ಆನೇಕಲ್ ತಾಲೂಕಿನ 67 ಎಕರೆ ಗೋಮಾಳ ಒತ್ತುವರಿ ತೆರವಿಗೆ ಹೈಕೋರ್ಟ್ ಆದೇಶ

Update: 2022-10-18 15:08 GMT

ಬೆಂಗಳೂರು, ಅ.18: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯ ಕಾಚರನಾಯಕನಹಳ್ಳಿಯಲ್ಲಿ ಖಾಸಗಿಯವರಿಂದ ಒತ್ತುವರಿಯಾಗಿರುವ 67 ಎಕರೆ ಗೋಮಾಳ ಜಮೀನನ್ನು ತೆರವು ಮಾಡಿ ಮುಂದಿನ ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್, ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. 

ಗೋಮಾಳ ಜಮೀನು ಒತ್ತುವರಿ ಮಾಡಿಕೊಂಡಿರುವ ಕುರಿತಂತೆ ಕಾಚರನಾಯಕನಹಳ್ಳಿಯ ನಿವಾಸಿ ಎನ್.ಜಯಪಾಲರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿದೆ. 

ಸರಕಾರದ ಪರ ವಕೀಲರು, ಆನೇಕಲ್ ತಹಶೀಲ್ದಾರ್ ಸಲ್ಲಿಸಿದ್ದ ಪ್ರಮಾಣ ಪತ್ರ ಸಲ್ಲಿಸಿ 67 ಎಕರೆ ಜಮೀನು ಒತ್ತುವರಿ ಮಾಡಲಾಗಿದೆ. ಅಲ್ಲದೆ, 306 ಮನೆಗಳನ್ನು ನಿಮಾಣ ಮಾಡಲಾಗಿದೆ. ಈಗಾಗಲೇ 30 ಮನೆಗಳ ತೆರವು ಮಾಡಲಾಗಿದೆ. ಉಳಿದಂತೆ ಇತರೆ ಮನೆಗಳನ್ನು ತೆರವುಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಮುಂದಿನ ಮೂರು ತಿಂಗಳಲ್ಲಿ ಗೋಮಾಳ ಜಮೀನು ಮತ್ತು ಎಲ್ಲ ಮನೆಗಳನ್ನು ತೆರವುಗೊಳಿಸಬೇಕು. ಆ ಬಳಿಕ ಆದೇಶದ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು 2023ರ ಜನವರಿಗೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News