×
Ad

ಉತ್ತಮ ಸಾಹಿತ್ಯದಿಂದ ಸೃಜನಶೀಲ ಸಮಾಜ ನಿರ್ಮಾಣ ಸಾಧ್ಯ: ವಿ.‌ಸುಬ್ರಹ್ಮಣ್ಯ ಭಟ್

Update: 2022-10-08 20:28 IST

ವಿಟ್ಲ : ಉತ್ತಮ ಸಾಹಿತ್ಯದಿಂದ ಸೃಜನಶೀಲ ಸಮಾಜ ನಿರ್ಮಾಣ ಸಾಧ್ಯ, ಸಾಹಿತ್ಯದ ಚಿತ್ತ ಹಳ್ಳಿಯತ್ತ ಹೋದರೆ ಹೆಚ್ಚು ಸಾಹಿತ್ಯ ಕೃಷಿ ಆದೀತು.  ಮಕ್ಕಳಲ್ಲಿ ಸಾಹಿತ್ಯ ದ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಉಪನ್ಯಾಸಕ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ವಿ.‌ ಸುಬ್ರಹ್ಮಣ್ಯ ಭಟ್ ಹೇಳಿದರು.

ಅವರು ನೇರಳಕಟ್ಟೆಯ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಸಭಾವನದಲ್ಲಿ ಪಂಚಾಯತ್  ಸಹಯೋಗದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಬಂಟ್ವಾಳ ತಾಲೂಕು‌ ಘಟಕ ಮತ್ತು ಪುತ್ತೂರಿನ  ಚಿಗುರೆಲೆ ಸಾಹಿತ್ಯ ಬಳಗ ವತಿಯಿಂದ ʼಹಳ್ಳಿಯತ್ತ ಸಾಹಿತ್ಯ ಚಿತ್ತʼ ಅಂಗವಾಗಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು.

ಹೆಚ್ಚು ಅಧ್ಯಯನಶೀಲರಾಗಿ ಬರೆಯಿರಿ. ‌ಕೃತಿಚೌರ್ಯ ಮಾಡದಿರಿ. ಆರೋಗ್ಯ ‌ಪೂರ್ಣ ಸಮಾಜ ನಿರ್ಮಾಣಕ್ಕೆ ಸಾಹಿತ್ಯದ ಕೊಡುಗೆ ಇರಲಿ ಎಂದರು. ಈ ಸಂದರ್ಭದಲ್ಲಿ ಅವರು ಕವಿತೆ, ಚುಟುಕುಗಳನ್ನು ಉದಾಹರಣೆ ನೀಡಿ ಸಾಹಿತ್ತಾಸಕ್ತರಲ್ಲಿ ಉತ್ತೇಜನ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ  ಮಾತನಾಡಿ ಸಾಹಿತ್ಯ  ಮತ್ತು ಸಾಹಿತ್ಯ ಸಂಘಟನೆಗಳಿಗೆ ನಿರಂತರ ಪ್ರೋತ್ಸಾಹ ಇದೆ, ಸಾಹಿತ್ಯ ಪರಿಷತ್ತು ಜನಾಭಿಮುಖವಾಗಿ ಇದ್ದು ಸಾಹಿತಿಗಳ ಜತೆ ಸದಾ ಇದೆ ಎಂದರು. ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಡೊಂಬಯ್ಯ ಇಡ್ಕಿದು ಮಾತನಾಡಿ ಕವಿತೆಗೆ ನಿಖರವಾದ ವಿವರಣೆಯೊಂದು ಇರುವುದಿಲ್ಲ. ಹಿಂದಿನ ಕಾಲದಲ್ಲಿ ಕವಿತೆಯ ವಸ್ತುಗಳು ಹೀಗಿರಬೇಕು, ಕವಿತೆ ಛಂದೋಬದ್ಧ, ಅದರಲ್ಲಿ ಉಪಮೆ, ರೂಪಕ ಅಲಂಕಾರಗಳಿರಬೇಕು, ಪ್ರಾಸಗಳಿರಬೇಕು, ಮಧುರ ಭಾವನೆಗಳು ಮತ್ತು ಲಯಗಳಿರಬೇಕು ಎಂಬ ಸೂತ್ರಗಳಿದ್ದವು ಇಂದು ಪ್ರಾಸಗಳನ್ನು ಬಳಸಿ ಬರೆದರೆ ಅದು ಇಂದಿನ ಕಾಲಕ್ಕೆ  ಹೊಂದುವುದಿಲ್ಲ ಎಂದ ಅವರು ಕವನದಲ್ಲಿ ರೂಪಕಗಳ ಮೇಲೆ ರೂಪಕಗಳನ್ನು ತಂದರೆ ಅದೂ ಬಹಳ ಕೃತಕವಾಗಿ ಅನಿಸುತ್ತದೆ. ಮುಕ್ತಛಂದಕ ವನ್ನು ಬಹಳ ಕಲಾತ್ಮಕವಾಗಿ ಬಳಸಿದ ಟಿ.ಎಸ್‌. ಎಲಿಯಟ್ಟ, ಛಂದೋಬದ್ಧವಾಗಿ ಬರೆದ ಶೇಕ್ಸ್‌ಪಿಯರ್‌  ಛಂದೋಬದ್ಧತೆ ಯನ್ನು ಆಗಾಗ ಮೀರುವುದರಲ್ಲೇ  ಖುಷಿಯನ್ನು ಕಂಡುಕೊಂಡವರು ಎಂದರು.

ವೇದಿಕೆಯಲ್ಲಿ ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷ ಸತೀಶ್ ಪೂಜಾರಿ, ರಂಗ ಕಲಾವಿದೆ ವಸಂತಲಕ್ಷ್ಮೀ, , ದೀಪ್ತಿ ಅಡ್ಡಂತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ, ಕಸಾಪ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ವಿಟ್ಲ ಹೋಬಳಿ ಕಸಾಪ ಅಧ್ಯಕ್ಷ, ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು,  ಮತ್ತಿತರರು ಭಾಗವಹಿಸಿದ್ದರು. ಸುಮಾರು 30ಕ್ಕೂ ಹೆಚ್ಚು ಕವಿಗಳು ಕವನ ಪ್ರಸ್ತುತ ಪಡಿಸಿದರು.

ಸುಪ್ರೀತಾ ಚರಣ್ ಪಾಲಪ್ಪೆ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ಸ್ವಾಗತಿಸಿ,  ಶಶಿಧರ್ ಏಮಾಜೆ ಪ್ರಾಸ್ತಾವನೆಗೈದರು. ತುಳಸಿ ಕೈರಂಗಳ  ಸಭಾ ಕಾರ್ಯಕ್ರಮ ನಿರೂಪಿಸಿದರು ರಾಧಾಕೃಷ್ಣ ಎರುಂಬು ಮತ್ತು ಕು. ಅನ್ನಪೂರ್ಣ ಎನ್. ಕೆ. ಕವಿಗೋಷ್ಠಿ ನಿರೂಪಣೆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News