ಅ. 24: ಡಾ. ಎಂ.ಎನ್.ರಾಜೇಂದ್ರ ಕುಮಾರ್‌ಗೆ ಅಭಿನಂದನಾ ಸಮಾರಂಭ

Update: 2022-10-20 17:40 GMT

ಪುತ್ತೂರು: 2ನೇ ಬಾರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಅ.24ರಂದು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರುಗಲಿದೆ ಎಂದು ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ. 

ಅ.24ರಂದು ಬೆಳಗ್ಗೆ ದರ್ಬೆಯಿಂದ ಬಂಟರ ಭವನದ ತನಕ ಕೊಂಚಾಡಿಯ ಚೆಂಡೆ, ನಾಸಿಕ್ ಬ್ಯಾಂಡ್‍ನ ಸದ್ದಿನೊಂದಿಗೆ ಸುಮಾರು 250ಕ್ಕೂ ಮಿಕ್ಕಿ ವಾಹನಗಳೊಂದಿಗೆ ಮೆರವಣಿಗೆ ನಡೆಯಲಿದೆ. ಇದರಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಉದಯವಾಗಲು ಕಾರಣಕರ್ತರಾದ ಸಹಕಾರಿ ಪಿತಾಮಹಾ ಮೊಳಹಳ್ಳಿ ಶಿವರಾಯರವರ ಪ್ರತಿಮೆಯನ್ನು ಮೆವಣಿಗೆಯ ಆರಂಭದಲ್ಲಿ ಮತ್ತು ಅದರ ಹಿಂದೆ ಸನ್ಮಾನಗೊಳ್ಳಲಿರುವ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಶಾಸಕ ಸಂಜೀವ ಮಠಂದೂರು ಅವರನ್ನು ತೆರೆದ ವಾಹನದಲ್ಲಿ ಸ್ವಾಗತಿಸಲಾಗುವುದು. ರಸ್ತೆಯ ಇಕ್ಕೆಲದಲ್ಲಿ ವಿವಿಧ ಸಹಕಾರಿ ಸಂಘಗಳಿಂದ ಬ್ಯಾನರ್ ಅಳವಡಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ.

ಬಳಿಕ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನಾ ಸಮಾರಂಭ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಲಿದ್ದಾರೆ.

ಮೀನುಗಾರಿಕಾ ಮತ್ತು ಬಂದರು ಖಾತೆ ಸಚಿವ ಎಸ್ ಅಂಗಾರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಐಖಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭವು ಮಧ್ಯಾಹ್ನದ ತನಕ ನಡೆಯಲಿದ್ದು, ಮಧ್ಯಾಹ್ನ ಭೋಜನದ ವ್ಯವಸ್ಥೆಯಿದೆ. ಈಗಾಗಲೇ ಸುಮಾರು 2,500 ಮಂದಿ ಸಹಕಾರಿಗಳು ಕಾರ್ಯಕ್ರಮಕ್ಕೆ ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದನಾ ಸಮಿತಿ ಸಂಚಾಲಕರಾದ ಕೆಎಮ್‍ಎಫ್ ಮಹಾಮಂಡಲದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಕಾರ್ಯದರ್ಶಿ ಚಂದ್ರಶೇಖರ್ ಪಿ, ಸದಸ್ಯ ಜಯ ಪ್ರಕಾಶ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಕೆ.ರತ್ನ ಕುಮಾರ್ ಉಪಸ್ಥಿತರಿದ್ದರು.
ಬೆಳ್ಳಿಯ ಕಿರೀಟ, ವಿಗ್ರಹ ಸಮರ್ಪಣೆ
ನ್ಮಾನದ ಸಂದರ್ಭದಲ್ಲಿ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸ3 ಕೆ.ಜಿಯಲ್ಲಿ ನಿರ್ಮಾಣಗೊಂಡ ಬೆಳ್ಳಿಯ ಕಿರೀಟ ತೊಡಿಸಿ, ಬೆಳ್ಳಿಯ ಗಣಪತಿ ವಿಗ್ರಹವನ್ನು ಸಮರ್ಪಣೆ ಮಾಡಲಿದ್ದೇವೆ. ಜೊತೆಗೆ 5 ಅಡಿ 6 ಇಂಚು ಎತ್ತರದ ಸನ್ಮಾನ ಪತ್ರದ ಫಲಕ, ಬೆತ್ತದ ಬುಟ್ಟಿಯಲ್ಲಿ ತುಂಬಾ ಫಲವಸ್ತುಗಳು, ಮಹಾಲಿಂಗೇಶ್ವರ ದೇವರ ಬ್ರಹ್ಮರಥ ಮತ್ತು ರಾಷ್ಟ್ರ ಲಾಂಛನದ ನಡುವೆ ಅವರ ಭಾವಚಿತ್ರವಿರುವ ಫಲಕವನ್ನು ಅರ್ಪಿಸಲಿದ್ದೇವೆ 
- ಶಶಿಕುಮಾರ್ ರೈ  ಬಾಲ್ಯೊಟ್ಟು, ಅಧ್ಯಕ್ಷರು, ಸನ್ಮಾನ ಸಮಿತಿ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News