×
Ad

ಬೆಳ್ತಂಗಡಿ: ಭೂಮಿ ಹಕ್ಕಿಗಾಗಿ ಹೋರಾಟದ ಸಂಕಲ್ಪ; ಅತಿಕ್ರಮಿತ ಡಿಸಿ ಮನ್ನಾ ಜಮೀನಿನಲ್ಲಿ ಸಭೆ

Update: 2022-10-12 11:24 IST

ಬೆಳ್ತಂಗಡಿ, ಅ. 12: ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಪರಿಶಿಷ್ಠ ಜಾತಿ/ಪಂಗಡಕ್ಕೆ ಮೀಸಲಿಟ್ಟ ಡಿ.ಸಿ. ಮನ್ನಾ ಭೂಮಿಯನ್ನು ಸ್ಥಳೀಯ ಭೂಮಾಲಕನೋರ್ವ ಅತಿಕ್ರಮಣ ಮಾಡಿಕೊಂಡಿದ್ದನ್ನು ವಿರೋಧಿಸಿ ಅದೇ ಜಮೀನಿನಲ್ಲಿ ಸಮಾಲೋಚನಾ ಸಭೆಯನ್ನು ನಡೆಸಲಾಯಿತು.

ದಸಂಸ (ಅಂಬೇಡ್ಕರ್ ವಾದ) ಕಳೆಂಜ ಗ್ರಾಮ ಶಾಖೆಯ ನೇತೃತ್ವದಲ್ಲಿ ನಡೆದ ಕೊಕ್ಕಡ ವಲಯ ಮಟ್ಟದ "ನಮ್ಮ ಭೂಮಿ, ನಮ್ಮ ಹಕ್ಕು" ಹಕ್ಕೊತ್ತಾಯ ಸಭೆ ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ದಸಂಸ (ಅಂಬೇಡ್ಕರ್ ವಾದ) ತಾಲೂಕು ಪ್ರಧಾನ ಸಂಚಾಲಕರಾದ ಕೆ.ನೇಮಿರಾಜ್ ಕಿಲ್ಲೂರು ಮಾತನಾಡಿ, ದಲಿತರು ತಮ್ಮ ಹಕ್ಕಿನ ಭೂಮಿ ಪಡೆಯಲು ಅನೇಕ ಚಳುವಳಿಗಳ ಮೂಲಕ ನಿರಂತರ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಸರಕಾರಗಳಿಗೆ ಮನವಿಗಳನ್ನು ಸಲ್ಲಿಸಿ ಸಾಕಾಗಿದೆ. ಇನ್ನೂ ಹೋರಾಟ ಮಾತ್ರ ನಮ್ಮ ಮುಂದಿರುವ ದಾರಿ. ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆಯೊಂದಿಗೆ ನಮ್ಮ ಹಕ್ಕಿನ ಭೂಮಿಯನ್ನು ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು ತಾಲೂಕಿನ 81  ಗ್ರಾಮಗಳಲ್ಲಿಯೂ ಭೂಮಿಗಾಗಿ ಹೋರಾಟ ನಡೆಸಲಾಗುತ್ತದೆ ಎಂದರು.

ಸಭೆಯನ್ನುದ್ದೇಶಿಸಿ ರಾಜ್ಯ ಸಂಘಟನಾ ಸಂಚಾಲಕರಾದ ಚಂದು ಎಲ್ ಮಾತನಾಡುತ್ತಾ ಸ್ವಾತಂತ್ರ್ಯದ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ತುಂಡು ಭೂಮಿಗಾಗಿ ಹೋರಾಟ ನಡೆಸಬೇಕಾದ ದುರಂತ ಪರಿಸ್ಥಿತಿ ನಮ್ಮ ಮುಂದಿದೆ. ನಮ್ಮ ಹಕ್ಕಿನ ಭೂಮಿಗಾಗಿ ಸಂಘರ್ಷಮಯ ಹೋರಾಟ ಅನಿವಾರ್ಯವಾಗಿದೆ. ಭೂಮಿಯ ವಿಚಾರದಲ್ಲಿ ಯಾವುದೇ ತ್ಯಾಗಮಯ ಹೋರಾಟಕ್ಕೆ ಸಂಘಟನೆ ಸದಾ ಸಿದ್ಧವಿದೆ ಎಂದರು.

ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ.ವಸಂತ್, ತಾಲೂಕು ಸಂಘಟನಾ ಸಂಚಾಲಕ, ಮಾಜಿ ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ  ಸಭೆಯನ್ನುದ್ದೇಶಿಸಿ  ಮಾತನಾಡಿದರು.

ಸಭೆಯಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ಜಯಾನಂದ ಕೊಯ್ಯೂರು, ನಾರಾಯಣ ಪುದುವೆಟ್ಟು,  ವೇಣೂರು ಹೋಬಳಿ ಸಂಚಾಲಕರಾದ ವಿಜಯ್ ಬಜಿರೆ, ಮುಖಂಡರಾದ ಶಂಕರ್ ಮಾಲಾಡಿ, ಆನಂದ ನೆಲ್ಲಿಂಗೇರಿ, ಗ್ರಾಮ ಸಂಚಾಲಕರುಗಳಾದ ದಿನೇಶ್ ಶಿಬಾಜೆ, ಶ್ರೀಧರ್ ಕುಕ್ಕೇಡಿ, ಸೋಮ ಪುದುವೆಟ್ಟು, ತಾಲೂಕು ನಲಿಕೆ ಸೇವಾ ಸಂಘದ ಅಧ್ಯಕ್ಷರಾದ ಪ್ರಭಾಕರ ಶಾಂತಿಗೋಡಿ, ಸುರೇಶ್  ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕೋಶಾಧಿಕಾರಿ ಶ್ರೀಧರ್ ಎಸ್ ಕಳೆಂಜ ವಹಿಸಿದ್ದರು.

ಅಜಯ್ ಸ್ವಾಗತಿಸಿ, ಸುರೇಶ್ ವಂದಿಸಿದರು.

"ಹಲವಾರು ವರ್ಷಗಳಿಂದ ಡಿಸಿ ಮನ್ನಾ ಜಮೀನಿಗಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೋರಾಟಗಳನ್ನು ನಡೆಸಲಾಗಿತ್ತು. ಮನವಿ, ಕಂದಾಯ, ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಮನವಿಗಳು ಕಸದ ಬುಟ್ಟಿ ಸೇರುತ್ತಿತ್ತು. ಇದೀಗ ಅಂತಿಮವಾಗಿ ಅತಿಕ್ರಮಿತ ಡಿಸಿ ಮನ್ನಾ ಜಮೀನಿನನ್ನು ಸಂಘರ್ಷಮಯ ಹೋರಾಟದ ಮೂಲಕ ಪಡೆಯುವುದು ಅನಿವಾರ್ಯವಾಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯತೆಯಿಂದಾಗಿ ಕಾನೂನು ಭಂಗ ಚಳವಳಿಯಿಂದ ಆಗುವ ಎಲ್ಲಾ ಕಷ್ಟನಷ್ಟಗಳಿಗೆ ಜಿಲ್ಲಾಡಳಿತ ನೇರ ಹೊಣೆಯಾಗಬೇಕು"

- ಶ್ರೀಧರ್ ಎಸ್ ಕಳೆಂಜ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News