ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಎಂ.ಅಬೂಬಕರ್ ನಿಧನ

Update: 2022-10-07 14:12 GMT

ಬಂಟ್ವಾಳ, ಅ.7:‌ ಕೊಳ್ನಾಡು ಗ್ರಾಮದ ಸುರಿಬೈಲು ನಿವಾಸಿ ಎಸ್.ಎಂ.ಅಬೂಬಕರ್ (60) ಅನಾರೋಗ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು. 

ಅವರು ಸುರಿಬೈಲ್ ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದರು. 

ಶಾಲೆಯ ಸುತ್ತಲೂ ಹೂದೋಟ, ತರಕಾರಿ, ಅಡಿಕೆ ಮರ ನೆಟ್ಟು ಅದರ ಪೋಷಣೆ ಮಾಡುತ್ತಿದ್ದರು. ಇವರ ಪರಿಶ್ರಮದಿಂದ ಈ ಶಾಲೆಗೆ ರಾಷ್ಟ್ರೀಯ ಪರಿಸರ ಪ್ರಶಸ್ತಿ ಸಹಿತ ಮೊದಲಾದ ಗೌರವಗಳು ದೊರಕಿದೆ. 

ಇವರ ಗಣನೀಯ ಸೇವೆಯನ್ನು ಗೌರವಿಸಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.‌ ರಾಜ್ಯ ಎಸ್.ಡಿ.ಎಂ‌.ಸಿ. ಸಮಿತಿಯಲ್ಲಿ ಪದಾಧಿಕಾರಿಯಾಗಿ, ಸುರಿಬೈಲು ಮಸೀದಿಯ ಆಡಳಿತ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೊಳ್ನಾಡು ಗ್ರಾಮ ಪಂಚಾಯತ್ ನಲ್ಲಿ ಎರಡು ಅವಧಿಯಲ್ಲಿ ಸದಸ್ಯರಾಗಿದ್ದರು. ಕೊಡುಗೈ ದಾನಿಯೂ ಆಗಿದ್ದರು. 

ಮೃತರು ಪತ್ನಿ, ಬಂಧು ಬಳಗವನ್ನು ಅಗಲಿದ್ದಾರೆ.‌ ಮಾಜಿ ಸಚಿವ ಬಿ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್,  ಕಾಂಗ್ರೆಸ್ ಪಂಚಾಯತ್ ರಾಜ್ ಸಮಿತಿಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ ಮೊದಲಾದವರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News