್ನು ಕಡಿದು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗಾಟಕ್ಕೆ ಬಳಸಿದ ವಾಹನವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ಎ. ನೇತೃತ್ವದ ತಂಡ ಮಡಿಕೇರಿಯ ಸಿದ್ದಾಪುರದಲ್ಲಿ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡಿದೆ.  

2021ರ ಆಗಸ್ಟ್ 18 ರಂದು ಶಿರಾಡಿ ಅರಣ್ಯದಿಂದ ಭಾರಿ ಗಾತ್ರದ ಮೂರು ಹೆಬ್ಬಲಸು ಮರಗಳು ಕಳವಾಗಿತ್ತು. ಕಳವಾದ ಈ ಮರಗಳನ್ನು ಕೋಲ್ಪೆಯ ಮನೆಯೊಂದರಿಂದ ವಶಕ್ಕೆ ಪಡೆಯಲಾಗಿತ್ತಲ್ಲದೆ, ಆರೋಪಿಗಳಾದ ರಝಾಕ್, ಸಿದ್ದೀಕ್, ಶರೀಫ್ ಎಂಬವರನ್ನು ಬಂಧಿಸಲಾಗಿತ್ತು. ಆದರೆ ಸಾಗಾಟಕ್ಕೆ ಬಳಸಿದ ಪಿಕಾಫ್ ವಾಹನ ಮಾತ್ರ ಪತ್ತೆಯಾಗಿರಲಿಲ್ಲ. ಇದರ ತನಿಖೆ ನಡೆಸುತ್ತಿರುವ ಮಧುಸೂಧನ್ ನೇತೃತ್ವದ ತಂಡ ಮಡಿಕೇರಿಯ ಸಿದ್ದಾಪುರದಲ್ಲಿ ಈ ವಾಹನ ಇರುವ ಕುರಿತು ಮಾಹಿತಿ ಕಲೆ ಹಾಕಿ, ಅಲ್ಲಿನ ವಲಯ ಅರಣ್ಯಾಧಿಕಾರಿ ಅಶೋಕ್‍ರವರ ಸಹಕಾರ ಪಡೆದು, ವಾಹನವನ್ನು ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಶಿರಾಡಿ ಉಪ ಅರಣ್ಯಧಿಕಾರಿ ಧೀರಜ್, ಅರಣ್ಯ ರಕ್ಷಕ ಸುನೀಲ್ ನಾಯ್ಕ, ಪ್ರಶಾಂತ್ ಮಾಳಗಿ, ನಿಂಗಪ್ಪ ಭಾಗವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News