ಕೇರಳ ನರಬಲಿ ಪ್ರಕರಣ ಕುರಿತು ಪರೋಕ್ಷವಾಗಿ ಆರೆಸ್ಸೆಸ್‌ ಅನ್ನು ಟೀಕಿಸಿದ ಸಚಿವೆ

Update: 2022-10-21 13:24 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ದೇಶಾದ್ಯಂತ ಆಘಾತ ಸೃಷ್ಟಿಸಿದ್ದ ಕೇರಳ ನರಬಲಿ ಪ್ರಕರಣದ ಕುರಿತಂತೆ  ರಾಜ್ಯದ ಸಾಮಾಜಿಕ ನ್ಯಾಯ ಸಚಿವೆ ಡಾ. ಆರ್‌ ಬಿಂದು ತಮ್ಮ ಕುತೂಹಲಕಾರಿ ಹೇಳಿಕೆಯೊಂದಿಗೆ ಆರೆಸ್ಸೆಸ್‌ ಅನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ʻʻಜಾಗತೀಕರಣ ಹಾಗೂ ಟೊಳ್ಳು ಮತ್ತು ಪುರೋಗಾಮಿ ಮೌಲ್ಯ ವ್ಯವಸ್ಥೆಗಳನ್ನು ಮರಳಿ ತರಲು ಕೆಲ ತೀವ್ರಗಾಮಿ ಶಕ್ತಿಗಳು ನಡೆಸುತ್ತಿರುವ ಪ್ರಯತ್ನದಿಂದ ಉಂಟಾದ ಹತಾಶೆಯ ಪರಿಣಾಮ ಇದಾಗಿರಬಹುದು,ʼʼ ಎಂದು ಅವರು ಹೇಳಿದ್ದಾರೆ.

ಪುರೋಗಾಮಿ ಮೌಲ್ಯ ವ್ಯವಸ್ಥೆಗಳನ್ನು ಯಾರು  ಜಾರಿಗೆ ತರಲು ಯತ್ನಿಸುತ್ತಿದ್ದಾರೆ, ಆರೆಸ್ಸೆಸ್‌ ಬಗ್ಗೆ ಹೇಳುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ʻʻಹೌದು, ಅವರು ಮಾಡುತ್ತಿರುವ ಕೆಲಸದ ಪರಿಣಾಮ ಕೇರಳದಲ್ಲಿ ಮಾತ್ರವಲ್ಲ ಎಲ್ಲೆಡೆ ಅನುಭವವಾಗುತ್ತಿದೆ. ಅದನ್ನು ಭಯದಿಂದ ನಾವು ಗಮನಿಸುತ್ತಿದ್ದೇವೆ, ಕೇರಳ ಒಂದು ಪ್ರಗತಿಪರ ರಾಜ್ಯ, ಇಂತಹ ಯತ್ನಗಳ ವಿರುದ್ಧ ಹೋರಾಡುತ್ತದೆ,ʼʼಎಂದು ಅವರು ಹೇಳಿದರು.

ಇಂತಹ ಘಟನೆಗಳು ಕೇರಳದಲ್ಲಿ ಮಾತ್ರವಲ್ಲ ದೇಶದ ಹಲವೆಡೆ ನಡೆಯುತ್ತಿದ್ದರೂ ಕೇರಳದ ಜನತೆ ಹೆಚ್ಚು ಜಾಗೃತರಾಗಿರುವುದರಿಂದ ಅದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ʻʻದೇಶದ ಕೆಲ ರಾಜ್ಯಗಳಲ್ಲಿ ಅಂಧಶ್ರದ್ಧೆ ವ್ಯಾಪಕವಾಗಿದ್ದರೂ ಇಂತಹ ಘಟನೆಗಳು ನಡೆದಾಗ ಯಾರಿಗೂ ತಿಳಿಯುವುದಿಲ್ಲ,ʼʼಎಂದು ಅವರು ಹೇಳಿದ್ದಾರೆ.

ʻʻಭಾರತದಲ್ಲಿ ಆಳವಾಗಿ ಬೇರೂರಿರುವ ಅಂಧಶ್ರದ್ಧೆ ಮತ್ತು ಆಚಾರಗಳಿವೆ ಹಾಗೂ  ಕೆಲ ಜನರು ಪುರೋಗಾಮಿ ಪದ್ಧತಿಗಳನ್ನು ಮತ್ತೆ ವಾಪಸ್‌ ತರಲು ಯತ್ನಿಸುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ, ಕೇರಳದಲ್ಲಿ ಮಾತ್ರವಲ್ಲ, ಹಿಂಸೆ ಬರ್ಬರತೆಯ ಘಟನೆಗಳು ಹೆಚ್ಚಾಗುತ್ತಿವೆ,ʼʼ ಎಂದು ಅವರು ಹೇಳಿದರು.

ʻʻಜಾಗತೀಕರಣವು ಕೆಲವೊಂದು ಸಮಸ್ಯೆ ಸೃಷ್ಟಿಸುತ್ತದೆ ಹಾಗೂ ಸುಲಭದಲ್ಲಿ ಹಣ ಮಾಡುವ ವಿಧಾನದ ಬಗ್ಗೆ ಜನರು ಯೋಚಿಸುತ್ತಾರೆ. ಕೆಲ ಜನರು ಭ್ರಮೆಗಳನ್ನೇ ನಂಬಿ ಬಿಡುತ್ತಾರೆ ಹಾಗೂ ನರಬಲಿ ಶ್ರೀಮಂತಿಕೆ ಕೊಡುತ್ತದೆ ಅಂದುಕೊಳ್ಳುತ್ತಿದ್ದಾರೆ. ಇಂತಹ ಅಪರಾಧಗಳನ್ನು ನಡೆಸಲು ಅಂತಹ ಆಶ್ವಾಸನೆಗಳನ್ನು ಜನರಿಗೆ ನೀಡುತ್ತಾರೆ,ʼʼ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News